ಗದಗ: ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಪೊಲೀಸ್, ವೈದ್ಯಕೀಯ ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಅದರಲ್ಲೂ ಮನೆ, ಮಕ್ಕಳು, ಹೆಂಡತಿಯ ಮುಖ ನೋಡಲೂ ಆಗದ ಸ್ಥಿತಿಯಲ್ಲಿದ್ದಾರೆ. ಆ್ಯಂಬುಲೆನ್ಸ್ ಚಾಲಕರ ಶ್ರಮ ಶ್ಲಾಘನೀಯವಾಗಿದ್ದು, ಇಲ್ಲೊಂದು ತಂದೆ- ಮಗನ ಸಂಭಾಷಣೆ ನಿಜಕ್ಕೂ ಮನ ಮಿಡಿಯುವಂತಿದೆ.
ಹೌದು, ಗದಗ ಜಿಲ್ಲೆಯಲ್ಲಿ ಇಂತಹದೊಂದು ಮನ ಹೃದಯಸ್ಪರ್ಶಿ ಘಟನೆ ಬೆಳಕಿಗೆ ಬಂದಿದೆ. ವಾರಗಟ್ಟಲೇ ಮನೆಗೆ ತೆರಳದೆ ಹಗಲಿರುಳು ಆ್ಯಂಬುಲೆನ್ಸ್ ಚಾಲನೆ ಮಾಡ್ತಿರೋ ಮದಲಿಂಗಪ್ಪ ಬಾರಕೇರ ಅವರು, ಮನೆಯಲ್ಲಿರುವ ಮಗನನ್ನು ಒಮ್ಮೆ ನೋಡ್ಕೊಂಡು ಹೋಗೋಣ ಎಂದು ಮನೆಗೆ ಬಂದಿದ್ದಾರೆ. ಆದ್ರೆ ಮನೆಯೊಳಗೆ ಹೋಗದೆ ಹೊರಗಡೆಯೇ ನಿಂತುಕೊಂಡು ಕಿಟಕಿಯ ಹೊರಗಿನಿಂದಲೇ ಮಗನೊಂದಿಗೆ ಮಾತನಾಡಿದ್ದಾರೆ. ಈ ದೃಶ್ಯ ಮನಮಿಡಿಯುವಂತಿದೆ.
ನರಗುಂದ ಪಟ್ಟಣದ ಸರ್ಕಾರಿ ತಾಲೂಕು ಆಸ್ಪತ್ರೆಯಲ್ಲಿ ಮದಲಿಂಗಪ್ಪ ಆ್ಯಂಬುಲೆನ್ಸ್ ಚಾಲಕನಾಗಿ ಕಾರ್ಯನಿರ್ವಹಿಸುತ್ತಿರುವ ಹಿನ್ನೆಲೆ ಸೆಲ್ಫ್ ಕ್ವಾರಂಟೈನ್ನಲ್ಲಿ ಇದ್ದಾರೆ. ಮನೆಗೆ ಹೋದರೂ ಸಹ ಮಗನನ್ನು ಮುದ್ದಾಡುವಂತಿಲ್ಲ. ಹಾಗಾಗಿ ಮನೆ ಹೊರಗೇ ನಿಂತು ನಾಲ್ಕು ವರ್ಷದ ಮಗನನ್ನು ನೋಡುತ್ತಾ, ಕಿಟಕಿಯಲ್ಲೇ ಮಾತನಾಡಿಸಿದ್ದಾರೆ. ಈ ವೇಳೆ ಪುಟ್ಟ ಬಾಲಕ ಪಪ್ಪಾ, ನಿನ್ನ ಬಿಟ್ಟು ಇರೋದಕ್ಕೆ ಆಗ್ತಿಲ್ಲ, ನೀನು ಯಾವಾಗ ಮನೆಯೊಳಗೆ ಬರ್ತಿಯಾ ಅಂತ ಪ್ರಶ್ನಿಸಿದ್ದಾನೆ. ಇದಕ್ಕೆ ತಂದೆ ಪ್ರತಿಕ್ರಿಯಿಸಿ, ಇನ್ನೊಂದು ವಾರ ಬಿಟ್ಟು ಬರ್ತಿನಿ ಮಗನೇ ಎನ್ನುವ ಮೂಲಕ ಮಗನನ್ನು ಸಮಾಧಾನ ಪಡಿಸಿದ್ದಾರೆ.