ETV Bharat / state

ಹುಲಿ ಉಗುರು ಮಾದರಿ ಪೆಂಡೆಂಟ್ ಧರಿಸಿದ್ದ ಫೋಟೋ ವೈರಲ್​: ಹುಬ್ಬಳ್ಳಿ ಕಾಂಗ್ರೆಸ್​ ಮುಖಂಡನ ಸ್ಪಷ್ಟನೆ ಹೀಗಿದೆ

author img

By ETV Bharat Karnataka Team

Published : Oct 26, 2023, 4:19 PM IST

ಪೆಂಡೆಂಟ್​ ಧರಿಸಿರುವ ಫೋಟೋ ವೈರಲ್, ಕಾಂಗ್ರೆಸ್ ಯುವ ಮುಖಂಡ ರಜತ್ ಉಳ್ಳಾಗಡ್ಡಿಮಠ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದರು.

Congress leader Rajat Ullagaddimath
ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ

ಹುಬ್ಬಳ್ಳಿ: ಬಿಗ್​ ಬಾಸ್​ ಸ್ಪರ್ಧಿ ವರ್ತೂರು​ ಸಂತೋಷ್​ ಕೊರಳಲ್ಲಿ ಹುಲಿ ಉಗುರು ಧರಿಸಿ ಇಕ್ಕಟ್ಟಿಗೆ ಸಿಲುಕಿದೆ ಬೆನ್ನಲ್ಲೇ ರಾಜ್ಯಾದ್ಯಂತ ರಾಜಕಾರಣಿಗಳು, ನಟರು, ಅರ್ಚಕರು ಸೇರಿದಂತೆ ಹಲವರ ಹೆಸರುಗಳು ಮುನ್ನೆಲೆಗೆ ಬಂದಿವೆ. ಹುಲಿ ಉಗುರು ಮಾದರಿ‌ ಪೆಂಡೆಂಟ್ ಇದೀಗ ಭಾರಿ ಚರ್ಚೆ ಗ್ರಾಸವಾಗಿದೆ. ಸೆಲೆಬ್ರಿಟಿಗಳ‌ ಕೊರಳಿನಲ್ಲಿ ರಾರಾಜಿಸುತ್ತಿದ್ದ ಪೆಂಡೆಂಟ್​ಗಳು ಈಗ ಕಂಟಕ ತಂದಿವೆ.‌ ಹುಲಿ ಉಗುರು ಮಾದರಿ ಪೆಂಡೆಂಟ್​ ಧರಿಸಿರುವ ಬಗ್ಗೆ ಗಣ್ಯಾತಿ ಗಣ್ಯರ ಹೆಸರು ತಳಕು ಹಾಕಿಕೊಂಡಿವೆ.

ಅಂತಹದ್ದೇ ಹುಲಿ ಉಗುರು ಮಾದರಿ ಪೆಂಡೆಂಟ್ ಕಾಂಗ್ರೆಸ್ ಯುವ ನಾಯಕ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್​ ಅವರ ಅಳಿಯ ರಜತ್ ಉಳ್ಳಾಗಡ್ಡಿಮಠ ಧರಿಸಿರುವ ಫೋಟೋ ಸಾಮಾಜಿಕ‌ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ.

ರಜತ್ ಉಳ್ಳಾಗಡ್ಡಿಮಠ ಅವರು ಮದುವೆ ಸಮಯದಲ್ಲಿ ಫೋಟೋ ಶೂಟ್​ನಲ್ಲಿ ಹುಲಿ ಉಗುರು ಮಾದರಿ ಚೈನ್ ಧರಿಸಿದ್ದರು. ಅವರು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​ ಅಕ್ಕನ ಮಗಳನ್ನು ಮದುವೆಯಾಗಿದ್ದರಿಂದ ರಾಜಕೀಯ ವಲಯದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್​ ಅಳಿಯ ಅಂತಲೇ ಫೇಮಸ್ ಆಗಿದ್ದಾರೆ.

