86ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ₹25 ಕೋಟಿ ಖರ್ಚು: ಶಿವರಾಮ ಹೆಬ್ಬಾರ್

author img

By

Published : Feb 27, 2023, 7:14 PM IST

Updated : Feb 27, 2023, 8:25 PM IST

Etv Bharat25 crore spent on Kannada Sahitya Conference

ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನಿಗದಿ ಮಾಡಿದ ಖರ್ಚಿಗಿಂತ 4 ಕೋಟಿ 98 ಲಕ್ಷ ರೂ ಅಧಿಕ ಖರ್ಚಾಗಿದೆ ಎಂದು ಹಾವೇರಿ ಜಿಲ್ಲೆಯ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.

ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್

ಹಾವೇರಿ: ನಗರದಲ್ಲಿ ಮೂರು ದಿನಗಳ ಕಾಲ ನಡೆದಿದ್ದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 25 ಕೋಟಿ ರೂ. ವೆಚ್ಚವಾಗಿದೆ ಎಂದು ಸಚಿವ ಶಿವರಾಮ ಹೆಬ್ಬಾರ್ ತಿಳಿಸಿದರು. ಈ ಬಗ್ಗೆ ಹಾವೇರಿಯಲ್ಲಿ ಮಾತನಾಡಿದ ಅವರು, ಸರ್ಕಾರ ಬಿಡುಗಡೆ ಮಾಡಿದ ಅನುದಾನಕ್ಕಿಂತ 4 ಕೋಟಿ 98 ಲಕ್ಷ ರೂಪಾಯಿ ಹೆಚ್ಚು ಖರ್ಚಾಗಿದೆ ಎಂದರು.

ಮೂರು ದಿನಗಳ ಕಾಲ ಸುಮಾರು 5 ಲಕ್ಷಕ್ಕಿಂತಲೂ ಅಧಿಕ ಸಾಹಿತ್ಯಾಸಕ್ತರು ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಅಚ್ಚುಕಟ್ಟು ಮತ್ತು ಒಕ್ಕಟ್ಟಿನ ಸಾಹಿತ್ಯ ಸಮ್ಮೇಳನವನ್ನು ತುಂಬಾ ಎಚ್ಚರಿಕೆಯಿಂದ ಮತ್ತು ಸಡಗರದಿಂದ ಆಚರಿಸಲಾಯಿತು. ಈ ಹಿಂದೆ ನಡೆದ ಸಾಹಿತ್ಯ ಸಮ್ಮೇಳನಗಳಿಗೆ ವ್ಯತಿರಿಕ್ತವಾಗಿ ಅಚ್ಚುಕಟ್ಟಾದ ಮತ್ತು ಊಟದ ವ್ಯವಸ್ಥೆಯೂ ಸೇರಿದಂತೆ ಇತರೆ ಎಲ್ಲ ವ್ಯವಸ್ಥೆಗಳಿಂದ ಸಮ್ಮೇಳನ ಅದ್ದೂರಿಯಾಗಿ ನಡೆದಿದೆ ಎಂದು ಹೇಳಿದರು.

ಸಾಹಿತ್ಯ ಸಮ್ಮೇಳನಕ್ಕಾದ ಖರ್ಚುಗಳ ವಿವರ ನೀಡಿದ ಅವರು, ನಮ್ಮ ಲೆಕ್ಕಾಚಾರ ತಪ್ಪಲು ಪ್ರಮುಖ ಕಾರಣ ಊಟದ ಖರ್ಚು. ಊಟಕ್ಕೆ 5 ಕೋಟಿ ರೂ. ಎಂದು ಅಂದಾಜು ಮಾಡಿದ್ದೆವು. ಆದರೆ 8 ಕೋಟಿ 10 ಲಕ್ಷ 80 ಸಾವಿರ ರೂ ಖರ್ಚಾಗಿದೆ. ಕನ್ನಡ ಸಾಹಿತ್ಯ ಪರಿಷತ್​ಗೆ 1 ಕೋಟಿ 90 ಲಕ್ಷ ರೂ. ಖರ್ಚಾಗಬಹುದು ಎಂದು ಅಂದಾಜು ಮಾಡಿದ್ದೆವು. ಆದರೆ ಪರಿಷತ್​ಗೆ ಎರಡು ಕೋಟಿ 63 ಲಕ್ಷ ರೂ. ಖರ್ಚಾಗಿದೆ. ಅದಾಯದಲ್ಲಿ ಮಳಿಗೆಗಳಿಂದ 1 ಕೋಟಿ ರೂ. ಬರುವುದಾಗಿ ನಿರೀಕ್ಷೆ ಮಾಡಿದ್ದೆವು. ಆದರೆ ಅಷ್ಟು ಬಂದಿಲ್ಲ. ಪ್ರತಿನಿಧಿ ಶುಲ್ಕ 20 ಸಾವಿರ ಜನರಿಂದ ಬರಬಹುದು ಎಂದು ನಿರೀಕ್ಷಿಸಿದ್ದೆವು. ಆದರೆ 10 ಸಾವಿರ ಜನರದ್ದು ಮಾತ್ರ ಬಂದಿದೆ ಎಂದು ಮಾಹಿತಿ ನೀಡಿದರು.

