ETV Bharat / state

ವರುಣನ ಆರ್ಭಟ: ಹಾವೇರಿಯಲ್ಲಿ ನೂರಾರು ಎಕರೆ ಬೆಳೆ ನೀರುಪಾಲು

author img

By

Published : Jul 24, 2021, 8:32 PM IST

ಹಾವೇರಿಯಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಶೇಂಗಾ, ಸೋಯಾಬಿನ್, ಗೋವಿನ ಜೋಳ ಮತ್ತು ಹತ್ತಿ ಸೇರಿದಂತೆ ವಿವಿಧ ಬೆಳೆಗಳು ನೀರುಪಾಲಾಗಿದ್ದು, ಸೂಕ್ತ ಪರಿಹಾರ ನೀಡುವಂತೆ ರೈತರು ಒತ್ತಾಯಿಸಿದ್ದಾರೆ.

haveri
ಹಾವೇರಿಯಲ್ಲಿ ನೀರು ಪಾಲಾದ ನೂರಾರು ಎಕರೆ ಬೆಳೆಗಳು

ಹಾವೇರಿ: ಜಿಲ್ಲೆಯಲ್ಲಿ ಹರಿಯುವ ಧರ್ಮಾ, ವರದಾ, ತುಂಗಭದ್ರಾ ಮತ್ತು ಕುಮದ್ವತಿ ನದಿಗಳ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಪರಿಣಾಮ ಈ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿದ್ದು, ರೈತರು ಬೆಳೆದ ನೂರಾರು ಎಕರೆ ಬೆಳೆಗಳು ನೀರುಪಾಲಾಗಿವೆ.

ಶೇಂಗಾ, ಸೋಯಾಬಿನ್, ಗೋವಿನ ಜೋಳ ಮತ್ತು ಹತ್ತಿ ಸೇರಿದಂತೆ ವಿವಿಧ ಬೆಳೆಗಳು ನೀರು ಪಾಲಾಗಿದ್ದು, ಸೂಕ್ತ ಪರಿಹಾರ ನೀಡುವಂತೆ ರೈತರು ಒತ್ತಾಯಿಸಿದ್ದಾರೆ. ಆರಂಭದಲ್ಲಿ ಮಳೆರಾಯನ ಮುನಿಸಿನಿಂದ ಕಂಗೆಟ್ಟಿದ್ದ ರೈತರಿಗೆ, ನಂತರ ವರುಣ ಆಗಮನ ಸಂತಸ ತಂದಿತ್ತು. ಆದರೆ, ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜಮೀನುಗಳಿಗೆ ನೀರು ನುಗ್ಗಿ, ಬೆಳೆಗಳು ನಾಶವಾಗಿವೆ.

ಹಾವೇರಿಯಲ್ಲಿ ನೀರು ಪಾಲಾದ ನೂರಾರು ಎಕರೆ ಬೆಳೆಗಳು

ಈಗಾಗಲೇ 20 ಸಾವಿರಕ್ಕೂ ಅಧಿಕ ರೂ. ಖರ್ಚು ಮಾಡಿ ಬಿತ್ತನೆ ಮಾಡಿದ್ದೇವೆ. ಜೊತೆಗೆ ಗೊಬ್ಬರ ಸೇರಿದಂತೆ ಅದು, ಇದು ಅಂತಾ ಎಕರೆಗೆ 30 ಸಾವಿರ ಖರ್ಚು ಮಾಡಿದ್ದೇವೆ. ಇನ್ನೇನು ಕೆಲದಿನಗಳು ಕಳೆದರೆ ಫಸಲು ಒಂದು ಹಂತಕ್ಕೆ ಬರುತ್ತಿತ್ತು. ಆದರೀಗ ಮಳೆರಾಯನ ಆರ್ಭಟದಿಂದ ಜಮೀನುಗಳಲ್ಲಿ ಎದೆಮಟ್ಟದವರೆಗೆ ನೀರು ನಿಂತಿದೆ. ಸರ್ಕಾರ ಬೆಳೆ ನಾಶದ ಕುರಿತು ಸಮೀಕ್ಷೆ ನಡೆಸಿ, ಸೂಕ್ತ ಪರಿಹಾರ ಒದಗಿಸಬೇಕು. ಇಲ್ಲವಾದರೆ, ಬರುವ ದಿನಗಳಲ್ಲಿ ಸರ್ಕಾರದ ವಿರುದ್ಧ ದೊಡ್ಡ ಹೋರಾಟ ಮಾಡುವುದಾಗಿ ರೈತ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಪ್ರವಾಹದಿಂದ ಕೊಚ್ಚಿ ಹೋದ 20ಕ್ಕೂ ಅಧಿಕ ಮನೆಗಳು: ತುತ್ತು ಅನ್ನಕ್ಕಾಗಿ ಪರದಾಟ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.