ETV Bharat / state

ನಾಳೆ ಹುಬ್ಬಳ್ಳಿಗೆ ಪ್ರಧಾನಿ ಆಗಮನ ಹಿನ್ನೆಲೆ ಕೆಲವೆಡೆ ಸಂಚಾರ ನಿಷೇಧ, ಮಾರ್ಗ ಬದಲಾವಣೆ

author img

By

Published : Jan 11, 2023, 11:00 AM IST

26ನೇ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹುಬ್ಬಳ್ಳಿಗೆ ನಾಳೆ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಸಂಚಾರ ಮಾರ್ಗದಲ್ಲಿ ಕೆಲ ಬದಲಾವಣೆ, ಪ್ರತ್ಯೇಕ ಪಾರ್ಕಿಂಗ್​ ವ್ಯವಸ್ಥೆ ಮಾಡಲಾಗಿದೆ.

traffic-route-changes-for-prime-minister-visit-to-hubballi
ನಾಳೆ ಹುಬ್ಬಳ್ಳಿಗೆ ಪ್ರಧಾನಿ ಆಗಮನ ಹಿನ್ನೆಲೆ ಕೆಲವೆಡೆ ಸಂಚಾರ ನಿಷೇಧ, ಮಾರ್ಗ ಬದಲಾವಣೆ

ಹುಬ್ಬಳ್ಳಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನಾಳೆ (ಜ.12) ಹುಬ್ಬಳ್ಳಿಗೆ ಆಗಮಿಸಲಿದ್ದಾರೆ. 5 ದಿನಗಳವರೆಗೆ ನಡೆಯಲಿರುವ 26ನೇ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮಕ್ಕೆ ಮೋದಿ ಚಾಲನೆ ನೀಡಲಿದ್ದಾರೆ. ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ನಗರದಲ್ಲಿ ಸಂಚಾರ ಮಾರ್ಗದಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ಜೊತೆಗೆ ವಾಹನ ನಿಲುಗಡೆಗೆ ಪ್ರತ್ಯೇಕ ಸ್ಥಳಗಳನ್ನು ನಿಗದಿಪಡಿಸಲಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ರಮಣ್ ಗುಪ್ತಾ ತಿಳಿಸಿದ್ದಾರೆ.

ಯುವಜನೋತ್ಸವ ಕಾರ್ಯಕ್ರಮದಲ್ಲಿ ದೇಶದ 28 ರಾಜ್ಯಗಳು, 8 ಕೇಂದ್ರಾಡಳಿತ ಪ್ರದೇಶಗಳಿಂದ ಯುವಕರು ಪಾಲ್ಗೊಳ್ಳಲಿದ್ದಾರೆ. ಉದ್ಘಾಟನಾ ದಿನ ನಾಳೆ ಯುವಕರ ಕುರಿತ ಎಲ್ಲ ವಿಚಾರಗಳ ಬಗ್ಗೆ ಪ್ರಧಾನಿ ಮೋದಿ ಭಾಷಣ ಮಾಡಲಿದ್ದಾರೆ. ಈಗಾಗಲೇ ಸುರಕ್ಷತೆ ದೃಷ್ಟಿಯಿಂದ ಎಸ್.ಪಿ.ಜಿ, ಡಿ.ಐ.ಜಿ ಎನ್ ಕೆ ಮೆಹತಾ ನೇತೃತ್ವದ ತಂಡವು ಭದ್ರತಾ ಸುವ್ಯವಸ್ಥೆಯನ್ನು ಪರಿಶೀಲಿಸಿದೆ.