ಸರ್ಕಾರಿ ನೌಕರರು ಒಂದು ದಿನದ ವೇತನ ನೀಡುತ್ತೇವೆ ಎಂದು ತಿಳಿಸಿದ್ದರು. ಅದರಿಂದ ಒಂದು ಕೋಟಿ 40 ಲಕ್ಷ ರೂಪಾಯಿ ಬರಬೇಕಿತ್ತು. ಅಂತಿಮವಾಗಿ ಅವರು ಬಿಲ್ ಕಡಿತಕ್ಕೆ ಒಪ್ಪಿಗೆ ಸೂಚಿಸದ ಕಾರಣ 20 ಲಕ್ಷ ರೂಪಾಯಿ ಮಾತ್ರ ಬಂತು. ನಿರೀಕ್ಷೆ ಮಾಡಿದಷ್ಟು ಅದಾಯ ಬರದ ಕಾರಣ 4 ಕೋಟಿ 98 ಲಕ್ಷ ರೂಪಾಯಿ ಹೆಚ್ಚು ಖರ್ಚಾಯಿತು.

ಈ ಕುರಿತಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಈಗಾಗಲೇ 4 ಕೋಟಿ 98 ಲಕ್ಷ ರೂಪಾಯಿ ಹೆಚ್ಚುವರಿ ಹಣ ಬಿಡುಗಡೆ ಮಾಡಲು ತಿಳಿಸಲಾಗಿದೆ. ಅವರು ಮೌಖಿಕವಾಗಿ ಒಪ್ಪಿಗೆ ನೀಡಿದ್ದಾರೆ. ಇನ್ನು ಕೆಲ ದಿನಗಳಲ್ಲಿ ಬಾಕಿ ವೇತನವನ್ನು ಪಾವತಿಸಲಾಗುವುದು, ಸಾಹಿತ್ಯ ಸಮ್ಮೇಳನ ಯಾವ ಗೊಂದಲಗಳಿಲ್ಲದೇ ಮುಗಿದಿದ್ದಕ್ಕೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಸಚಿವರು ಅಭಿನಂದನೆ ತಿಳಿಸಿದರು.

ಸಮ್ಮೇಳನದ ಚಿಕ್ಕಪುಟ್ಟ ಬಾಕಿ ಮೊತ್ತ ನೀಡಲಾಗಿದೆ. ಅಧಿಕ ಬಾಕಿ ಮೊತ್ತವಿರುವ ಊಟ ಮತ್ತು ಶಾಮಿಯಾನ ಮಾಲೀಕರಿಗೆ ಹಣ ಸಂದಾಯ ಮಾಡಿಲ್ಲ. ಸಾಹಿತ್ಯ ಸಮ್ಮೇಳನದ ಹಣ ಬಿಡುಗಡೆಗೆ ಪರ್ಸೆಂಟೇಜ್ ಕೇಳಲಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಈ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು. ಇದೇ ವೇಳೆ ಸಮ್ಮೇಳನ ಸ್ಮರಣ ಸಂಚಿಕೆ ಬಿಡುಗಡೆ ಮಾಡಲು ವಿಳಂಬವಾಗಿರುವುದಕ್ಕೆ ಸಮ್ಮೇಳನದ ಮೂರು ದಿನಗಳ ಕಾಲ ತೆಗೆದ ಛಾಯಾಚಿತ್ರಗಳು ಬರದೇ ಇರುವುದು ಕಾರಣ ಎಂದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ 'ಸಾಂಸ್ಕೃತಿಕ ಹಬ್ಬ' ಮಾಡಲು ರಾಜ್ಯ ಸರ್ಕಾರ ನಿರ್ಧಾರ

Last Updated :Feb 27, 2023, 8:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.