ETV Bharat / state

ಮೊಬೈಲ್ ಕಳೆದುಕೊಂಡರೆ ಇನ್ನು ಮುಂದೆ ಹೆದರಬೇಕಿಲ್ಲ.. ಯಾಕೆ ಗೊತ್ತಾ?

author img

By

Published : Feb 16, 2023, 9:08 AM IST

ಗದಗ ಪೊಲೀಸ್​ ಇಲಾಖೆಯಿಂದ ಮೊಬಿಫೈ ಆ್ಯಪ್​ ಸಿದ್ಧ- ಕಳೆದು ಹೋದ ಮೊಬೈಲ್​ ಹುಡುಕಲು ತಾಂತ್ರಿಕ ವ್ಯವಸ್ಥೆ - ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್ ನೇಮಗೌಡ ಮಾಹಿತಿ

mobifi
ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್ ನೇಮಗೌಡ

ಗದಗ: "ಮೊಬೈಲ್ ಕಳೆದುಕೊಂಡರೆ ಇನ್ನು ಮುಂದೆ ಹೆದರಬೇಕಿಲ್ಲ. ಕಳೆದುಹೋದ ಮೊಬೈಲ್​ಗಳನ್ನು ಹುಡುಕಿಕೊಡುವ ತಾಂತ್ರಿಕ ವ್ಯವಸ್ಥೆಯೊಂದನ್ನು ನಮ್ಮ ಪೊಲೀಸ್ ಇಲಾಖೆಯಿಂದ ಮಾಡಲಾಗಿದೆ" ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್ ನೇಮಗೌಡ ತಿಳಿಸಿದರು. ಈ ಬಗ್ಗೆ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊಬೈಲ್ ಕಳೆದುಕೊಂಡರೆ ತಕ್ಷಣ ಏನು ಮಾಡಬೇಕು? ಎಂಬ ಕೆಲವು ಮಾಹಿತಿಯನ್ನು ನೀಡಿದರು.

"ಇಲಾಖೆಯು 'ಮೊಬಿಫೈ (MobiFi)' ಎಂಬ ಹೊಸದೊಂದು ಆ್ಯಪ್ ಸಿದ್ದಪಡಿಸಿದ್ದು ತಂತ್ರಾಂಶದ ಮೂಲಕ ಕಳೆದು ಹೋದ ಮೊಬೈಲ್ ಅನ್ನು ಪತ್ತೆ ಮಾಡಬಹುದು. ಆದರೆ, ಇದಕ್ಕೆ ಕೆಲವು ಪ್ರಕ್ರಿಯೆಗಳಿದ್ದು, ಅವುಗಳನ್ನು ಕಡ್ಡಾಯವಾಗಿ ಭರ್ತಿ ಮಾಡಬೇಕಿದೆ. ಮೊಬೈಲ್ ಕಳೆದುಕೊಂಡ ತಕ್ಷಣ ಯಾರೂ ಕೂಡ ಪೊಲೀಸ್ ಠಾಣೆಗೆ ಹೋಗಬೇಕೆಂದಿಲ್ಲ. ಇದ್ದ ಜಾಗದಿಂದಲೇ ಕೆಲವು ಮಾಹಿತಿಯನ್ನು ಆ್ಯಪ್​ನಲ್ಲಿ ಭರ್ತಿ ಮಾಡಿದರೆ ಸಾಕು. ಸುಲಭವಾಗಿ ನಿಮ್ಮ ಮೊಬೈಲ್ ಮತ್ತೆ ನಿಮ್ಮ ಕೈ ಸೇರಬಹುದು" ಎಂದು ತಿಳಿಸಿದರು.