traffic-route-changes-for-prime-minister-visit-to-hubballi
ಪೊಲೀಸ್ ಆಯುಕ್ತರ ಸೂಚನೆ

11 ಮತ್ತು 12ರಂದು ವಾಹನಗಳ ಸಂಚಾರ ನಿಷೇಧ: ಜನವರಿ‌ 11 ಮತ್ತು 12ರಂದು ಮಧ್ಯಾಹ್ನ 01ರಿಂದ ಸಂಜೆ 7 ಗಂಟೆವರೆಗೆ ಗೋಕುಲ ರಸ್ತೆ ಮಾಪ್ಸಲ್ ಡಿಪೋದಿಂದ ಸಿದ್ದೇಶ್ವರ ಪಾರ್ಕ್, ಶಿರೂರ ಪಾರ್ಕ್, ಕಿಮ್ಸ್ ಮುಖ್ಯ ರಸ್ತೆ, ಹೊಸೂರ ರಸ್ತೆ, ಭಗತಸಿಂಗ್ ವೃತ್ತ, ಪ್ರವಾಸಿ ಮಂದಿರ ಎದುರು (ಐಬಿ), ಬಾಳಿಗಾ ಕ್ರಾಸ್, ದೇಸಾಯಿ ಕ್ರಾಸ್, ರೈಲ್ವೆ ಮೈದಾನದ ಯುವಜನೋತ್ಸವ ಕಾರ್ಯಕ್ರಮ ಸ್ಥಳದವರೆಗೆ ಎಲ್ಲಾ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಸಾರ್ವಜನಿಕರು ಸಹಕರಿಸಬೇಕೆಂದು ಪೊಲೀಸ್ ಆಯುಕ್ತರು ಕೋರಿದ್ದಾರೆ.

ಸಂಚಾರ ಮಾರ್ಗ ಬದಲಾವಣೆ: ನವಲಗುಂದ ಕಡೆಯಿಂದ ಬರುವ ಬಸ್​ಗಳನ್ನು ಕೆ.ಎಚ್. ಪಾಟೀಲ್​ ರಸ್ತೆಯ ಶೃಂಗಾರ ಕ್ರಾಸ್ ಬಳಿ ನಿಲ್ಲಿಸಬೇಕು. ಗದಗ ರಸ್ತೆಯ ವಿನೋಭಾನಗರದಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಬೇಕು. ನವಲಗುಂದ ರಸ್ತೆ ಕಡೆಯಿಂದ ಆಗಮಿಸುವ ವಾಹನಗಳು ಸರ್ವೋದಯ ಸರ್ಕಲ್, ಶೃಂಗಾರ ಕ್ರಾಸ್, ಸೇಂಟ್ ಎಂಡ್ರಿಯೋ ಸ್ಕೂಲ್, ಆರ್‌ಪಿಎಫ್ ಕ್ರಾಸ್ ಮೂಲಕ ವಿನೋಭಾನಗರ ಮೈದಾನ ತಲುಪಬೇಕು. ಹಾಗೆಯೇ ಗದಗ ಕಡೆಯಿಂದ ಬರುವ ಬಸ್​​ಗಳು ಗದಗ ಕೆಳ ಸೇತುವೆ ಬಳಿ ಅಂಬೇಡ್ಕರ್​​ ಮೂರ್ತಿಯ ವೃತ್ತದಲ್ಲಿ ಜನರನ್ನು ಇಳಿಸಿ, ಚಿಲ್ಲಿ ಮೈದಾನದಲ್ಲಿ ಪಾರ್ಕಿಂಗ್ ಮಾಡಬೇಕು. ಗದಗ ರಸ್ತೆಯಲ್ಲಿನ ಕೆಳ ಸೇತುವೆ ಮೂಲಕ ಅಂಬೇಡ್ಕರ್​​ ಮೂರ್ತಿ ಸುತ್ತುವರೆದು ಗದಗ ರಸ್ತೆಯ ಚಿಲ್ಲಿ ಮೈದಾನ ತಲುಪಬೇಕು ಎಂದು ತಿಳಿಸಲಾಗಿದೆ.

