ETV Bharat / state

ಹಾಸನ: ರಾತ್ರೋರಾತ್ರಿ ಕಾಣಿಸಿಕೊಂಡ ಪಾದುಕೆ, ಕಮಂಡಲ; ಗ್ರಾಮಸ್ಥರಲ್ಲಿ ಅಚ್ಚರಿ

author img

By ETV Bharat Karnataka Team

Published : Oct 7, 2023, 6:17 AM IST

ಅರಸೀಕೆರೆ ತಾಲೂಕಿನ ಪನ್ನಸಮುದ್ರ ಬಳಿಯ ಹೊನ್ನಶೆಟ್ಟಿಹಳ್ಳಿ ಗ್ರಾಮದಲ್ಲಿ ಋಷಿ ಮುನಿಗಳು ಉಪಯೋಗಿಸುವ ಪಾದುಕೆ ಹಾಗೂ ಕಮಂಡಲ ಪತ್ತೆಯಾಗಿದೆ.

ಪಾದುಕೆ ಹಾಗೂ ಕಮಂಡಲ
ಪಾದುಕೆ ಹಾಗೂ ಕಮಂಡಲ

ಪಾದುಕೆ ಹಾಗೂ ಕಮಂಡಲ ಪತ್ತೆ

ಹಾಸನ: ಜಿಲ್ಲೆಯ ಅರಸೀಕೆರೆ-ತಿಪಟೂರು ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಹಾದು ಹೋಗುವ ರಸ್ತೆ ಪಕ್ಕ ಹೊನ್ನಶೆಟ್ಟಿಹಳ್ಳಿ ಗ್ರಾಮಕ್ಕೆ ತೆರಳುವ ಬೋರೇಗೌಡ ಎಂಬವರ ಜಮೀನಿನಲ್ಲಿ ಋಷಿಮುನಿಗಳು ಉಪಯೋಗಿಸುವ ವಸ್ತುಗಳು ಪತ್ತೆಯಾಗಿದ್ದು, ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿಸಿದೆ.

ಇಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಗಾರ್ಮೆಂಟ್ಸ್​ಗೆ ತೆರಳುತ್ತಿದ್ದ ಗ್ರಾಮೀಣ ಭಾಗದ ನೌಕರರು, ಪಾದುಕೆ ಹಾಗೂ ಕಮಂಡಲಗಳನ್ನು ಕಂಡು ಶೆಟ್ಟಿಹಳ್ಳಿ ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ. ನಂತರ ಈ ವಿಚಾರವನ್ನು ಅರಸೀಕೆರೆ ಗ್ರಾಮಾಂತರ ಠಾಣೆಗೆ ತಿಳಿಸಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು.

ಅಕ್ಕಪಕ್ಕದ ಗ್ರಾಮಗಳಾದ ಪನ್ ಸಮುದ್ರ, ಆದಿಹಳ್ಳಿ, ಎಚ್​ಎಸ್​ಬಿ ಕಾಲೋನಿ, ಸೂಳೆಕೆರೆ ಗ್ರಾಮದಿಂದ ಜನರ ದಂಡೇ ಸ್ಥಳಕ್ಕಾಗಮಿಸಿ ಕುತೂಹಲದಿಂದ ನೋಡುತ್ತಿದ್ದರು. ಸುತ್ತಮುತ್ತಲ ಗ್ರಾಮಸ್ಥರಿಗೆ ಸರಿಯಾದ ಮಾಹಿತಿ ಇಲ್ಲದೆ ನಮ್ಮ ಭಾಗದಲ್ಲಿರುವ ರಂಗಾಪುರ ಕೋಡಿಮಠದ ಶ್ರೀಗಳ ಆಣತಿಯಂತೆ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಜನರು ತಿಳಿಸಿದರು.

''ರಂಗಾಪುರ ಶ್ರೀಗಳು ಯಾವ ರೀತಿ ಸಲಹೆ, ಸೂಚನೆಗಳನ್ನು ಕೊಡುತ್ತಾರೋ ಆ ರೀತಿ ನಾವು ನಡೆದುಕೊಳ್ಳುತ್ತೇವೆ. ಇಲ್ಲಿಗೆ ನಿಜಕ್ಕೂ ಋಷಿ ಮುನಿಗಳು ಬಂದು ಹೋಗಿದ್ದಾರಾ? ಯಾರಾದ್ರೂ ವಶೀಕರಣಕ್ಕಾಗಿ ಈ ರೀತಿ ಮಾಡಿದ್ದಾರಾ? ಯಾವುದಾದರೂ ಸಿದ್ಧಿಗಾಗಿ ವಿಧಿ ವಿಧಾನ ನಡೆದಿದೆಯೇ ಎಂಬುದು ಗೊತ್ತಿಲ್ಲ. ಇದಕ್ಕೆ ರಂಗಾಪುರ ಶ್ರೀಗಳ ಮಾರ್ಗದರ್ಶನ ಅವಶ್ಯಕ. ಅವರ ಅಭಿಪ್ರಾಯದ ನಂತರವೇ ನಾವು ಮುಂದುವರೆಯಬೇಕು" ಎಂದು ಗ್ರಾಮಸ್ಥ ಷಡಕ್ಷರಿ ಹೇಳಿದರು.

12 ಜೊತೆ ಪಾದುಕೆ ಹಾಗೂ 28 ಕಮಂಡಲಗಳು ಸಿಕ್ಕಿವೆ. ಇಷ್ಟೊಂದು ಬೆಲೆಬಾಳುವ ಮರಗಳಿಂದ ತಯಾರಿಸುವಂತಹ ವಸ್ತುಗಳನ್ನು ನೋಡಿದ ಜನರು ರಾತ್ರಿ ಹೊತ್ತಿನಲ್ಲಿ ಋಷಿಮುನಿಗಳು ತಪಸ್ಸು ಮಾಡಿ ಹೋಗಿರಬಹುದು ಎಂದು ಅನುಮಾನಿಸಿದ್ದಾರೆ.

ಇದನ್ನೂ ಓದಿ: ಚಿಕ್ಕಮಗಳೂರು: ದತ್ತ ಪಾದುಕೆ ದರ್ಶನಕ್ಕೆ ಅವಕಾಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.