ETV Bharat / state

ಪ್ರಾಚೀನ ಕಾಲದ ಧಾನ್ಯ ಸಂಗ್ರಹಿಸುವ ಹಗೇವು ಈಗಲೂ ಇಲ್ಲಿ ಪ್ರಚಲಿತ

author img

By

Published : Oct 30, 2020, 11:49 AM IST

Updated : Oct 30, 2020, 12:53 PM IST

ಧಾನ್ಯ ಸಂರಕ್ಷಣೆ ಮಾಡುವ ಹಗೇವುಗಳು ಗದಗ ಜಿಲ್ಲೆಯ ತಿಮ್ಮಾಪುರ ಗ್ರಾಮದಲ್ಲಿ ಈಗಲೂ ಕಾಣ ಸಿಗುತ್ತವೆ. ಇಲ್ಲಿನ ಜನತೆ ಧಾನ್ಯಗಳನ್ನು ಭೂಮಿಯೊಳಗೆ ಸಂರಕ್ಷಣೆ ಮಾಡುವ ವಿಧಾನವನ್ನು ಇಂದಿಗೂ ಮುಂದುವರಿಸಿಕೊಂಡು ಬಂದಿದ್ದಾರೆ.

ಧಾನ್ಯ ಸಂಗ್ರಹಸುವ ಹಗೇವು
ಧಾನ್ಯ ಸಂಗ್ರಹಸುವ ಹಗೇವು

ಗದಗ: ಎತ್ತ ನೋಡಿದರತ್ತ ಬರೀ ಗುಂಡಿಗಳು. ಗುಂಡಿಗಳೊಳಗೆ ದವಸ, ಧಾನ್ಯಗಳ ಸಂಗ್ರಹ. ಗುಂಡಿಯಿಂದ ಟ್ರ್ಯಾಕ್ಟರ್​ಗೆ ಜೋಳ ತುಂಬುತ್ತಿರೋ ರೈತರು. ಗದಗ ಜಿಲ್ಲೆಯ ತಿಮ್ಮಾಪುರ ಗ್ರಾಮದಲ್ಲಿ ಧಾನ್ಯ ಸಂಗ್ರಹಿಸುವ ಪ್ರಾಚೀನ ಕಾಲದ ಅಪರೂಪದ ಹಗೇವಿನ ದೃಶ್ಯ ಕಂಡುಬಂತು.‌

ಉತ್ತರ ಕರ್ನಾಟಕ ಭಾಗದಲ್ಲಿ ಧಾನ್ಯ ಸಂರಕ್ಷಣೆ ಮಾಡುವ ಹಗೇವುಗಳು ಈಗಲೂ ಇಲ್ಲಿ ಪ್ರಚಲಿತದಲ್ಲಿವೆ. ಆದರೆ ಬಹಳಷ್ಟು ಗ್ರಾಮಗಳಲ್ಲಿ ಇದರ ನೆನಪು ಕೂಡಾ ಇಲ್ಲದಂತಾಗಿವೆ. ತಿಮ್ಮಾಪೂರ ಗ್ರಾಮದಲ್ಲಿ ಮಾತ್ರ ಧಾನ್ಯಗಳನ್ನು ಭೂಮಿಯೊಳಗೆ ಸಂರಕ್ಷಣೆ ಮಾಡುವ ವಿಧಾನ ಇಂದಿಗೂ ಮುಂದುವರಿದುಕೊಂಡು ಬಂದಿದೆ.‌ ಈ ತಿಮ್ಮಾಪುರ ಗ್ರಾಮದಲ್ಲಿ ಬರೋಬ್ಬರಿ 450ಕ್ಕೂ ಹೆಚ್ಚು ಹಗೇವುಗಳಿದ್ದು, ಆ ಪೈಕಿ 250ಕ್ಕೂ ಹೆಚ್ಚು ಹಗೇವುಗಳನ್ನು ರೈತರು ಈಗಲೂ ಬಳಕೆ ಮಾಡುತ್ತಿದ್ದಾರೆ.

ಧಾನ್ಯ ಸಂಗ್ರಹಿಸುವ ಪುರಾತನ ಕಾಲದ ಹಗೇವು ವ್ಯವಸ್ಥೆಯ ಬಗ್ಗೆ ವಿಶೇಷ ಸ್ಟೋರಿ

ಆಧುನಿಕತೆಯ ಭರಾಟೆಯಲ್ಲಿ ಸಾಂಪ್ರದಾಯಿಕವಾಗಿ ನೆಲದಡಿಯಲ್ಲಿ ಧಾನ್ಯ ಸಂಗ್ರಹಿಸಿಡುವ ಹಗೇವುಗಳು ನಿಧಾನಕ್ಕೆ ಕಣ್ಮರೆಯಾಗುತ್ತಿವೆ. ಆದರೆ ಈ ಗ್ರಾಮದಲ್ಲಿ ಮಾತ್ರ ನೂರಾರು ಹಗೇವುಗಳಿರುವುದು ಸಾಂಪ್ರದಾಯಿಕ ಕೃಷಿ ಪದ್ಧತಿ ಇನ್ನೂ ಜೀವಂತವಾಗಿರುವುದಕ್ಕೆ ಸಾಕ್ಷಿ. ತಿಮ್ಮಾಪುರ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆ ಮತ್ತು ಪಶು ಆಸ್ಪತ್ರೆ ಆವರಣದಲ್ಲಿರುವ ಗಾಂವಠಾಣ ಜಾಗದ 1.5 ರಿಂದ 2 ಎಕರೆ ಪ್ರದೇಶದಲ್ಲಿ ಒಂದೇ ಕಡೆ 450ಕ್ಕೂ ಹೆಚ್ಚು ಹಗೇವುಗಳಿವೆ. ಸದ್ಯ 250ಕ್ಕೂ ಹೆಚ್ಚು ಹಗೇವುಗಳು ಮಾತ್ರ ಸುಸ್ಥಿತಿಯಲ್ಲಿದ್ದು, ಈಗಲೂ ಸಾವಿರಾರು ಚೀಲಗಳ ಧಾನ್ಯ ಸಂಗ್ರಹ ಕಾಣಬಹುದು.