ಹಾಗೆಯೇ ಗಬ್ಬೂರ ರಸ್ತೆ ಕಡೆಯಿಂದ ಬರುವ ಬಸ್​​ಗಳು ಪೊಲೀಸ್ ಕ್ವಾರ್ಟರ್ಸ್ ಹತ್ತಿರ ಜನರನ್ನು ಇಳಿಸಬೇಕು. ಗಿರಣಿಚಾಳ ಮೈದಾನ ಹಾಗೂ ಎಂ.ಟಿ. ಮಿಲ್ ಮೈದಾನದಲ್ಲಿ ಬಸ್​ಗಳನ್ನು ಪಾರ್ಕಿಂಗ್ ಮಾಡಬೇಕು. ಬಂಕಾಪುರ ಚೌಕ್, ಕಮರಿಪೇಟೆ, ಮಿರ್ಜಾನಕರ ಪೆಟ್ರೋಲ್ ಪಂಪ್ ಸುತ್ತುವರೆದು ಗಿರಣಿಚಾಳ ಮೈದಾನ ಅಥವಾ ಎಂ.ಟಿ. ಮಿಲ್ ಮೈದಾನ ತಲುಪಬೇಕು. ಕಾರವಾರ ರಸ್ತೆ ಮಾರ್ಗವಾಗಿ ಬರುವ ಬಸ್​​ಗಳು ಗ್ಲಾಸ್ ಹೌಸ್ ಭಾವಿ ಹತ್ತಿರ ಜನರನ್ನು ಇಳಿಸಿ, ಗ್ಲಾಸ್ ಹೌಸ್ ಭಾವಿಯ ಮೈದಾನದಲ್ಲಿ ಪಾರ್ಕಿಂಗ್ ಮಾಡಬೇಕು. ಧಾರವಾಡ ನಗರದಿಂದ ಆಗಮಿಸುವ ಬಸ್​​ಗಳು ಹಳೇಬಸ್ ನಿಲ್ದಾಣದ ಮುಂದೆ ಜನರನ್ನು ಇಳಿಸಬೇಕು. ಹೊಸೂರಿನ ರಾಯ್ಕರ ಮೈದಾನದಲ್ಲಿ ಪಾರ್ಕಿಂಗ್ ಮಾಡಬೇಕು. ನವನಗರ, ಬಿವಿಬಿ, ಹೊಸೂರ, ಲಕ್ಷ್ಮೀ ವೇ ಬ್ರಿಡ್ಜ್ ಮೂಲಕ ಗ್ಲಾಸ್ ಹೌಸ್ ಬಾವಿ ತಲುಪಬೇಕು ಎಂದು ಸೂಚಿಸಲಾಗಿದೆ.

traffic-route-changes-for-prime-minister-visit-to-hubballi
ಪೊಲೀಸ್ ಆಯುಕ್ತರ ಸೂಚನೆ

ಬಸ್​​​ಗಳ ಮಾರ್ಗ ಬದಲಾವಣೆ: ಕಾರವಾರ ರಸ್ತೆಯಿಂದ ಬರುವ ಬಸ್​​ಗಳಿಗೆ ಕಾರವಾರ ರಸ್ತೆ ಪ್ಲಾಜಾ (ಅಂಡರ್ ಬ್ರಿಡ್ಜ್) ಹತ್ತಿರ ತಾತ್ಕಾಲಿಕ ನಿಲುಗಡೆಗೆ ಅವಕಾಶ ಕಲ್ಪಿಸಿದ್ದು, ನಗರದ ಒಳಗಡೆ ಸಂಚಾರ ನಿಷೇಧಿಸಲಾಗಿದೆ. ಲಾಂಗ್ ರೂಟ್‌ ಬಸ್​​ಗಳು ರಿಂಗ್ ರೋಡ್ ಹಾಗೂ ಬಪಾಸ್ ಮುಖಾಂತರ ಸಂಚರಿಸಬೇಕಿದೆ. ಬೆಂಗಳೂರು ರಸ್ತೆಯಿಂದ ಬರುವ ಬಸ್​​ಗಳಿಗೆ ಗಬ್ಬೂರ ಬೈಪಾಸ್ ಹತ್ತಿರ ತಾತ್ಕಾಲಿಕ ನಿಲುಗಡೆ ಕಲ್ಪಿಸಿದ್ದು, ಲಾಂಗ್ ರೂಟ್ ಬಸ್​​ಗಳು ರಿಂಗ್ ರೋಡ್ ಹಾಗೂ ಬೈಪಾಸ್ ಮೂಲಕ ತೆರಳಬೇಕು. ಹಾಗೆಯೇ ಗದಗ ರಸ್ತೆಯಿಂದ ಬರುವ ಬಸ್​​ಗಳಿಗೆ ಗದಗ ರಸ್ತೆ ರೈಲ್ವೆ ಲೋಕೋ ಶೆಡ್ ಹತ್ತಿರ ತಾತ್ಕಾಲಿಕ ನಿಲುಗಡೆ ಕಲ್ಪಿಸಲಾಗಿದೆ.

