ETV Bharat / state

ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆ: ಅಪಹರಿಸಿ ಕೊಲೆ ಮಾಡಿರುವ ಆರೋಪ

author img

By

Published : Feb 8, 2023, 2:14 PM IST

Updated : Feb 8, 2023, 4:33 PM IST

ಸಾಲ ನೀಡಿರುವ ಹಣವನ್ನು ವಾಪಸ್​ ಕೇಳಿದ್ದಕ್ಕೆ ಸ್ನೇಹಿತರೇ ಕೊಲೆ ಮಾಡಿದ್ದಾರೆ ಎಂದು ಮೃತ ಯುವಕನ ಪೋಷಕರು ಆರೋಪಿಸಿದ್ದಾರೆ.

Likhith gowda
ಲಿಖಿತ್​ ಗೌಡ

ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆ

ಹಾಸನ: ಕೊಟ್ಟ ಸಾಲವನ್ನು ವಾಪಸ್ ಕೇಳಿದ್ದಕ್ಕೆ ಸ್ನೇಹಿತನನ್ನೇ ಹೆಣವಾಗಿಸಿದ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. ಲಿಖಿತ್​ ಗೌಡ ಕೊಲೆಯಾದ ವ್ಯಕ್ತಿ. ಭಾನುವಾರ ಸಂಜೆಯಿಂದ ಕೊಲೆಯಾದ ಲಿಖಿತ್​ ಗೌಡ ನಾಪತ್ತೆಯಾಗಿದ್ದ. ಪೋಷಕರು ಮಗನನ್ನು ಅಪಹರಣ ಮಾಡಲಾಗಿದೆ ಎಂದು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ, ನಾಪತ್ತೆಯಾಗಿದ್ದ ಮಗ ಶವವಾಗಿ ಪತ್ತೆಯಾಗಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಏನಿದು ಪ್ರಕರಣ?: ಕೊಲೆಯಾದ ವ್ಯಕ್ತಿ ಲಿಖಿತ್​ ಗೌಡ ಕಾರ್​ ಕ್ಲಿನಿಕ್​ ನಡೆಸುತ್ತಿದ್ದ. ಈತ ಇತ್ತೀಚೆಗೆ ಪರಿಚಯವಾಗಿದ್ದ ನವೀನ್​​ ಎಂಬ ವ್ಯಕ್ತಿ 2.5 ಲಕ್ಷ ಹಣ ಸಾಲದ ರೂಪದಲ್ಲಿ ನೀಡಿದ್ದನು ಎನ್ನಲಾಗಿದೆ. ನವೀನ್​​ ಬಳಿ ಲಿಖಿತ್​ ಹಲವು ಬಾರಿ ಕೊಟ್ಟ ಹಣವನ್ನು ಹಿಂತಿರುಗಿಸುವಂತೆ ಕೇಳಿದ್ದಾನೆ. ಪ್ರತೀ ಬಾರಿ ಕೇಳಿದಾಗಲೂ ನವೀನ್​​ ಇಂದು, ನಾಳೆ ಕೊಡುತ್ತೇನೆ ಎಂದು ಸಬೂಬು ಹೇಳಿಕೊಂಡು ದಿನ ದೂಡುತ್ತಿದ್ದನು. ಸಾಲದ ಹಣವನ್ನು ವಾಪಸ್ ನೀಡುವಂತೆ ಲಿಖಿತ್ ಗೌಡ ಕೇಳಿದಾಗ ಸದ್ಯ ನನ್ನ ಬಳಿ ಹಣವಿಲ್ಲ, ನಾನು ಕೊಟ್ಟಾಗ ಇಸ್ಕೋಬೇಕು ಎಂದು ನವೀನ್​​ ಬೆದರಿಕೆ ಹಾಕಿದ್ದ ಎನ್ನಲಾಗಿದೆ.

ಹಣ ನೀಡಲು ಹಿಂದೇಟು ಹಾಕುತ್ತಿದ್ದ ನವೀನ್​ ಮೇಲೆ ಕೋಪಗೊಂಡ ಲಿಖಿತ್​ 10 ಲಕ್ಷದ ಚೆಕ್​ ಬೌನ್ಸ್​ ಕೇಸ್​ ಹಾಕಿ, ಆ್ಯಕ್ಟಿವಾ ಹೋಂಡಾ ಬೈಕ್​ ಸೀಸ್​ ಮಾಡಿಕೊಂಡು ಬಂದಿದ್ದ ಎಂಬ ಮಾತಿದೆ. ಇದರಿಂದ ಕೋಪಗೊಂಡಿದ್ದ ನವೀನ್​ ಲಿಖಿತ್​ನನ್ನು ಕೊಲೆ ಮಾಡಲು ನಿರ್ಧರಿಸಿದ್ದನು. ಭಾನುವಾರ ಸಂಜೆ ನವೀನ್​​ ತನ್ನ ವಾಹನವನ್ನು ವಾಶ್​ ಮಾಡಿಸಿಕೊಳ್ಳಲು ಕಾರ್​ ಕ್ಲಿನಿಕ್​ಗೆ ಬಂದಿದ್ದು, ಈ ವೇಳೆ ಲಿಖಿತ್​ಗೆ ಕರೆ ಮಾಡಿ ಹಣ ವಾಪಸ್​ ಕೊಡುವುದಾಗಿ ಹೇಳಿ, ಕ್ಲಿನಿಕ್​ಗೆ ಬರುವಂತೆ ತಿಳಿಸಿದ್ದಾನೆ.

