ETV Bharat / state

ಶಾಸಕ ನೆಹರೂ ಓಲೇಕಾರ ಅನರ್ಹಗೊಳಿಸುವಂತೆ ಬಿಜೆಪಿ ಕಾರ್ಯಕರ್ತನಿಂದ ವಿಧಾನಸಭೆ ಕಾರ್ಯದರ್ಶಿಗೆ ದೂರು

author img

By

Published : Mar 28, 2023, 4:40 PM IST

ನಕಲಿ ದಾಖಲೆ ಸೃಷ್ಟಿಸಿ 5.35 ಕೋಟಿ ರೂ. ಪಡೆದು ಸರ್ಕಾರಕ್ಕೆ ನಷ್ಟ ಮಾಡಿದ್ದ ಆರೋಪದಡಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನೆಹರೂ ಓಲೇಕಾರ ಎರಡು ವರ್ಷ ಶಿಕ್ಷೆ ವಿಧಿಸಿದೆ. ಜನಪ್ರತಿನಿಧಿಗಳ ಕಾಯ್ದೆಯಡಿ ನೆಹರೂ ಓಲೇಕಾರ್ ಶಾಸಕ ಸ್ಥಾನ ಅನರ್ಹಗೊಳಿಸುವಂತೆ ಬಿಜೆಪಿ ಕಾರ್ಯಕರ್ತ ಸಂತೋಷ್ ರೆಡ್ಡಿ ದೂರು ನೀಡಿದ್ದಾರೆ.

bjp worker complaint to assembly secretary
ಬಿಜೆಪಿ ಕಾರ್ಯಕರ್ತನಿಂದ ವಿಧಾನಸಭೆ ಕಾರ್ಯದರ್ಶಿಗೆ ದೂರು

ಬೆಂಗಳೂರು: ಕ್ರಿಮಿನಲ್ ಪ್ರಕರಣದಲ್ಲಿ ಎರಡು ಶಿಕ್ಷೆಗೆ ಒಳಗಾದ ಬಿಜೆಪಿ ಶಾಸಕ ನೆಹರೂ ಓಲೇಕಾರ ಅವರನ್ನು ಅನರ್ಹಗೊಳಿಸುವಂತೆ ಬಿಜೆಪಿ ಕಾರ್ಯಕರ್ತನೊಬ್ಬರು ರಾಜ್ಯಪಾಲರು, ವಿಧಾನಸಭೆ ಕಾರ್ಯದರ್ಶಿಗೆ ದೂರು ನೀಡಿದ್ದಾರೆ.

ಹಾವೇರಿಯ ಬಿಜೆಪಿ ಕಾರ್ಯಕರ್ತ ಸಂತೋಷ್ ರೆಡ್ಡಿ ಎಂಬವರು ದೂರು ನೀಡಿದ್ದಾರೆ. ನೆಹರು ಓಲೇಕಾರ ಅನರ್ಹತೆಗೆ ಒತ್ತಾಯಿಸಿ ರಾಜ್ಯಪಾಲರು, ವಿಧಾನಸಭೆ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ, ಸಿಎಂ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗೆ ದೂರು ನೀಡಿದ್ದಾರೆ.

ಕಳೆದ ಫೆಬ್ರವರಿ 13ರಂದು ಜನಪ್ರತಿನಿಧಿಗಳ ನ್ಯಾಯಾಲಯದಿಂದ ಎರಡು ವರ್ಷ ಶಿಕ್ಷೆ ಪ್ರಕಟಿಸಿತ್ತು. ಈ ಶಿಕ್ಷೆಯ ಆದೇಶಕ್ಕೆ ಇನ್ನೂ ಹೈಕೋರ್ಟ್ ನಿಂದ ತಡೆಯಾಜ್ಞೆ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ಕಾಯ್ದೆಯಡಿ ನೆಹರೂ ಓಲೇಕಾರ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಮನವಿ ಮಾಡಿದ್ದಾರೆ.

ದೂರಿನಲ್ಲೇನಿದೆ ? ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ನೆಹರೂ ಓಲೇಕಾರ ಅವರಿಗೆ ಫೆ.13ರಂದು ನ್ಯಾಯಾಲಯ ಎರಡು ವರ್ಷದ ಸಜೆ ನೀಡಿತ್ತು. ಓಲೇಕಾರ್ ಈ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್​ಗೆ ಮೊರೆ ಹೋಗಿದ್ದಾರೆ. ಆದರೆ ಹೈಕೋರ್ಟ್ ಸಿವಿಲ್‌ ಕೋರ್ಟ್ ನೀಡಿದ್ದ ಸಜೆಗೆ ತಡೆಯಾಜ್ಞೆ ನೀಡಿಲ್ಲ. ಜನಪ್ರತಿನಿಧಿಗಳ ಕಾಯ್ದೆಯಡಿ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಹಿನ್ನೆಲೆ ನೆಹರೂ ಓಲೇಕಾರರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ತಮ್ಮಲ್ಲಿ ಮನವಿ ಮಾಡುತ್ತೇನೆ ಎಂದು ಸ್ಪೀಕರ್ ಕಾಗೇರಿ ಅವರಿಗೆ ದೂರಿನಲ್ಲಿ ಕೋರಿದ್ದಾರೆ. ರಾಹುಲ್ ಗಾಂಧಿ, ಮೋದಿ ಉಪನಾಮದ ಸಂಬಂಧ ನೀಡಿದ್ದ ಹೇಳಿಕೆ ಸಂಬಂಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಡಿ ಸೂರತ್ ನ್ಯಾಯಾಲಯ ಅವರಿಗೆ ಎರಡು ವರ್ಷದ ಸಜೆ ನೀಡಿತ್ತು‌. ಈ ಹಿನ್ನೆಲೆ ನಿಯಮದಂತೆ ರಾಹುಲ್ ಗಾಂಧಿ ಅವರ ಸಂಸದ ಸ್ಥಾನವನ್ನು ಲೋಕಸಭೆ ಸ್ಪೀಕರ್ ಅನರ್ಹಗೊಳಿಸಿದ್ಧರು. ಈ ಅನರ್ಹತೆ ದೇಶಾದ್ಯಂತ ರಾಜಕೀಯ ಚರ್ಚೆಗೆ ಕಾರಣವಾಗಿದೆ.

