ಆನ್​ಲೈನ್​ ಗೇಮ್​ ಗೀಳು.. ಅಧಿಕಾರಿಯಿಂದ ಬ್ಯಾಂಕ್​​ಗೆ 2 ಕೋಟಿಗೂ ಅಧಿಕ ವಂಚನೆ

author img

By

Published : Feb 25, 2023, 6:35 PM IST

2-crore-fraud-by-bank-officer-at-haveri

ಬ್ಯಾಂಕ್​ ಅಧಿಕಾರಿಯಿಂದ ಬ್ಯಾಂಕ್​ ಗೆ ವಂಚನೆ - ಗ್ರಾಹಕರ ಠೇವಣಿ ಹಣ ಅಕ್ರಮ ವರ್ಗಾವಣೆ - ಅಧಿಕಾರಿ ವಿರುದ್ಧ ಬ್ಯಾಂಕ್​ ಮ್ಯಾನೇಜರ್​ ದೂರು

ಅಧಿಕಾರಿಯಿಂದ ಬ್ಯಾಂಕ್​​ಗೆ 2 ಕೋಟಿಗೂ ಅಧಿಕ ವಂಚನೆ

ಹಾವೇರಿ : ಬ್ಯಾಂಕ್ ಸಹಾಯಕ ವ್ಯವಸ್ಥಾಪಕನೊಬ್ಬ ಬ್ಯಾಂಕ್‌ಗೆ ವಂಚಿಸಿರುವ ಘಟನೆ ಜಿಲ್ಲೆಯ ವಿದ್ಯಾನಗರದಲ್ಲಿ ನಡೆದಿದೆ. ಹಾವೇರಿಯ ಐಸಿಐಸಿಐ ಬ್ಯಾಂಕ್ ಸಹಾಯಕ ವ್ಯವಸ್ಥಾಪಕ ವೀರೇಶ್ ಕಾಶಿಮಠ ವಿರುದ್ಧ ಆರೋಪ ಕೇಳಿಬಂದಿದೆ. ಪ್ರಕರಣ ಸಂಬಂಧ ಐಸಿಐಸಿಐ ಬ್ಯಾಂಕ್ ಮ್ಯಾನೇಜರ್​​ ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಬ್ಯಾಂಕ್​ ಸಹಾಯಕ ವ್ಯವಸ್ಥಾಪಕ ವೀರೇಶ್ ಕಾಶಿಮಠ ಅವರು ಕಳೆದ 2022 ಆಗಸ್ಟ್​​ 22 ರಿಂದ ಫೆಬ್ರವರಿ 7 ರವರೆಗೆ ಗ್ರಾಹಕರು ಬ್ಯಾಂಕ್‌ನಲ್ಲಿ ಠೇವಣಿ ಇರಿಸಿದ್ದ ಹಣವನ್ನು ತನಗೆ ಬೇಕಾದವರ ಖಾತೆಗೆ ಜಮಾ ಮಾಡಿದ್ದಾರೆ. ಕಳೆದ ಆರು ತಿಂಗಳಲ್ಲಿ ವೀರೇಶ್​ ಅವರು ಸುಮಾರು 2 ಕೋಟಿ 36 ಲಕ್ಷ ರೂಪಾಯಿ ಹಣವನ್ನು ತನಗೆ ಬೇಕಾದವರ ಖಾತೆಗೆ ಜಮೆ ಮಾಡಿದ್ದಾರೆ. ಬಳಿಕ ಈ ಹಣವನ್ನು ಪಡೆದುಕೊಂಡು ವೀರೇಶ್ ಆನ್​ಲೈನ್ ಗೇಮ್​​ ಆಡುತ್ತಿದ್ದರು ಎಂದು ಎಸ್​ ಪಿ ಶಿವಕುಮಾರ್ ತಿಳಿಸಿದ್ದಾರೆ.

