ETV Bharat / state

ಸಿಸಿ ಪಾಟೀಲ್ ನನಗೆ ಯಾಮಾರಿಸಿ ಎರಡು ಸಾವಿರ ಕೋಟಿ ಅನುದಾನ ತಂದಿದ್ದಾರೆ : ಸಿಎಂ ಬೊಮ್ಮಾಯಿ

author img

By

Published : Mar 11, 2023, 7:34 AM IST

Updated : Mar 11, 2023, 7:50 AM IST

ಬೇರೆ ಪಕ್ಷಗಳಂತೆ ಸುಳ್ಳು ಹೇಳಿ ಅಧಿಕಾರ ಹಿಡಿಯಲ್ಲ - ಅಭಿವೃದ್ಧಿ ಮಂತ್ರದ ಮೂಲಕವೇ ನಾವು ಅಧಿಕಾರಕ್ಕೆ ಬರುತ್ತೇವೆ - ವಿಜಯ ಸಂಕಲ್ಪ ಯಾತ್ರೆ ಸಮಾವೇಶದಲ್ಲಿ ಸಿಎಂ ಬೊಮ್ಮಾಯಿ ಹೇಳಿಕೆ

ಸಿಎಂ ಬಸವರಾಜ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ

ಗದಗ: ವಿಜಯ ಸಂಕಲ್ಪ ಯಾತ್ರೆಗೆ ಬಂದ ಜನರನ್ನು ನೋಡಿದರೆ ಇದು ವಿಜಯೋತ್ಸವ ಅನಿಸುತ್ತಿದೆ. ಇದು ವಿಜಯೋತ್ಸವ ಕಾರ್ಯಕ್ರಮ ಏಕೆ ಆಗಬಾರದು? 2023ರ ವಿಜಯೋತ್ಸವ ಸಂಭ್ರಮ ಆಗಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಜಿಲ್ಲೆಯ ನರಗುಂದದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಉಳಿದ ಪಕ್ಷಗಳಂತೆ ನಾವು ಸುಳ್ಳು ಭರವಸೆ ನೀಡಿ ಅಧಿಕಾರ ಹಿಡಿಯುವುದಿಲ್ಲ. ಅಭಿವೃದ್ಧಿ ನಮ್ಮ ಮಂತ್ರವಾಗಿದ್ದು, ನಾವು ಮಾಡಿರುವ ಆ ಅಭಿವೃದ್ಧಿ ಕೆಲಸಗಳ ಮೂಲಕವೇ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗ್ರಾಮೀಣ ಪ್ರದೇಶದ ಚಿತ್ರಣ ಬದಲಾಗಬೇಕು: ಒಂದು ಮನೆಗೆ ಏನು ಬೇಕೋ ಅದನ್ನು ಕೊಟ್ಟಿದ್ದು‌ ಪ್ರಧಾನಿ ಮೋದಿಜಿ. ರಾಜ್ಯ ಸರ್ಕಾರದಿಂದ ಜಾರಿಗೆ ತರಲಾದ ರೈತ ವಿದ್ಯಾನಿಧಿ ಮೂಲಕ ರೈತರ ಮಕ್ಕಳಿಗೆ ಸಾಕಷ್ಟು ಅನುಕೂಲವಾಗಿದೆ. ರೈತರ ಬದುಕು, ರೈತ ಮಕ್ಕಳ ಪರಸ್ಥಿತಿಯನ್ನು ಕಣ್ಣಾರೆ ನೋಡಿದ್ದೇವೆ. ಗ್ರಾಮೀಣ ಪ್ರದೇಶದ ಎಲ್ಲ ಮನೆಗಳ ಚಿತ್ರಣ ಬದಲಾಗಬೇಕು. ಇದು ನಮ್ಮ ಸರ್ಕಾರದ ಮಹತ್ವದ ಯೋಜನೆ ಎಂದು ಸಿಎಂ ಹೇಳಿದರು.

ಹುಟ್ಟುತ್ತ ಬಡವರಾಗಿದ್ದರೂ ಕೂಡಾ ಅವಕಾಶಗಳನ್ನು ಬಳಸಿಕೊಂಡು ಜನರು ಮುಂದೆ ಬರಲು ನಮ್ಮ ಸರ್ಕಾರ ಸಹಾಯ ಮಾಡುತ್ತಿದೆ. ದುಡಿಯುವ ವರ್ಗಕ್ಕೆ ನಮ್ಮ ಸರ್ಕಾರ ಮೊದಲು ಮಾನ್ಯತೆ ಕೊಡುತ್ತಿದೆ. ಮಹಿಳೆಯರಿಗೆ ಪ್ರತಿ ತಿಂಗಳು 1 ಸಾವಿರ ಹಣ ಕೂಡುವ ಕೆಲಸ ಮಾಡುತ್ತಿದೆ. ರೈತರಿಗೆ ಬೀಜ ಗೊಬ್ಬರ ಕೊಡಲು ವಿನೂತನ ಯೋಜನೆ ಮಾಡಿದ್ದೇವೆ. ವಿದ್ಯಾರ್ಥಿನಿಯರಿಗೆ, ದುಡಿಯವ ಹೆಣ್ಣು ಮಕ್ಕಳಿಗೆ ಉಚಿತ ಬಸ್ ಪಾಸ್ ಕೊಡುವ ಕಾರ್ಯ ಮಾಡಿದ್ದೇವೆ ಎಂದು ಸರ್ಕಾರದ ಸಾಧನೆಗಳನ್ನು ಬಿಚ್ಚಿಟ್ಟರು.