ಇದು ಬಿಜೆಪಿಯ ದ್ವೇಷ ರಾಜಕಾರಣ ಆಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಇದೀಗ ರಾಜ್ಯದಲ್ಲಿ ಬಿಜೆಪಿ ಶಾಸಕ ನೆಹರೂ ಓಲೇಕಾರಗೆ ಕ್ರಿಮಿನಲ್ ಪ್ರಕರಣವೊಂದರಲ್ಲಿ ಎರಡು ವರ್ಷ ಸಜೆ ಆದರೂ ಶಾಸಕ ಸ್ಥಾನದಿಂದ ಅನರ್ಹಗೊಳಿಸದ ಸಂಬಂಧ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ. ರಾಜ್ಯ ಕೈ ನಾಯಕರು ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

ಇದಕ್ಕೆ ಪೂರಕವಾಗಿ ಈಗ ಬಿಜೆಪಿಯ ಕಾರ್ಯಕರ್ತನೇ ನೆಹರೂ ಓಲೇಕಾರ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಸ್ಪೀಕರ್, ರಾಜ್ಯಪಾಲ, ಸಿ ಎಂ ಬೊಮ್ಮಾಯಿ‌ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ದೂರು ನೀಡಿದ್ದಾರೆ.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶಿಕ್ಷೆ ಏನು ?: 2008-13ರ ವರೆಗೆ ಶಾಸಕರಾಗಿದ್ದ ಅವಧಿಯಲ್ಲಿ ನೆಹರು ಓಲೇಕಾರ್ ಅವರು ಹಾವೇರಿ ನಗರಸಭೆಯ ಕಾಮಗಾರಿಗಳನ್ನು ತಮ್ಮ ಕುಟುಂಬಸ್ಥರಿಗೆ ಗುತ್ತಿಗೆ ಕೊಡಿಸಿದ್ದರು. ಐದು ಕಾಮಗಾರಿ ನಡೆಸದಿದ್ದರೂ, ಕಾಮಗಾರಿಗಳು ನಡೆದಿವೆ ಎಂದು ನಕಲಿ ದಾಖಲೆ ಸೃಷ್ಟಿಸಿ, ಒಟ್ಟು 5.35 ಕೋಟಿ ರೂ. ಪಡೆದು ಸರ್ಕಾರಕ್ಕೆ ನಷ್ಟ ಮಾಡಿದ್ದಾರೆ.

ಜತೆಗೆ, ಪುತ್ರರಿಗೇ ಗುತ್ತಿಗೆ ಕೊಡಿಸಿ ಸ್ವಜನ ಪಕ್ಷಪಾತ ಮಾಡಿದ್ದಾರೆ. ಪ್ರಕರಣದಲ್ಲಿ ಇತರ ಆರೋಪಿಗಳ ಜೊತೆಗೆ ಸೇರಿ ಅಪರಾಧಿಕ ಒಳಸಂಚು ರೂಪಿಸಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಶಶಿಧರ್ ಮಹದೇವಪ್ಪ ಹಳ್ಳಿಕೆರೆ ಹಾವೇರಿಯ ಲೋಕಾಯುಕ್ತ ಕೋರ್ಟ್‌ಗೆ ಖಾಸಗಿ ದೂರು ಸಲ್ಲಿಸಿದ್ದರು.

ಲೋಕಾಯುಕ್ತ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು.ನಂತರ ಪ್ರಕರಣ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿತು. ಈ ಪ್ರಕರಣವನ್ನು ಸುದೀರ್ಘ ವಿಚಾರಣೆ ನಡೆಸಿದ್ದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ನೆಹರೂ ಓಲೇಕಾರ, ಅವರ ಪುತ್ರ ಮಂಜುನಾಥ್ ಓಲೇಕಾರ, ದೇವರಾಜ್ ಓಲೇಕಾರ, ನಿವೃತ್ತ ಅಧಿಕಾರಿ ಎಚ್.ಕೆ. ರುದ್ರಪ್ಪ ಸೇರಿದಂತೆ ಒಟ್ಟು 9 ಮಂದಿ ಆರೋಪಿಗಳನ್ನು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ-1988ರಡಿ ದೋಷಿ ಎಂದು ತೀರ್ಮಾನಿಸಿ 2023ರ ಫೆ.13ರಂದು ಅದೇಶಿಸಿತ್ತು.

ಈ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶಾಸಕ ನೆಹರೂ ಓಲೇಕಾರ ಅವರಿಗೆ ಎರಡು ವರ್ಷ ಸಾಧಾರಣ ಜೈಲು ಶಿಕ್ಷೆ ಮತ್ತು ಎರಡು ಸಾವಿರ ರೂ. ದಂಡ ವಿಧಿಸಿದೆ.

ಇದನ್ನೂಓದಿ:ಗುಡ್​ ನ್ಯೂಸ್​.. ಆಧಾರ್‌ನೊಂದಿಗೆ ಪ್ಯಾನ್ ಲಿಂಕ್ ಮಾಡುವ ಗಡುವು ವಿಸ್ತರಿಸಿದ ಸರ್ಕಾರ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.