ಹಣ ಹಿಂದಿರುಗಿಸುತ್ತಾನೆ ಎನ್ನುವ ಆಸೆಯಲ್ಲಿ ಲಿಖಿತ್​ ಗೌಡ (ಬಂಗಾರಿ) ಮನೆಯಿಂದ ತನ್ನ ಕಾರ್​ ಕ್ಲಿನಿಕ್​ಗೆ ಹೋಗಿದ್ದಾನೆ. ಈ ವೇಳೆ ಹಣ ಕೊಡುವುದಾಗಿ ಹೇಳಿ ಕಾರ್​ನಲ್ಲಿ ತನ್ನ ಗೆಳೆಯ ಸಾಗರ್​ ಸಹಾಯದೊಂದಿಗೆ ನವೀನ್​, ಲಿಖಿತ್​ ಗೌಡನನ್ನು ಕಿಡ್ನ್ಯಾಪ್​ ಮಾಡಿಕೊಂಡು ಹೋಗಿದ್ದಾನೆ. ಹಾಸನ ಬೆಂಗಳೂರು ಮಾರ್ಗವಾಗಿ ಹೊರಟು ಮಧ್ಯ ಭಾಗದಲ್ಲಿ ಎಲ್ಲರ ಮೊಬೈಲನ್ನು ಸ್ವಿಚ್ಡ್​ ಆಫ್ ಮಾಡಿಸಿ ನಂತರ ಹಾಸನ ತಾಲೂಕಿನ ದುದ್ದ ಸಮೀಪದ ಯೋಗಿಹಳ್ಳಿ ಫಾರೆಸ್ಟ್​ ಏರಿಯಾದಲ್ಲಿ ಕೊಲೆ ಮಾಡಿದ್ದಾನೆ ಎಂದು ಲಿಖಿತ್​ ತಂದೆ ನಾಗೇಶ್​ ಗೌಡ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಪೋಷಕರು ಹಾಸನ ಬಡಾವಣೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪೋಷಕರು ನೀಡಿದ ದೂರಿನ ಅನ್ವಯ ಕಿಡ್ನ್ಯಾಪ್​ ಮಾಡಿದವರನ್ನು ನವೀನ್ ಮತ್ತು ಸಾಗರ್ ಎಂದು ಗುರುತಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಹಾಸನ ಬಡಾವಣೆ ಪೊಲೀಸರು ತನಿಖೆ ಕೈಗೊಂಡಿದ್ದರು. ಈ ವೇಳೆ, ಯೋಗಿಹಳ್ಳಿ ಫಾರೆಸ್ಟ್​ ಏರಿಯಾದಲ್ಲಿ ಲಿಖಿತ್​ ಗೌಡ ಶವ ಪತ್ತೆಯಾಗಿದೆ. ಎಂಟು ತಿಂಗಳ ಹಿಂದೆಯಷ್ಟೆ ಲಿಖಿತ್​ ಗೌಡ ಅವರಿಗೆ ಮದುವೆಯಾಗಿತ್ತು. ಸ್ವಂತ ಕಾರ್​ ಕ್ಲಿನಿಕ್​ ಪ್ರಾರಂಭಿಸಿ ಒಂದು ವರ್ಷವೂ ಆಗಿರಲಿಲ್ಲ.

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಆರೋಪಿಗಳ ಎಡೆಮುರಿ ಕಟ್ಟಲು ಈಗಾಗಲೇ ಎರಡು ತಂಡ ರಚನೆ ಮಾಡಿದ್ದಾರೆ.

ಇದನ್ನೂ ಓದಿ: ಹೂತು ಹಾಕಿದ ಶವವನ್ನು 23 ದಿನಗಳ ಬಳಿಕ ಹೊರತೆಗೆದ ಪೊಲೀಸರು

Last Updated : Feb 8, 2023, 4:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.