ಬೆಂಗಳೂರು-ಗದಗ ಮಧ್ಯೆ ವೋಲ್ವೋ ಬಸ್ ಸಂಚಾರ: ಮಾಜಿ ಕ್ರಿಕೆಟಿಗ ಸುನಿಲ್ ಜೋಶಿ ಮನವಿಗೆ ಮನ್ನಣೆ

author img

By

Published : Jan 11, 2023, 7:58 AM IST

Updated : Jan 11, 2023, 12:11 PM IST

volvo bus service

ಬೆಂಗಳೂರಿನಿಂದ ಗದಗಕ್ಕೆ ವೋಲ್ವೋ ಬಸ್‌ ಸೇವೆ ಪ್ರಾರಂಭಿಸಬೇಕು ಎಂದು ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಸುನಿಲ್ ಜೋಶಿ ಟ್ವೀಟ್ ಮೂಲಕ ಇತ್ತೀಚೆಗೆ ಸರ್ಕಾರಕ್ಕೆ ಮನವಿ ಮಾಡಿದ್ದರು.

ಗದಗ: ಜನವರಿ 9ರಿಂದ ಬೆಂಗಳೂರು ಮತ್ತು ಗದಗ ನಡುವೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ವತಿಯಿಂದ ಐರಾವತ ಬಸ್ ಸೇವೆ ಆರಂಭಿಸುವುದಾಗಿ ರಾಜ್ಯ ಸಾರಿಗೆ ಸಚಿವ ಬಿ. ಶ್ರೀರಾಮುಲು ಭರವಸೆ ನೀಡಿದ್ದರು. ಇದೀಗ ಬಸ್ ವೇಳಾಪಟ್ಟಿ ಹಾಗೂ ಸಾಗುವ ಮಾರ್ಗವನ್ನು ಸಾರಿಗೆ ಇಲಾಖೆ ಘೋಷಿಸಿದೆ. ಈ ಹಿಂದೆ, ನಗರಕ್ಕೆ ವೋಲ್ವೋ ಬಸ್‌ ಸೇವೆ ಬೇಕೆಂದು ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಸುನಿಲ್ ಜೋಶಿ ಟ್ವೀಟ್‌ ಮೂಲಕ ಮನವಿ ಮಾಡಿದ್ದರು. ಜೋಶಿ ಮನವಿಗೆ ಸಚಿವರು ಸ್ಪಂದಿಸಿದ್ದು, ನಿನ್ನೆಯಿಂದಲೇ ಬಸ್​ ಸಂಚಾರ ಶುರುವಾಗಿದೆ.

volvo bus service
ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಸುನಿಲ್ ಜೋಶಿ ಟ್ವೀಟ್

ಬಸ್​ ಸಂಚರಿಸುವ ಮಾರ್ಗಗಳು: ಬೆಂಗಳೂರು ಮತ್ತು ಗದಗ ನಡುವೆ ವೋಲ್ವೋ ಬಸ್ ಪ್ರತಿದಿನ ಚಿತ್ರದುರ್ಗ, ಹರಿಹರ, ಮುಂಡರಗಿ ಮಾರ್ಗವಾಗಿ ಸಂಚರಿಸಲಿದೆ. ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದ ಟರ್ಮಿನಲ್-1 ರಿಂದ ರಾತ್ರಿ 10:15ಕ್ಕೆ ಐರಾವತ ಬಸ್‌ ಹೊರಡಲಿದೆ. ನವರಂಗ್, ಯಶವಂತಪುರ ಗೋವರ್ಧನ್ ಚಿತ್ರಮಂದಿರ, ಗೊರಗುಂಟೆಪಾಳ್ಯ ಕೆಎಲ್‌ಇ ಡೆಂಟಲ್ ಕಾಲೇಜು, ಜಾಲಹಳ್ಳಿ ಕ್ರಾಸ್, ನೆಲಮಂಗಲ ಮೂಲಕ ಹಾದು ಹೋಗಲಿದೆ. ಬೆಂಗಳೂರಿನಿಂದ ಹೊರಟ ಬಸ್ ದಾವಣಗೆರೆ, ಹರಿಹರ, ಹರಪನಹಳ್ಳಿ, ಹೂವಿನ ಹಡಗಲಿ, ಮುಂಡರಗಿ ಮೂಲಕ ಸಾಗಿ ಬೆಳಗ್ಗೆ 6.30ಕ್ಕೆ ಗದಗ ನಗರ ತಲುಪುತ್ತದೆ ಎಂದು ಗದಗ ವಿಭಾಗಿಯ ಸಂಚಾರ ಅಧಿಕಾರಿಗ ಜಿ ಐ ಬಸವಂತಪುರ ತಿಳಿಸಿದ್ದಾರೆ.

