ETV Bharat / state

ಎಲ್ಲರಿಗೂ ಮದ್ಯಪಾನ ಮಾಡಿಸಿ ಹಣ ತಂದುಕೊಡಿ ಎಂಬುದು ರಾಜ್ಯ ಸರ್ಕಾರದ ಉದ್ದೇಶ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟೀಕೆ

author img

By

Published : Jul 8, 2023, 2:23 PM IST

ಸಿದ್ದರಾಮಯ್ಯನವರು ಬಜೆಟ್ ಮಂಡನೆಗಿಂತ ಬಿಜೆಪಿಯನ್ನು ಟೀಕೆ ಮಾಡಿದ್ದೇ ಹೆಚ್ಚು. ಅವರು ಮಂಡಿಸಿರುವುದು ಸಂಪೂರ್ಣ ತುಷ್ಟೀಕರಣದ ಬಜೆಟ್ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದರು.

pralhad joshi
ಬಜೆಟ್ ಕುರಿತು ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ

ಬಜೆಟ್ ಕುರಿತು ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ

ಹುಬ್ಬಳ್ಳಿ : ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳಿ ತಮ್ಮ ರಾಜಕೀಯ ಚಟವನ್ನು ತೀರಿಸಿಕೊಳ್ಳುತ್ತಿದ್ದಾರೆ. ಅವರು ನಿನ್ನೆ ಮಂಡಿಸಿರುವ ಬಜೆಟ್ ಸಂಪೂರ್ಣ ತುಷ್ಟೀಕರಣದ ಬಜೆಟ್ ಆಗಿದ್ದು, ಅಭಿವೃದ್ಧಿಗೆ ಪೂರಕವಾಗಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟೀಕಿಸಿದರು.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಶುಕ್ರವಾರ ಸಿದ್ದರಾಮಯ್ಯನವರು ಬಜೆಟ್ ಮಂಡನೆ ಮಾಡಿದ್ದಾರಾ? ಅಥವಾ ಬಿಜೆಪಿಯನ್ನು ಟೀಕೆ ಮಾಡಿದ್ದಾರಾ? ಅರ್ಥವಾಗುತ್ತಿಲ್ಲ. ಬಜೆಟ್ ಮಂಡನೆಗಿಂತ ಬಿಜೆಪಿಯನ್ನು ಟೀಕೆ ಮಾಡಿದ್ದೇ ಹೆಚ್ಚು. ಕೋವಿಡ್ ನಿರ್ವಹಣೆ ಬಗ್ಗೆ ಮಾತನಾಡಿದ್ದಾರೆ. ಇದೇ ಮೊದಲ ಬಾರಿಗೆ ದೇಶದಲ್ಲಿ ವ್ಯಾಕ್ಸಿನ್ ತಯಾರಿಸಿ ಎಲ್ಲರಿಗೂ ನೀಡಿದ್ದೇವೆ.‌ ಅಲ್ಲದೇ, ಬೇರೆ ದೇಶಗಳಿಗೂ ಸಹ ಕೊಟ್ಟಿದ್ದೇವೆ. ಆದರೆ, ಸಿಎಂ ಸಿದ್ದರಾಮಯ್ಯನವರು ಭಾರತ ದ್ವೇಷಿ ರಾಹುಲ್ ಗಾಂಧಿ ತರ ಮಾತನಾಡುತ್ತಿದ್ದಾರೆ" ಎಂದು ಹರಿಹಾಯ್ದರು.