ನವಲಗುಂದ ಕಡೆಯಿಂದ ಸಂಚರಿಸುವ ಬಸ್​​ಗಳಿಗೆ ಆಕ್ಸಫರ್ಡ್ ಕಾಲೇಜ್ ರೈಲ್ವೆ ಬ್ರಿಡ್ಜ್ ಹತ್ತಿರ ತಾತ್ಕಾಲಿಕ ನಿಲುಗಡೆ ಕಲ್ಪಿಸಲಾಗಿದೆ. ಧಾರವಾಡ ಕಡೆಯಿಂದ ತಾರಿಹಾಳ ಬ್ರಿಡ್ಜ್ ಕಡೆಗೆ ಬರುವ ಲಾಂಗ್ ರೂಟ್ ಬಸ್ಸುಗಳಿಗೆ ತಾರಿಹಾಳ ಬ್ರಿಡ್ಜ್ ಹತ್ತಿರ ತಾತ್ಕಾಲಿಕ ನಿಲುಗಡೆ ವ್ಯವಸ್ಥೆ ಇದೆ. ಲಾಂಗ್ ರೂಟ್ ಬಸ್​​ಗಳು ಬೈಪಾಸ್ ಮೂಲಕ ಸಂಚರಿಸಬೇಕು. ಹುಬ್ಬಳ್ಳಿ-ಧಾರವಾಡ ನಗರಗಳ ಮಧ್ಯೆ ಸಂಚರಿಸುವ ಚಿಗರಿ ಬಸ್​​ಗಳು, ಬೇಂದ್ರೆ ಸಾರಿಗೆ ಹಾಗೂ ನಗರ ಸಾರಿಗೆ ಬಸ್​​ಗಳು ಧಾರವಾಡ ಕಡೆಯಿಂದ ಬಂದು ಕೆಎಂಸಿ ಆಸ್ಪತ್ರೆಯ ಒಳಗಡೆ ಹೋಗಿ ಟರ್ನ್ ಮಾಡಿಕೊಂಡು ಮರಳಿ ಧಾರವಾಡತ್ತ ತೆರಳಬೇಕೆಂದು ಸೂಚನೆ ನೀಡಲಾಗಿದೆ.

ಇತರೆ ವಾಹನಗಳ ಮಾರ್ಗ ಬದಲಾವಣೆ: ಧಾರವಾಡದಿಂದ ಬರುವ ಲಘು ವಾಹನಗಳು ಪ್ರೆಸಿಡೆಂಟ್ ಹೋಟೆಲ್ ಮುಖಾಂತರ ಸಾಯಿನಗರ, ಜೆ.ಕೆ ಸ್ಕೂಲ್, ಗೋಪನಕೊಪ್ಪ ಮೂಲಕ ಕೇಶ್ವಾಪುರ ಅಥವಾ ಕುಸುಗಲ್ ಮೂಲಕ ಹಾಯ್ದು ಹೋಗಬೇಕು. ಧಾರವಾಡದಿಂದ ಬರುವ ಭಾರಿ ವಾಹನಗಳು ನವನಗರ ಒಳಗೆ ಹಾಯ್ದು, ಗಾಮನಗಟ್ಟಿ ಕೈಗಾರಿಕಾ ವಸಾಹತು ಮೂಲಕ ತಾರಿಹಾಳ ಬೈಪಾಸ್ ತಲುಪಬೇಕು. ನವಲಗುಂದ, ಗದಗ ಕಡೆಯಿಂದ ಬರುವ ಭಾರಿ ವಾಹನಗಳಿಗೆ ನಗರದಲ್ಲಿ ಸಂಚಾರ ನಿಷೇಧಿಸಲಾಗಿದ್ದು, ರಿಂಗ್ ರಸ್ತೆ ಮೂಲಕ ಸಂಚರಿಸಬೇಕು ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ರಮಣ್ ಗುಪ್ತಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ರಾಷ್ಟ್ರೀಯ ಯುವ ಜನೋತ್ಸವ ರಾಜಕೀಯ ಪಕ್ಷದ ಕಾರ್ಯಕ್ರಮವಲ್ಲ : ಮಾಜಿ ಸಿಎಂ ಶೆಟ್ಟರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.