ಈ ಸಂಬಂಧ ಹಾವೇರಿ ಐಸಿಐಸಿಐ ಬ್ಯಾಂಕ್ ಮ್ಯಾನೇಜರ್ ಶಹರ ಠಾಣೆಗೆ ದೂರು ನೀಡಿದ್ದು, ಆರೋಪಿ ವೀರೇಶ್​ನನ್ನು ವಶಕ್ಕೆ ಪಡೆದಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇನ್ನು ಪ್ರಕರಣದಲ್ಲಿ ಎರಡು ಕೋಟಿಗೂ ಅಧಿಕ ಹಣ ದುರುಪಯೋಗ ಪಡಿಸಿಕೊಂಡಿರುವುದರಿಂದ ಪ್ರಕರಣವನ್ನು ಆದಷ್ಟು ಬೇಗ ಸಿಐಡಿಗೆ ವರ್ಗಾಯಿಸಲಾಗುವುದು ಎಂದು ಎಸ್ಪಿ ಶಿವಕುಮಾರ್ ಮಾಹಿತಿ ನೀಡಿದ್ದಾರೆ.

ಇದುವರೆಗೆ ಶಹರ ಠಾಣೆಯ ತನಿಖಾಧಿಕಾರಿ ಈ ಪ್ರಕರಣವನ್ನು ತನಿಖೆ ನಡೆಸಿದ್ದು, ಇನ್ನೆರಡು ದಿನಗಳಲ್ಲಿ ಪ್ರಕರಣ ಸಿಐಡಿಗೆ ವರ್ಗಾವಣೆಯಾಗಲಿದೆ. ಪ್ರಕರಣದಲ್ಲಿ ಶಹರ ಠಾಣೆಯ ತನಿಖಾಧಿಕಾರಿ ಆರೋಪಿಯು ಬಳಕೆ ಮಾಡಲು ಉದ್ದೇಶಿದ್ದ 32 ಲಕ್ಷ ರೂಪಾಯಿಯನ್ನು ತಡೆ ಹಿಡಿದಿದ್ದಾರೆ ಎಂದು ಎಸ್ಪಿ ಶಿವಕುಮಾರ್ ಇದೇ ವೇಳೆ ತಿಳಿಸಿದರು.

ಬೆಂಗಳೂರಿನಲ್ಲಿ ಸಹಕಾರಿ ಬ್ಯಾಂಕ್​ ಅವ್ಯವಹಾರ : ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್​ನಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ವರದಿಯಾಗಿತ್ತು. ಈ ಸಂಬಂಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ರಾಜೇಶ್ ವಿಆರ್ ಎಂಬವರನ್ನು ಜಾರಿ ನಿರ್ದೇಶನಾಲಯ ಬಂಧಿಸಿತ್ತು. ಸಹಕಾರಿ ಬ್ಯಾಂಕ್​ ಮೇಲೆ ಒಂದು ಸಾವಿರ ಕೋಟಿ ರೂ.ಗಿಂತ ಹೆಚ್ಚಿನ ಸಾರ್ವಜನಿಕ ಠೇವಣಿ ದುರ್ಬಳಕೆ ಮಾಡಿದ ಆರೋಪ ಕೇಳಿ ಬಂದ ಹಿನ್ನೆಲೆ ಇಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದ ಹಿನ್ನೆಲೆ : ಹೆಚ್ಚಿನ ಬಡ್ಡಿ ಆಮಿಷ ತೋರಿಸಿ ಜನರಿಂದ ಹಣ ಠೇವಣಿ ಪಡೆದುಕೊಂಡು ವಂಚಿಸಿದ ಆರೋಪ ಈ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್​ ಮೇಲಿದೆ. ಬಡ್ಡಿ ಆಸೆಗೆ ಸಾವಿರಾರು ಗ್ರಾಹಕರು ಇಲ್ಲಿ ಕೋಟಿಗಟ್ಟಲೆ ಹಣ ಹೂಡಿಕೆ ಮಾಡಿದ್ದರು. ಈ ಸಂಬಂಧ 45.32 ಕೋಟಿ ರೂ ಮೌಲ್ಯದ ಚರಾಸ್ತಿ ಹಾಗೂ ಸ್ಥಿರಾಸ್ತಿಯನ್ನು ಇಡಿ ಅಧಿಕಾರಿಗಳು ಜಪ್ತಿ ಮಾಡಿದ್ದರು. ಈ ಬಗ್ಗೆ ಬೆಂಗಳೂರು ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ಇದರ ಆಧಾರದ ಮೇಲೆ ಇಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : ಡ್ರಗ್ಸ್ ಪ್ರಕರಣ: ಮಣಿಪಾಲ ವಿವಿಯ 42 ವಿದ್ಯಾರ್ಥಿಗಳು ಅಮಾನತು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.