ಬಜೆಟ್​ನಲ್ಲಿ ಆಸ್ತಿ ಕರ ಏರಿಕೆ ಮಾಡಿದ್ದಾರೆ. ಅಬಕಾರಿ ಇಲಾಖೆಗೆ ಟಾರ್ಗೆಟ್ ಕೊಟ್ಟಿದ್ದಾರೆ. ಎಲ್ಲರಿಗೂ ಮದ್ಯಪಾನ ಮಾಡಿಸಿ, ಹಣ ತಂದುಕೊಡಿ ಎಂಬುದು ರಾಜ್ಯ ಸರ್ಕಾರದ ಉದ್ದೇಶವಾಗಿದೆ. ಎನ್ಇಪಿಗೆ ಮೊದಲು ಕಾಂಗ್ರೆಸ್ ಒಪ್ಪಿಗೆ ನೀಡಿತ್ತು. ಆದರೆ ಇವತ್ತು ಅದನ್ನು ಕೈಬಿಡಲಾಗಿದೆ. ಇದು ಸಂಪೂರ್ಣ ತುಷ್ಟೀಕರಣದ ಬಜೆಟ್ ಆಗಿದ್ದು, ಅಭಿವೃದ್ಧಿಗೆ ಪೂರಕವಾಗಿಲ್ಲ. ಶಾಸಕರಿಗೆ ಅನುದಾನ ಕೇಳಬೇಡಿ ಎಂದು ನೇರವಾಗಿ ಮುಖ್ಯಮಂತ್ರಿಗಳು ಹೇಳುತ್ತಾರೆ ಎಂದರೆ ಕಾಂಗ್ರೆಸ್​ಗೆ ಯಾವ ಸ್ಥಿತಿ ಬಂದಿದೆ ಎಂಬುವುದಕ್ಕೆ ಇದೇ ಸಾಕ್ಷಿ ಎಂದರು.

ಯುವ ಶಕ್ತಿಗೆ ಬಜೆಟ್‌ನಲ್ಲಿ ನಯಾಪೈಸೆ ಹಣ ಇಟ್ಟಿಲ್ಲ, ಗೃಹಲಕ್ಷ್ಮಿಗೆ ಹಣ ಇಟ್ಟಿದ್ದಾರೆ. ‌ರೈಲ್ವೆ ಯೋಜನೆಗೆ ರಾಜ್ಯದ ಪಾಲಿನ ಅನುದಾನ ಮೀಸಲಿಟ್ಟಿಲ್ಲ. ಹತ್ತು ಕೆಜಿ ಅಕ್ಕಿ ಬಗ್ಗೆ ಬಜೆಟ್​ನಲ್ಲಿ ಹೇಳಿದ್ದಾರೆ. ಈ ಪೈಕಿ ಐದು ಕೆಜಿ ಕೇಂದ್ರ ಸರ್ಕಾರದ್ದಿದೆ. ಅವರೇನು ಕೊಡುತ್ತಾರೆ ಎಂಬುದನ್ನು ಹೇಳುತ್ತಿಲ್ಲ. ಇದನ್ನು ನೋಡಿದ್ರೆ ಸಿದ್ದರಾಮಯ್ಯನವರು ಹಿಟ್ಲರ್ ರೀತಿ ಆಡಳಿತ ಮಾಡಲು ತಿರ್ಮಾನ ಮಾಡಿದ್ದಾರೆ ಎಂದು ಜೋಶಿ ಕಿಡಿಕಾರಿದರು.

ರಾಹುಲ್ ಗಾಂಧಿ ಅಪ್ರಬುದ್ಧರು : ರಾಹುಲ್ ಗಾಂಧಿಗೆ ಕೋರ್ಟ್​ನಲ್ಲಿ ಮತ್ತೊಮ್ಮೆ ಹಿನ್ನಡೆಯಾಗದೆ. ರಾಹುಲ್ ಮತ್ತು ಕಾಂಗ್ರೆಸ್ ಅಪ್ರಬುದ್ಧರಿದ್ದಾರೆ. ಟ್ರಯಲ್ ಕೋರ್ಟ್ ಶಿಕ್ಷೆ ನೀಡಿತ್ತು, ನಂತರ ಜಿಲ್ಲಾ ಮತ್ತು ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದರು. ಹೈಕೋರ್ಟ್ ಶಿಕ್ಷೆ ರದ್ದುಗೊಳಿಸಲು ನಿರಾಕರಣೆ ಮಾಡಿದೆ. ಆದರೆ, ಕಾಂಗ್ರೆಸ್ ಪ್ರತಿಭಟನೆ ಮಾಡುತ್ತಿದೆ. ಇವರ ಹೋರಾಟ ಯಾರ ವಿರುದ್ಧ, ಹೈಕೋರ್ಟ್ ವಿರುದ್ಧನಾ? ಎಂದು ಪ್ರಹ್ಲಾದ್ ಜೋಶಿ ಪ್ರಶ್ನೆ ಮಾಡಿದರು.

