ಹಾಸನ : ಕಳೆದ ಒಂದೂವರೆ ವರ್ಷದ ಹಿಂದೆ ನಡೆದ ಹಾಸನ ನಗರಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಸಫಲವಾಗಲಿಲ್ಲ. ಈ ನಡುವೆ ಜೆಡಿಎಸ್ ಭದ್ರಕೋಟೆ ಎಂದೆನಿಸಿಕೊಳ್ಳುವ ಹಾಸನದಲ್ಲಿ ಅಧಿಕಾರ ಹಿಡಿಯೋದು ನಾವೇ ಎಂದು ಬಿಜೆಪಿ ಶಾಸಕ ಪ್ರೀತಂ ಗೌಡ ಹೇಳಿದ್ದಾರೆ.
ನಗರಸಭೆ ಮೀಸಲಾತಿ ಪ್ರಶ್ನಿಸಿ ಕೆಲ ಚುನಾಯಿತ ಸದಸ್ಯರು ಕೊರ್ಟ್ ಮೆಟ್ಟಿಲೇರಿದ್ದರು. ಹೀಗಾಗಿ ಕಳೆದ ಒಂದೂವರೆ ವರ್ಷದಿಂದ ನಗರಸಭೆಯಲ್ಲಿ ಯಾವುದೇ ಪಕ್ಷ ಅಧಿಕಾರ ಹಿಡಿಯಲು ಸಾಧ್ಯವಾಗಲಿಲ್ಲ. ಇನ್ನೇನು ಕೆಲವೇ ದಿನಗಳಲ್ಲಿ ಮೀಸಲಾತಿ ವಿವಾದ ಬಗೆಹರಿಯುವ ಲಕ್ಷಣ ಗೋಚರಿಸಿದೆ. ಕೋರ್ಟ್ ತೀರ್ಪು ಪ್ರಕಟಿಸಲಿದೆ. ಹಾಗಾಗಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ನಾಯಕರು ಅಧಿಕಾರ ಹಿಡಿಯಲು ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ.
35 ಸದಸ್ಯ ಬಲವಿರುವ ಹಾಸನ ನಗರಸಭೆಯಲ್ಲಿ ಜೆಡಿಎಸ್ 17, ಬಿಜೆಪಿ 14, ಕಾಂಗ್ರೆಸ್ 1 ಮತ್ತು 4 ಪಕ್ಷೇತರ ಸದಸ್ಯರಿದ್ದಾರೆ. ಹೀಗಿರುವಾಗಲೇ ಬಿಜೆಪಿ ಶಾಸಕ ಪ್ರೀತಂಗೌಡ ಹಾಸನ ನಗರಸಭೆ ಅಧಿಕಾರ ಹಿಡಿಯುವ ಬಗ್ಗೆ ಮಾತನಾಡುವ ಮೂಲಕ ಜೆಡಿಎಸ್ ನಾಯಕ ರೇವಣ್ಣನವರಿಗೆ ಪರೋಕ್ಷ ಟಾಂಗ್ ನೀಡಿದ್ದಾರೆ.
ಇತ್ತ ಜೆಡಿಎಸ್ ನಾಯಕರೂ ಕೂಡ ತಾವೇನೂ ಕಮ್ಮಿ ಇಲ್ಲ ಎಂಬಂತೆ ಮಾತನಾಡುತ್ತಿದ್ದಾರೆ. ಬಿಜೆಪಿಯ ಸದಸ್ಯರು ನಮ್ಮ ಪಕ್ಷದ ಸಂಪರ್ಕದಲ್ಲಿದ್ದಾರೆ. ಹಾಗಾಗಿ ನಾವೇ ಅಧಿಕಾರ ಹಿಡಿಯುತ್ತೇವೆ ಎಂದಿದ್ದಾರೆ. ಹಾಸನದಲ್ಲಿ ಜೆಡಿಎಸ್ ಭದ್ರಕೋಟೆ ಬೇಧಿಸಲು ಬಿಜೆಪಿ ಮಾಸ್ಟರ್ ಪ್ಲಾನ್ ಮಾಡ್ಕೊಳ್ತಿದ್ರೆ, ಜೆಡಿಎಸ್ ನಾಯಕರೂ ಕೂಡಾ ಪ್ರತಿತಂತ್ರ ಹೆಣೆಯೋದ್ರಲ್ಲಿ ಹಿಂದೆ ಬಿದ್ದಿಲ್ಲ.