ಮೊಬೈಲ್ ಕಳೆದುಕೊಂಡ ತಕ್ಷಣ ನೀವೇನು ಮಾಡಬೇಕು?: "ಬೇರೆಯವರ ಅಥವಾ ಸಂಬಂಧಿಕರ ಮೊಬೈಲ್ ಮೂಲಕ ಪೊಲೀಸ್ ಇಲಾಖೆಯ 8277969900 ಈ ನಂಬರ್​ಗೆ Hi ಅಂತ ಮೆಸೇಜ್ ಕಳುಹಿಸಬೇಕು. ತಕ್ಷಣವೇ ಮೊಬೈಲ್ ವಾಟ್ಸ್​ಆ್ಯಪ್​​ಗೆ ಒಂದು ಲಿಂಕ್ ಸಂದೇಶ ಬರುತ್ತದೆ. ಆ ಲಿಂಕ್ ಅನ್ನು ಓಪನ್ ಮಾಡಿ ತಮ್ಮ ಕಳೆದುಹೋದ ಮೊಬೈಲ್ ಸಂಖ್ಯೆ ಸೇರಿದಂತೆ ಕೆಲವು ಮಾಹಿತಿಯನ್ನು ಪೂರ್ತಿಯಾಗಿ ಭರ್ತಿ ಮಾಡಬೇಕು. ಆಗ ಭರ್ತಿಯಾದ ಮಾಹಿತಿ ಮೇರೆಗೆ ದೂರು ದಾಖಲಾಗುತ್ತದೆ. ಈ ದೂರು ಪ್ರಕಾರ ಕಳೆದುಹೋದ ಮೊಬೈಲ್ ಅನ್ನು ಕೆಲವು ತಂತ್ರಾಂಶದ ಪ್ರಕ್ರಿಯೆ ಮೂಲಕ ಹುಡುಕಿಕೊಡಲಾಗುವುದು. ಒಂದು ವೇಳೆ ಪತ್ತೆಯಾಗದೇ ಇದ್ದಲ್ಲಿ ಆ ಮೊಬೈಲ್ ಅನ್ನೇ ಬ್ಲಾಕ್ ಮಾಡಲಾಗುತ್ತದೆ. ಇದು ರಾಜ್ಯದಲ್ಲಿಯೇ ಗದಗ ಪೊಲೀಸರಿಂದ ಹೊಸದೊಂದು ಪ್ರಯೋಗವಾಗಿದೆ" ಎಂದು ಹೇಳಿದರು.

ಇದನ್ನೂ ಓದಿ: ಮಹದಾಯಿ ನದಿಯನ್ನು ಮಲಪ್ರಭಾಗೆ ಜೋಡಿಸುವ ಮೂಲಕ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧ: ಸಿಎಂ ಬೊಮ್ಮಾಯಿ

"ಜಿಲ್ಲೆಯಲ್ಲಿ ಆಗಾಗ ಮೊಬೈಲ್ ಕಳೆದುಕೊಂಡ ಮತ್ತು ಕಳ್ಳತನವಾದ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಇನ್ನು ಮುಂದೆ ಮೊಬೈಲ್ ಕಳೆದುಕೊಂಡವರು ಪೊಲೀಸ್ ಠಾಣೆಗೆ ಹೋಗಿಯೇ ದೂರು ನೀಡಬೇಕು ಅಂತೇನಿಲ್ಲ. ತಾವು ಇದ್ದ ಜಾಗದಿಂದಲೇ ಕೆಲವು ಕ್ರಮಗಳನ್ನು ಪಾಲಿಸಿದರೆ ಸಾಕು. ಇದೊಂದು ಹೊಸ ಪ್ರಯತ್ನವಾಗಿದ್ದು, ಸದ್ಯ ಗದಗ ಜಿಲ್ಲೆಯಲ್ಲಿ ಮಾತ್ರ ಈ ವಿನೂತನ ಪ್ರಯೋಗವನ್ನು ನಡೆಸಲಾಗುತ್ತಿದೆ. ಇದರ ಕಾರ್ಯವಿಧಾನ ಮತ್ತು ಸಾಧಕ - ಭಾದಕಗಳ ಬಳಿಕ ಈ ಆ್ಯಪ್ ಅನ್ನು ಮತ್ತಷ್ಟು ಅಭಿವೃದ್ಧಿಪಡಿಸಲಾಗುತ್ತದೆ" ಎಂದು ನುಡಿದರು.

ಇನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಹೊಸ ತಂತ್ರಾಂಶದ ಕ್ರಮ ಕೈಗೊಂಡ ಗದಗ ಪೊಲೀಸ್ ಇಲಾಖೆಗೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಈ ಆ್ಯಪ್​ ಅನ್ನು ರಾಜ್ಯದ ಎಲ್ಲಾ ಕಡೆಗಳಲ್ಲೂ ಬಳಸುವಂತೆ ನೋಡಿಕೊಂಡಲ್ಲಿ ಮೊಬೈಲ್​ ಕಳ್ಳತನದ ಪ್ರಕರಣ ಮತ್ತಷ್ಟು ಕಡಿಮೆಯಾಗಬಹುದು. ಅಲ್ಲದೇ ಜನರಿಗೆ ಪೊಲೀಸ್​ ಠಾಣೆಯ ಮೆಟ್ಟಿಲೇರುವ ಪ್ರಸಂಗವು ತಪ್ಪಬಹುದು.

ಇದನ್ನೂ ಓದಿ: ಕಳಪೆ ಗುಣಮಟ್ಟದ ಔಷಧ ಮಾರಾಟ: ಸಂಸ್ಥೆ, ಪಾಲುದಾರರ ವಿರುದ್ಧ ಪ್ರಕರಣ ರದ್ದು ಮಾಡಲು ಹೈಕೋರ್ಟ್ ನಿರಾಕರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.