57-58 ವರ್ಷ ಆಡಳಿತ ಮಾಡಿದ ಕಾಂಗ್ರೆಸ್​ಗೆ ಪ್ರಜ್ಞೆಯಿದೆಯಾ?. ಟ್ರಯಲ್ ಕೋರ್ಟ್​ನಲ್ಲಿ ಕ್ಷಮೆ ಯಾಚಿಸುವಂತೆ ಸಲಹೆ ಕೊಟ್ಟಾಗ ರಾಹುಲ್ ತಾವು ಅಂದಿದ್ದೇ ಸರಿ ಅಂತಾ ಸಮರ್ಥನೆ ಮಾಡಿ, ಹೇಳಿಕೆ ವಾಪಸ್​ ಪಡೆಯಲ್ಲ ಅಂದರು. ರಾಹುಲ್ ಗಾಂಧಿ ಅಪ್ರಬುದ್ಧತೆ ಮತ್ತು ಅಹಂಕಾರದಿಂದ ಆಗಿರುವಂತದ್ದು. ಕಾಂಗ್ರೆಸ್ ಯಾರ ವಿರುದ್ಧ ಪ್ರತಿಭಟನೆ ಮಾಡುತ್ತದೆ. ಮೊದಲು ರಾಹುಲ್ ಗಾಂಧಿಗೆ ಹೋಗಿ ಬುದ್ಧಿ ಹೇಳಲಿ. ರಾಹುಲ್ ಗಾಂಧಿ ಬುದ್ಧಿಮತ್ತೆ ಕಡಿಮೆಯಿದೆ. ಆದರೆ, ಕಾಂಗ್ರೆಸ್ ಪ್ರತಿಭಟನೆ ಮಾಡುತ್ತಿರುವುದು ಅವರ ಮನಸ್ಥಿತಿ ತೋರಿಸುತ್ತದೆ ಎಂದು ಕಿಡಿಕಾರಿದರು.

ಇದನ್ನೂ ಓದಿ : ಕೇಂದ್ರದ ಐದು ಕೆಜಿ ಜೊತೆ ರಾಜ್ಯದಿಂದ ಐದು ಕೆಜಿ ಸೇರಿ 10 ಕೆಜಿ ಉಚಿತ ಅಕ್ಕಿ ವಿತರಣೆ: ಬಜೆಟ್​​ನಲ್ಲೇ ಸ್ಪಷ್ಟೀಕರಣ

ಹೆಚ್​ಡಿಕೆ ಪೆನ್ ಡ್ರೈವ್ ಬಾಂಬ್ ವಿಚಾರ : ವರ್ಗಾವಣೆ ವಿಚಾರದಲ್ಲಿ ಭಾರಿ ಅಕ್ರಮ ನಡೆಯುತ್ತಿದೆ. ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರಿಗೆ ಯಾವುದೋ ಒಂದು ಪ್ರಕರಣ ಸಿಕ್ಕಿರಬಹುದು. ಹೀಗಾಗಿ ಹೇಳಿಕೆ ನೀಡುತ್ತಿರಬಹುದು. ಹರಾಜು ರೀತಿಯಲ್ಲಿ ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿದೆ ಎಂದರು. ಬಳಿಕ ಹೆಚ್​ಡಿಕೆ ಅಧಿಕೃತ ವಿಪಕ್ಷನಾಯಕನ ರೀತಿ ಕೆಲಸ ಮಾಡುತ್ತಿದ್ದಾರೆಂಬ ವಿಚಾರವಾಗಿ ಮಾತನಾಡಿ, ಅವರು ಜೆಡಿಎಸ್ ಪಕ್ಷದ ನಾಯಕರಾಗಿ ಕೆಲಸ ಮಾಡುತ್ತಾರೆ. ಇಂದು ನಮ್ಮ ವಿರೋಧ ಪಕ್ಷದ ನಾಯಕರ ನಿರ್ಧಾರವಾಗುತ್ತದೆ ಎಂದು ಜೋಶಿ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.