ಹಾಸನ: ಬೇಲೂರು ಪುರಸಭೆಗೆ ನಡೆದ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಜೆಡಿಎಸ್ ಭದ್ರಕೋಟೆಯಲ್ಲಿ ಕಾಂಗ್ರೆಸ್ ಈ ಬಾರಿ ತನ್ನ ಬಾವುಟವನ್ನು ಹಾರಿಸಿದೆ.
ಕಳೆದ ಬಾರಿ 13 ಸ್ಥಾನಗಳನ್ನು ಗೆದ್ದಿದ್ದ ಜೆಡಿಎಸ್, ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಆದರೆ ಈ ಬಾರಿ ಕೇವಲ ಐದು ಸ್ಥಾನಗಳಿಗೆ ಸೀಮಿತವಾಗಿ ತೀವ್ರ ಮುಖಭಂಗ ಅನುಭವಿಸಿದೆ. ಕಾಂಗ್ರೆಸ್ 17 ಸ್ಥಾನ ಪಡೆದು ಭರ್ಜರಿ ಗೆಲುವು ಸಾಧಿಸಿದೆ.
ಚುನಾವಣೆ ಸಂದರ್ಭದಲ್ಲಿ ಅಷ್ಟೇ ಅಲ್ಲದೆ ಚುನಾವಣೆಗೂ ಮುನ್ನ ಮಾಜಿ ಸಚಿವ ಹೆಚ್.ಡಿ.ರೇವಣ್ಣ, ಪತ್ನಿ ಭವಾನಿ ರೇವಣ್ಣ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ವಿಶೇಷವಾಗಿ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ನೀಡಿದರು. ಆದ್ರೆ ಮತದಾನ ಪ್ರಭುಗಳು ಮಾತ್ರ ಜೆಡಿಎಸ್ಅನ್ನು ಈ ಬಾರಿ ತಿರಸ್ಕಾರ ಮಾಡಿರುವುದು ಜೆಡಿಎಸ್ಗೆ ಭಾರೀ ಹಿನ್ನಡೆಯಾಗಿದೆ.
ಇಂದು ಹೊರಬಿದ್ದ ಫಲಿತಾಂಶದಲ್ಲಿ ಕಾಂಗ್ರೆಸ್ 17 ಸ್ಥಾನ ಪಡೆದರೆ, ಜೆಡಿಎಸ್ 5 ಸ್ಥಾನಗಳನ್ನು ಪಡೆದಿದೆ. ಇನ್ನು ಬಿಜೆಪಿ ಪಕ್ಷ ಕೇವಲ 1 ಸ್ಥಾನ ಪಡೆಯುವ ಮೂಲಕ ತನ್ನ ಖಾತೆ ತೆರೆದಿದೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದು, ಹಾಸನದಲ್ಲಿ ಪ್ರೀತಮ್ ಗೌಡ ತಮ್ಮದೇ ವರ್ಚಸ್ಸನ್ನು ಉಳಿಸಿಕೊಂಡಿದ್ದಾರೆ. ಇದರ ನಡುವೆ ಬಿಜೆಪಿಯ ಜಿಲ್ಲಾಧ್ಯಕ್ಷರಾಗಿ ಬೇಲೂರಿನ ಹುಲ್ಲಹಳ್ಳಿ ಸುರೇಶ್ ಗೌಡ ಪುರಸಭಾ ಚುನಾವಣೆಯಲ್ಲಿ ಶ್ರಮ ವಹಿಸಿಲ್ಲ ಎನ್ನಲಾಗುತ್ತಿದೆ.