ತಿಮ್ಮಾಪುರ ಗ್ರಾಮದಲ್ಲಿ ಸದ್ಯ 1,500 ಮನೆಗಳಿವೆ. 5 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯಿದೆ. ಗ್ರಾಮಸ್ಥರ ಪರಸ್ಪರ ಸಹಕಾರ ಮನೋಭಾವದಿಂದ ಖಾಲಿ ಇರುವ ಹಗೇವುಗಳಲ್ಲಿ ಧಾನ್ಯಗಳನ್ನು ಎರಡು-ಮೂರು ವರ್ಷಗಳವರೆಗೆ ಸಂಗ್ರಹಿಸಿಟ್ಟು, ಬೆಲೆ ಬಂದಾಗ ಮಾರಿಕೊಳ್ಳುತ್ತಿದ್ದಾರೆ. 150 ಚೀಲ ಇಡಿಸುವ ಸಾಮರ್ಥ್ಯ ಹೊಂದಿರುವ, 30 ರಿಂದ 150 ಚೀಲ ಧಾನ್ಯ ಇರಿಸಬಹುದಾದಷ್ಟು ನೆಲದಿಂದ 10 ರಿಂದ 30 ಅಡಿ ಆಳದಲ್ಲಿ ದೊಡ್ಡ ಮತ್ತು ಸಣ್ಣ ಹಗೇವುಗಳಿವೆ. ಗ್ರಾಮದ ವ್ಯಾಪ್ತಿಯಲ್ಲಿ ಎರೆಭೂಮಿ (ಕಪ್ಪು ಮಣ್ಣು) ಹೆಚ್ಚಿದೆ.

ಬಿಳಿಜೋಳ, ಗೋಧಿ, ಕಡಲೆಯನ್ನು ಪ್ರಮುಖವಾಗಿ ಬೆಳೆಯಲಾಗುತ್ತದೆ. ಬೆಳೆ ಕೈಗೆ ಬಂದಾಗ ಬೆಲೆ ಇರಲ್ಲ. ಬೆಲೆ ಇದ್ದಾಗ ಬೆಳೆ ಇರಲ್ಲ. ಹಾಗಾಗಿ ಬೆಳೆ ಬಂದ ತಕ್ಷಣ ಈ ಹಗೇವುಗಳಲ್ಲಿ ಧಾನ್ಯಗಳನ್ನು ಸಂಗ್ರಹಿಸಲಾಗುತ್ತದೆ. ಒಂದೆರಡು ವರ್ಷದ ನಂತರ ಉತ್ತಮ ಧಾರಣೆ ಬಂದಾಗ ಮಾರಾಟ ಮಾಡಿಕೊಳ್ಳುತ್ತೇವೆ ಎನ್ನುತ್ತಾರೆ ತಿಮ್ಮಾಪುರ ಗ್ರಾಮಸ್ಥರು.

ಸಾಂಪ್ರದಾಯಿಕ ಕೃಷಿಯ ಭಾಗವಾಗಿರುವ ಈ ಹಗೇವುಗಳ ರಕ್ಷಣೆಗೆ ತಿಮ್ಮಾಪುರ ಗ್ರಾಮಸ್ಥರು ಮುಂದಾಗಿದ್ದಾರೆ. ಗಾಂವಠಾಣ ಪ್ರದೇಶವನ್ನು ಅತಿಕ್ರಮಣದಿಂದ ಮುಕ್ತಗೊಳಿಸಿ, ಅಲ್ಲಿರುವ ತಿಪ್ಪೆಗುಂಡಿ ತೆರವು ಮಾಡಿ ಕಾಂಪೌಂಡ್ ನಿರ್ಮಾಣಕ್ಕೆ ನಿರ್ಧರಿಸಿದ್ದಾರೆ. ಇನ್ನು ಹಗೇವುಗಳಲ್ಲಿ ಕಾಳುಗಳನ್ನು ತೆಗೆಯುವ ಮೊದಲು ಚಿಮುಣಿ ಬಿಡ್ತಾರೆ. ಒಂದು ವೇಳೆ ಚಿಮುಣಿ ಆರದಿದ್ದರೆ ಮಾತ್ರ ರೈತರು ಒಳಗೆ ಇಳಿದು ಕಾಳು ತುಂಬುತ್ತಾರೆ. ಆಕಸ್ಮತ್ತಾಗಿ ಆರಿದರೆ ಅಲ್ಲಿ ಆಮ್ಲಜನಕದ ಕೊರತೆ ಇರುತ್ತದೆ. ಈ ವೇಳೆ ಸಾವು ಸಹ ಸಂಭವಿಸಬಹುದು ಎನ್ನಲಾಗುತ್ತಿದೆ.

ಆಧುನಿಕತೆ ಬೆಳೆದಂತೆ ಹಗೇವುಗಳು ಕ್ಷೀಣಿಸುತ್ತಿವೆ. ಆದರೆ ತಿಮ್ಮಾಪೂರ ಗ್ರಾಮಸ್ಥರು ಮಾತ್ರ ಇವುಗಳನ್ನು ಉಳಿಸಿ ಬೆಳೆಸಿಕೊಂಡು ಹೋಗ್ತಿರೋದು ವಿಶೇಷ.

Last Updated : Oct 30, 2020, 12:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.