ಪೆಂಡೆಂಟ್ ಫೋಟೋ ವೈರಲ್​ ಕುರಿತು ರಜತ್​ ಸ್ಪಷ್ಟನೆ.. ಈಗ ಅವರ ಕೊರಳಿನಲ್ಲಿ ಹುಲಿ ಉಗುರು‌ ಮಾದರಿ ಫೋಟೋ ವೈರಲ್ ಆಗಿದ್ದರ ಬಗ್ಗೆ ಈಟಿವಿ ಭಾರತಕ್ಕೆ ಪ್ರತಿಕ್ರಿಯೆ ‌ನೀಡಿರುವ ರಜ್​ ಉಳ್ಳಾಗಡ್ಡಿಮಠ, ಇದು ಹುಲಿ ಉಗುರು ಅಲ್ಲ. ಅದರ ಮಾದರಿ ಅಷ್ಟೇ. ಮದುವೆ ಸಮಯದಲ್ಲಿ ಫೋಟೋ ಶೂಟಗಾಗಿ ಬಳಸಿದ್ದೆನು. ಅದು ಈಗ ವೈರಲ್ ಆಗಿದೆ. ಆದ್ರೆ ಇಲ್ಲಿಯವರೆಗೆ ಅರಣ್ಯ ಅಧಿಕಾರಿಗಳಾಗಲಿ,‌ ಪೊಲೀಸರಾಗಲಿ ತನ್ನಿಂದ ಮಾಹಿತಿ ಕೇಳಿಲ್ಲ. ಅದರ ಜೊತೆಗೆ ನೋಟಿಸ್ ಅನ್ನು ಸಹ ನೀಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಹುಲಿ ಉಗುರು ಪೆಂಡೆಂಟ್ ಧರಿಸಿದ್ದ ಇಬ್ಬರು ಅರ್ಚಕರ ಬಂಧನ.. ಹುಲಿ ಉಗುರಿನಿಂದ ಡಾಲರ್ ಮಾಡಿ ಕುತ್ತಿಗೆಗೆ ಹಾಕಿಕೊಂಡಿದ್ದ ಆರೋಪದ ಮೇಲೆ ದೇವಸ್ಥಾನದ ಇಬ್ಬರು ಅರ್ಚಕರನ್ನು ಬಂಧಿಸಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಖಾಂಡ್ಯದಲ್ಲಿ ನಡೆದಿದೆ. ಬಾಳೆಹೊನ್ನೂರು ಸಮೀಪದ ಖಾಂಡ್ಯಾದ ಪ್ರಸಿದ್ಧ ಮಾರ್ಕಂಡೇಶ್ವರ ಸ್ವಾಮಿ ದೇವಾಲಯದ ಅರ್ಚಕ ಕೃಷ್ಣಾನಂದ ಹೊಳ್ಳ ಹಾಗೂ ನಾಗೇಂದ್ರ ಜೋಯಿಸ್ ಬಂಧಿತ ಆರೋಪಿಗಳಾಗಿದ್ದಾರೆ.

ಸದ್ಯ ಇಬ್ಬರನ್ನು ಅರಣ್ಯ ಇಲಾಖೆ ತೀವ್ರ ವಿಚಾರಣೆ ನಡೆಸುತ್ತಿದ್ದು, ಬಂಧಿತರಿಂದ ಮೂರು ಹುಲಿ ಉಗುರು ವಶಕ್ಕೆ ಪಡೆಯಲಾಗಿದೆ. ಇಬ್ಬರು ಅರ್ಚಕರ ವಿರುದ್ಧ ಬಾಳೆಹೊನ್ನೂರು ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂಓದಿ : ಹುಲಿ ಉಗುರಿನ ಪೆಂಡೆಂಟ್ ಧರಿಸಿದ ಆರೋಪ : ನಟ ದರ್ಶನ್, ಜಗ್ಗೇಶ್ ಸೇರಿ ಹಲವರ ವಿರುದ್ಧ ದೂರು..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.