ETV Bharat / state

ಸೈನಿಕನ ಕೊಲೆ ಪ್ರಕರಣ: ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಧಾರವಾಡ ಹೈಕೋರ್ಟ್

author img

By

Published : Jun 21, 2023, 10:57 AM IST

ಆಸ್ತಿ ವಿಚಾರವಾಗಿ ಸೈನಿಕನ ಕೊಲೆ ಮಾಡಿದ ಆರೋಪಿಗಳಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಧಾರವಾಡ ಹೈಕೋರ್ಟ್
ಧಾರವಾಡ ಹೈಕೋರ್ಟ್

ಹುಬ್ಬಳ್ಳಿ: ಕಲಘಟಗಿ ತಾಲೂಕಿನ ಹೊನ್ನಳ್ಳಿಯಲ್ಲಿ ಸೈನಿಕನೊಬ್ಬ ಹತ್ಯೆಗೆ ಸಂಬಂಧಿಸಿದ ಅಪರಾಧ ಸಾಬೀತಾದ ಹಿನ್ನೆಲೆ ಧಾರವಾಡ ಹೈಕೋರ್ಟ್‌ ಏಳು ಜನ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 34 ಸಾವಿರ ರೂ. ದಂಡ ವಿಧಿಸಿ, ತೀರ್ಪು ನೀಡಿದೆ. ಸೈನಿಕ ನಿಂಗಪ್ಪ ಯಲಿವಾಳ ಎಂಬುವವರನ್ನು 2015ರ ಸೆ.20ರಂದು ಬಸವರಾಜ ಯಲಿವಾಳ ಹಾಗೂ ಇತರ ಆರು ಜನರು ಕೊಲೆ ಮಾಡಿದ್ದರು. ಕಲಘಟಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮೃತ ನಿಂಗಪ್ಪ ಯಲಿವಾಳ ಹಾಗೂ ಆರೋಪಿಗಳ ಮಧ್ಯೆ ಆಸ್ತಿ ಕುರಿತು ವ್ಯಾಜ್ಯವಿತ್ತು. ಜಿಲ್ಲಾ ನ್ಯಾಯಾಲಯವು 2019ರ ಏ.18ರಂದು ಎಲ್ಲ ಆರೋಪಿಗಳನ್ನು ಬಿಡುಗಡೆಗೊಳಿಸಿತ್ತು. ಸತ್ರ ನ್ಯಾಯಾಲಯದ ಆದೇಶ ರದ್ದುಗೊಳಿಸಿದ ಧಾರವಾಡ ಹೈಕೋರ್ಟ್‌, ಆರೋಪಿಗಳಿಗೆ ಶಿಕ್ಷೆ ವಿಧಿಸಿದೆ. ಹಾಗೆ ದಂಡದ ಹಣದಲ್ಲಿ ಮೃತರ ತಂದೆ, ತಾಯಿಗೆ ತಲಾ ಒಂದು ಲಕ್ಷ ರೂ. ಪರಿಹಾರ ನೀಡಲು ಆದೇಶಿಸಿದೆ. ಫಿರ್ಯಾದಿ ಮೃತನ ತಂದೆ ಪರವಾಗಿ ಹಿರಿಯ ನ್ಯಾಯವಾದಿ ಎಲ್.ಎಸ್. ಸುಳ್ಳದ ವಾದ ಮಂಡಿಸಿದ್ದರು.

ಮಗಳ ಕೊಂದ ತಂದೆಗೆ ಜೀವಾವಧಿ ಶಿಕ್ಷೆ: ಚಿಕ್ಕೋಡಿಯ ಪ್ರಕರಣವೊಂದರಲ್ಲಿ ಹೆತ್ತ ಮಗಳನ್ನು ಕತ್ತು ಹಿಸುಕಿ ಹತ್ಯೆ ಮಾಡಿದ್ದ ತಂದೆಗೆ 10 ಸಾವಿರ ದಂಡ ಸಹಿತ ಜೀವಾವಧಿ ಶಿಕ್ಷೆ ವಿಧಿಸಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿತ್ತು. ಬೆಳಗಾವಿಯ ಅಥಣಿ ತಾಲೂಕಿನ ಮಂಗಸೂಳಿ ಮಲ್ಲಾರವಾಡಿ ಗ್ರಾಮದ ಬಸವರಾಜ ಮಗದುಮ್ಮಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.

2016ರಲ್ಲಿ ಆರೋಪಿ ಬಸವರಾಜ ತನ್ನ ಮಗಳಾದ ಸಂಗೀತಾ(7)ಳನ್ನು ಶೆಡ್​ವೊಂದರಲ್ಲಿ ಕತ್ತು ಹಿಸುಕಿ ಕೊಲೆ ಮಾಡಿದ್ದ. ಹೆತ್ತ ಮಗಳನ್ನು ಸಾಕಲು‌ ಆಗಲ್ಲ ಎಂದು ಬಾಲಕಿಯನ್ನು ಕೊಲೆ ಮಾಡಿದ್ದನು ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದರು.‌ ಪ್ರಕರಣದ ವಿಚಾರಣೆ ನಡೆಸಿದ ಏಳನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಸ್.ಎಲ್.ಚೌಹಾಣ್​ ಅವರು ಆರೋಪಿ ಬಸವರಾಜಗೆ ಜೀವಾವಧಿ ಶಿಕ್ಷೆ ಮತ್ತು 10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದರು.

ಶೀಲ ಶಂಕಿಸಿ ಹೆಂಡತಿ, ಮಗು ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ

ದಾವಣಗೆರೆಯ ಪ್ರಕರಣದದಲ್ಲಿ, ಶೀಲ ಶಂಕಿಸಿ ಹೆಂಡತಿ ಹಾಗೂ ಮಗುವನ್ನು ಕೊಲೆ ಮಾಡಿದ್ದ ಆರೋಪಿಗೆ ದಾವಣಗೆರೆಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿತ್ತು. ಮಾಯಕೊಂಡ ಗ್ರಾಮದ ಆರೋಪಿ ನಾಗರಾಜ್​ಗೆ ಶಿಕ್ಷೆವಿಧಿಸಲಾಗಿತ್ತು.

ಮೂರು ವರ್ಷಗಳ ಹಿಂದೆ ಆರೋಪಿ ನಾಗರಾಜ್​ ಹಾಗೂ ಶಿಲ್ಪಾ ಮದುವೆಯಾಗಿದ್ದರು. ದಂಪತರಿಗೆ 2 ವರ್ಷದ ಹೆಣ್ಣು ಮಗು ಕೂಡ ಇತ್ತು. ಆದರೆ, ನಾಗರಾಜ್​ ತನ್ನ ಹೆಂಡತಿಯ ಶೀಲ ಶಂಕಿಸಿ ಮಗು ಮತ್ತು ಹೆಂಡತಿಯ ಕೊಲೆ ಮಾಡಿದ್ದಾನೆ.

ಇದನ್ನೂ ಓದಿ: ಮಗಳನ್ನು ಕೊಲೆ ಮಾಡಿದ ತಂದೆಗೆ ಜೀವಾವಧಿ ಶಿಕ್ಷೆ: ಚಿಕ್ಕೋಡಿ ಕೋರ್ಟ್​​ನಿಂದ ಮಹತ್ವದ ತೀರ್ಪು..!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.