ಬಿಜೆಪಿ ಪಕ್ಷದ ಶ್ರಮ: ಕಳಸಾ ಬಂಡೂರಿ ಯೋಜನೆ ತರುವಲ್ಲಿ ಬಿಜೆಪಿ ಪಕ್ಷದ ಶ್ರಮ ದೊಡ್ಡದಿದೆ. ಕಳಸಾಗಾಗಿ 2003ರಲ್ಲಿ ಕಲ್ಲು, ಮುಳ್ಳು, ಬಿಸಿಲು ಎನ್ನದೇ ಪಾದಯಾತ್ರೆ ಮಾಡಿದ್ದೇವೆ. ಅವತ್ತಿನ ಸಿಎಂ ಸಹ ಹಿಂದೆ-ಮುಂದೆ ಮಾಡಿದರು ಎಂದು ಅಂದಿನ ಘಟನಾವಳಿಯನ್ನು ಸ್ಮರಿಸಿದರು. ನೀರು ಕೊಡುವಂತೆ ಕೇಳಿದರೆ ಇಲ್ಲಿನ ನೂರಾರು ರೈತರನ್ನು, ರೈತ ಹೆಣ್ಮಕ್ಕಳನ್ನು ಮನೆಯೊಳಗೆ ನುಗ್ಗಿ ಬೂಟು ಗಾಲಿನಲ್ಲಿ ಒದ್ದರು. ಮನ ಬಂದಂತೆ ರೈತರನ್ನು ಹೊಡೆದರು. ರೈತರ ಬಗ್ಗೆ ಕಾಳಜಿ ಇದ್ದರೆ ಎಲ್ಲರೊಂದಿಗೆ ಕುಳಿತುಕೊಂಡು ಚರ್ಚೆ ಮಾಡುತ್ತಿದ್ದರು. ಆದರೆ, ಅವರು ಹಾಗೆ ಮಾಡಲಿಲ್ಲ ಎಂದು ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡರು. ಸಚಿವ ಸಿಸಿ ಪಾಟೀಲ್ ನನಗೆ ಯಾಮಾರಿಸಿ ಎರಡು ಸಾವಿರ ಕೋಟಿ ಅನುದಾನ ತೆಗೆದುಕೊಂಡು ಬಂದರು. ಇಷ್ಟು ದೊಡ್ಡ ಪ್ರಮಾಣದಲ್ಲಿ ಕೆಲಸ ಮಾಡುವ ತಾಕತ್ತು ಈ ಕ್ಷೇತ್ರದಲ್ಲಿ ಯಾರಿಗೂ ಇಲ್ಲ ಎಂದು ಸಚಿವರ ಕಾರ್ಯವೈಖರಿಯನ್ನು ಸಿಎಂ ಬೊಮ್ಮಾಯಿ ಕೊಂಡಾಡಿದರು.

ಮೋದಿ ಫೋನ್​ ಕಾಲ್​.. ಕಾರ್ಯಕ್ರಮ ನಡೆಯುತ್ತಿದ್ದಾಗಲೇ ಮುಖ್ಯಮಂತ್ರಿ ಬಸರಾಜ ಬೊಮ್ಮಯಿ ಅವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಫೋನ್ ಮೂಲಕ ಕರೆ ಮಾಡಿದರು. ಆಗ ಸಚಿವ ಸಿ ಸಿ ಪಾಟೀಲ್ ಅವರು ಮೈಕ್ ಹಿಡಿದು ಎಲ್ಲರೂ ಶಾಂತಿಯುತವಾಗಿ ಇರಲು ಮನವಿ ಮಾಡಿಕೊಂಡರು. ಕೇಕೆ, ಕೂಗಾಟದಿಂದ ಕೊಡಿದ್ದ ಸಮಾರಂಭವು ಕೆಲಹೊತ್ತು ಸ್ತಬ್ಧವಾಯಿತು.

ಇದನ್ನೂ ಓದಿ: ಆಮ್‌ ಆದ್ಮಿ ಪಾರ್ಟಿಗೆ ಗುಬ್ಬಿ ವೀರಣ್ಣ ಮರಿಮೊಮ್ಮಗಳು ಸುಷ್ಮಾವೀರ್‌ ಸೇರ್ಪಡೆ..

Last Updated : Mar 11, 2023, 7:50 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.