ಕೊಲೆಗಡುಕರ ಕೇಸ್ ವಾಪಸ್ ತಗೆದುಕೊಂಡರಲ್ಲ ಅದಕ್ಕೆ ಕಾಂಗ್ರೆಸ್ ನಶಿಸುತ್ತಿದೆ : ಕೆ ಎಸ್​ ಈಶ್ವರಪ್ಪ

author img

By

Published : Oct 3, 2022, 4:26 PM IST

ಮಾಜಿ ಸಚಿವ ಕೆ ಎಸ್ ಈಶ್ವರಪ್ಪ

ಆರ್‌ಎಸ್‌ಎಸ್ ಬಗ್ಗೆ ಏನೂ ಕಲ್ಪನೆ ಇಲ್ಲದಂತಹ ದಡ್ಡ ಶಿಕಾಮಣಿಗಳು ಅದರ ಬಗ್ಗೆ ಮಾತನಾಡುತ್ತಾರೆ. ಇಂದು ದೇಶದ ಮೂಲೆ ಮೂಲೆಯಲ್ಲೂ ಆರ್‌ಎಸ್‌ಎಸ್ ತಯಾರಾಗುತ್ತಿದೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅವರು ಆಕ್ರೋಶ ವ್ಯಕ್ತಪಡಿಸಿದರು.

ಹಾಸನ: ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಪಿಎಫ್‌ಐನಿಂದ 22 ಹಿಂದೂ ಯುವಕರ ಕೊಲೆ ಮಾಡಿದ ಪಿಎಫ್ಐ ಕಾರ್ಯಕರ್ತರ ಮೇಲಿದ್ದ ಕೇಸುಗಳನ್ನು ಹಿಂಪಡೆಯುವ ಮೂಲಕ ಸಿದ್ದರಾಮಯ್ಯ ಅವರು ದೇಶದ್ರೋಹಿ ಕೆಲಸ ಮಾಡಿದ್ದಾರೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅವರು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್​ ವಿರುದ್ದ ಈಶ್ವರಪ್ಪ ಕಿಡಿ: ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೊಲೆಗಡುಕರನ್ನು ಇವರೇ ಜೈಲಿಗೆ ಕಳುಹಿಸಿದ್ರು. ಪಿಎಫ್‌ಐ ಸಂಘಟನೆಗಳು ಬಲಿಷ್ಠವಾದ ನಂತರ ಮತಕ್ಕಾಗಿ ಕೇಸ್‌ಗಳನ್ನು ವಾಪಸ್ ಪಡೆದುಕೊಂಡ ದೇಶದ್ರೋಹಿಗಳು. ಆರ್‌ಎಸ್‌ಎಸ್ ಬಗ್ಗೆ ಏನೂ ಕಲ್ಪನೆ ಇಲ್ಲದಂತಹ ದಡ್ಡ ಶಿಕಾಮಣಿಗಳು ಅದರ ಬಗ್ಗೆ ಮಾತನಾಡುತ್ತಾರೆ.
ಇಂದು ದೇಶದ ಮೂಲೆ ಮೂಲೆಯಲ್ಲೂ ಆರ್‌ಎಸ್‌ಎಸ್ ತಯಾರಾಗುತ್ತಿದೆ. ದೇಶ ವಿದೇಶಗಳಲ್ಲೂ ಹರಡಿದೆ. ಕೊಲೆಯಾದ ಹಿಂದೂಗಳಲ್ಲೂ ಹಿಂದುಳಿದವರು, ಮುಂದುವರಿದವರು ಎಂದು ವಿಭಾಗ ಮಾಡಿ ಕುತಂತ್ರ ರಾಜಕಾರಣವನ್ನು ಕಾಂಗ್ರೆಸ್‌ನವರು ಮಾಡಿದರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅವರು ಮಾತನಾಡಿದರು