ಇದನ್ನೂ ಓದಿ: ಗದಗಕ್ಕೆ ವೋಲ್ವೊ ಬಸ್‌ ನೀಡುವಂತೆ ಸುನಿಲ್ ಜೋಶಿ ಮನವಿ: ಸಾರಿಗೆ ಸಚಿವ ಶ್ರೀರಾಮುಲು ಸ್ಪಂದನೆ

ಸುನಿಲ್ ಜೋಶಿ ಮನವಿ: ಮಾಜಿ ಕ್ರಿಕೆಟಿಗ ಸುನಿಲ್ ಜೋಶಿ ಅವರು ಗದಗ ನಗರಕ್ಕೆ ಐರಾವತ ಬಸ್ ಸೇವೆ ಮಾಡುವಂತೆ ಇತ್ತೀಚಿಗೆ ಟ್ವೀಟ್ ಮಾಡಿ ಸಿಎಂ ಬಸವರಾಜ ಬೊಮ್ಮಾಯಿ ಅವರ ವೈಯಕ್ತಿಕ ಟ್ವಿಟರ್‌ ಖಾತೆಗೆ ಟ್ಯಾಗ್ ಮಾಡಿದ್ದರು. ಟ್ವೀಟ್​ನಲ್ಲಿ 'ಬೆಂಗಳೂರಿನಿಂದ ಗದಗಕ್ಕೆ ವೋಲ್ವೋ ಬಸ್ ಸೇವೆ ಆರಂಭವಾಗಬೇಕು. ಇದಕ್ಕಾಗಿ ನಾವು 25 ವರ್ಷಗಳಿಂದ ಕಾಯುತ್ತಿದ್ದೇವೆ. ಈಗ ಐರಾವತ ಬಸ್ ಗದಗಕ್ಕೆ ಬರುವ ಸಮಯ' ಎಂದು ಹೇಳಿದ್ದರು.

volvo bus service
ಸಾರಿಗೆ ಸಚಿವ ಬಿ ಶ್ರೀರಾಮುಲು ಟ್ವೀಟ್​

ಈ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ್ದ ಬಿ.ಶ್ರೀರಾಮುಲು, 'ಜನವರಿ 9 ರ ಸೋಮವಾರದಿಂದಲೇ ಬೆಂಗಳೂರು-ಗದಗ ನಡುವೆ ಐರಾವತ ಬಸ್ ಸೇವೆ ಆರಂಭಿಸುತ್ತೇವೆ' ಎಂದು ತಿಳಿಸಿದ್ದರು. ಅಲ್ಲದೇ, ತಮ್ಮ ಮತ್ತು ಜಿಲ್ಲೆಯ ನಡುವಿನ ಒಡನಾಟದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಗದಗ ಪುಟ್ಟರಾಜ ಗವಾಯಿಗಳ ಪುಣ್ಯಭೂಮಿ, ನನ್ನ ಹೃದಯಕ್ಕೆ ಹತ್ತಿರವಾದ ಜಿಲ್ಲೆ ಎಂದು ಬರೆದುಕೊಂಡಿದ್ದರು.

ಇದನ್ನೂ ಓದಿ: ಸುರತ್ಕಲ್​ನಲ್ಲಿದೆ ಹೈಟೆಕ್ ಬಸ್ ಸ್ಟಾಪ್: ಯುವತಿಯರಿಗೆ ಕಿರುಕುಳ ಕೊಟ್ರೆ ಮೊಳಗುತ್ತೆ ಸೈರನ್!​

Last Updated :Jan 11, 2023, 12:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.