ಈ ದೇಶದ ಪ್ರಧಾನಿ ನರೇಂದ್ರ ಮೋದಿ ಕೂಡ ಆರ್‌ಎಸ್‌ಎಸ್‌ ನ ಪ್ರಾಡಕ್ಟ್. ಅನೇಕ ಸಮಾಜಮುಖಿ ಚಟುವಟಿಕೆಗಳನ್ನು ಆರ್‌ಎಸ್‌ಎಸ್ ಮಾಡುತ್ತಿದ್ದು, ದೇಶ - ವಿದೇಶಗಳು ಬೆಂಬಲ ಕೊಡುತ್ತಿವೆ. ಇದು ನಮಗೆ ಅಧಿಕಾರಕ್ಕೆ ತೊಂದರೆ ಕೊಡುತ್ತಿದೆ ಎಂಬ ಒಂದೇ ಕಾರಣಕ್ಕೆ ಸಿದ್ದರಾಮಯ್ಯ, ಇಬ್ರಾಹಿಂ ವಿರೋಧ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ಕಾಂಗ್ರೆಸ್​ ವಿಸರ್ಜಿಸುವಂತೆ ಗಾಂಧೀಜಿ ಹೇಳಿದ್ದರು: ದೇಶದಲ್ಲಿ ಕಾಂಗ್ರೆಸ್ ಸತ್ತು ಹೋಗಿದೆ. ಕರ್ನಾಟಕದಲ್ಲಿ ಎಲ್ಲೋ ಒಂದುಕಡೆ ಸ್ವಲ್ಪ ಉಸಿರಾಡುತ್ತಿದೆ. ಅವತ್ತು ಗಾಂಧೀಜಿ ಕಾಂಗ್ರೆಸ್‌ ಅನ್ನು ವಿಸರ್ಜನೆ ಮಾಡಿ ಎಂದಿದ್ದರು. ಆದರೆ, ಇವತ್ತು ಅವರವರೇ ವಿಸರ್ಜನೆ ಮಾಡಿಕೊಳ್ಳುತ್ತಿದ್ದಾರೆ. ಕಳೆದ ಲೋಕಸಭೆ ಚುನಾವಣೆ ವೇಳೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಬಿಜೆಪಿ ಎರಡು ಸೀಟು ಗೆಲ್ಲಲ್ಲ ಅಂದಿದ್ರು. ಆದರೆ, ಅವರು ಹೇಳಿದ ಭವಿಷ್ಯವೆಲ್ಲವೂ ಸುಳ್ಳಾಗಿ ಭವಿಷ್ಯ ಉಲ್ಟಾ ಆಗಿದೆ ಎಂದು ಕುಟುಕಿದ್ದಾರೆ.

ಕಾಂಗ್ರೆಸ್ ಪಕ್ಷವನ್ನು ಕುಟುಕಿದ ಈಶ್ವರಪ್ಪ: ತಿಹಾರ್ ಜೈಲಿಗೆ ಹೋಗಿರುವ ಡಿ.ಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷರು ಬಾರ್‌ನಲ್ಲಿ ಬಡಿದಾಡಿ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿದ್ದ ಗೂಂಡಾ ನಲಪಾಡ್, ಯೂತ್ ಕಾಂಗ್ರೆಸ್ ಅಧ್ಯಕ್ಷ ಇಂತಹವರ ಕೈಯಲ್ಲಿ ಕಾಂಗ್ರೆಸ್ ಇದೆ ಎಂದು ಪಕ್ಷವನ್ನು ಕುಟುಕಿದರು.

ಬೇಲೂರು ದಸರಾ ಮಹೋತ್ಸವಕ್ಕೆ ತೆರಳವ ಮಾರ್ಗ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಫ್‌ಐ ಬ್ಯಾನ್ ಮಾಡಿದ್ದನ್ನು ರಾ‌ಷ್ಟ್ರ ಭಕ್ತರು ಸ್ವಾಗತಿಸಿದ್ದಾರೆ. ಇದನ್ನು ವಿರೋಧ ಮಾಡುತ್ತಿರುವುದು ಸಿದ್ದರಾಮಯ್ಯ, ಇಬ್ರಾಹಿಂ. ಅವರಿಗೆ ಮುಸಲ್ಮಾನರ ವೋಟು ಮಾತ್ರಬೇಕು. ಅದರಲ್ಲೂ ರಾಷ್ಟ್ರದ್ರೋಹಿಗಳ ಮತಗಳು ಇದ್ದರೇ ಸಾಕು. ಯಾವುದೇ ಕಾರಣಕ್ಕೂ ಹಿಂದೂಗಳ ಮತ ನಮಗೆ ಬೇಡ ಎಂದು ಹೇಳಲಿ ಎಂದು ಸವಾಲು ಹಾಕಿದ್ರು.

ಕಳ್ಳರನ್ನು ಕೇಳಿ ಕೋರ್ಟ್‌ನಲ್ಲಿ ನೋಟಿಸ್ ಕೊಡಲ್ಲ. ಯಾವಾಗ ನೋಟಿಸ್ ಕೊಡ್ತಾರೆ ಆ ಸಂದರ್ಭದಲ್ಲಿ ವಿಚಾರಣೆಗೆ ಬರಬೇಕು ಎಂಬುದು ನಿಯಮ. ಇನ್ಮುಂದೆ ಡಿ. ಕೆ ಶಿವಕುಮಾರ್ ಅವರನ್ನು ಕೇಳಿ ರೇಡ್ ಮಾಡೋದು, ಕೋರ್ಟ್ ಕರೆಯುವ ಹಾಗೇ ಸಂವಿಧಾನ ತಿದ್ದುಪಡಿ ಮಾಡಿ ಕರೆಯಬೇಕಾಗುತ್ತೆ. ನನ್ನ ಮೇಲೆ ಒಂದೇ ಒಂದು ಕೇಸ್ ಇಲ್ಲ.

ಮೊನ್ನೆ ಒಂದು ಕೇಸ್ ಇದ್ದಿದ್ದು ಕ್ವಿಟ್ ಆಯ್ತು. ಕ್ಲೀನ್ ಚಿಟ್ ಎಂದು ಡಿಪಾರ್ಟ್ಮೆಂಟ್ ಕೊಟ್ಟೂ ಆಯ್ತು. ಯಡಿಯೂರಪ್ಪ ಅವರ ಮೇಲೆ ಕೇಸ್ ಇತ್ತು. ಜೈಲಿಗೆ ಹೋಗಿ ಬಂದಿದ್ದರು. ಆ ಕೇಸ್‌ನಿಂದ ಮುಕ್ತರಾಗಿ ಬಂದಿದ್ದಾರೆ. ಇವತ್ತು ಬಿಜೆಪಿ ನಾಯಕರ ಮೇಲೆ ಒಂದೇ ಒಂದು ಕೇಸ್ ಇಲ್ಲ ಎಂದು ಸಮರ್ಥಿಸಿಕೊಂಡ್ರು.

ಸ್ವಾತಂತ್ರ್ಯದ ಪೂರ್ವದಲ್ಲಿ ಇದ್ದಂತಹ ಕಾಂಗ್ರೆಸ್ ನಾಯಕರು ನಿಜವಾದ ರಾಷ್ಟ್ರಭಕ್ತರು. ಆದರೆ, ಇತ್ತೀಚೆಗೆ ಕಾಂಗ್ರೆಸ್‌ನಲ್ಲಿ ರಾಷ್ಟ್ರದ್ರೋಹಿಗಳನ್ನು ಬೆಂಬಲಿಸುವ ಕೆಲಸ ಆಗ್ತಿದೆ. ಪಿಎಫ್‌ಐ ಬಾಂಬ್ ತಯಾರಿಕೆ ಮಾಡುತ್ತಿರುವುದು, ಕೊಲೆ, ಸುಲಿಗೆ, ವಿದೇಶದಿಂದ ಹಣ ಪಡೆಯುತ್ತಿರುವುದು ಹಾಗೂ ಭಯೋತ್ಪಾದನಾ ಚಟುವಟಿಕೆಗಳಲ್ಲಿ ಭಾಗವಹಿಸಿರುವುದು ಸಾಬೀತಾದ ಮೇಲೆಯೇ ದಾಖಲೆ ಸಮೇತ ಬ್ಯಾನ್ ಮಾಡಿದ್ದಾರೆ. ಇದನ್ನು ಇಡೀ ದೇಶವೇ ಸ್ವಾಗತ ಮಾಡಿದೆ. ಆದರೆ ಸಿದ್ದರಾಮಯ್ಯ, ಸಿಎಂ ಇಬ್ರಾಹಿಂ ಮಾತ್ರ ವಿರೋಧ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಓದಿ: ಭಾರತ್ ಜೋಡೋ ಪಾದಯಾತ್ರೆ: ಮೈಸೂರಿಗೆ ಆಗಮಿಸಿದ ಸೋನಿಯಾ ಗಾಂಧಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.