ETV Bharat / state

ನನಗೆ ಕಾಂಗ್ರೆಸ್​ನಿಂದ ಯಾವುದೇ ಆಹ್ವಾನ ಬಂದಿಲ್ಲ: ನಾನು ಬಿಜೆಪಿ ಬಿಡುವ ಪ್ರಶ್ನೆ ಇಲ್ಲ.. ಮುನೇನಕೊಪ್ಪ ಸ್ಪಷ್ಟನೆ

author img

By ETV Bharat Karnataka Team

Published : Aug 28, 2023, 2:29 PM IST

Updated : Aug 28, 2023, 3:24 PM IST

ಕಾಂಗ್ರೆಸ್​ ಸೇರ್ಪಡೆಯಾಗಲಿದ್ದಾರೆ ಎಂಬ ವದಂತಿಗೆ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಸ್ಪಷ್ಟನೆ ನೀಡಿದರು.

Shankar Patil Munenakoppa clarified
Shankar Patil Munenakoppa clarified

ಶಂಕರ ಪಾಟೀಲ ಮುನೇನಕೊಪ್ಪ ಸ್ಪಷ್ಟನೆ

ಹುಬ್ಬಳ್ಳಿ: ನನಗೆ ಈವರೆಗೂ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಬೇಕೆಂಬ ಆಹ್ವಾನ ಕಾಂಗ್ರೆಸ್ ಮುಖಂಡರಿಂದ ಬಂದಿಲ್ಲ. ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷ ಸಂಘಟನೆ ಮಾಡುತ್ತೇನೆ ಎಂದು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಸ್ಪಷ್ಟನೆ ನೀಡಿದ್ದಾರೆ.

ಕಳೆದ ಕಲವು ದಿನಗಳಿಂದ ಶಂಕರ ಪಾಟೀಲ ಮುನೇನಕೊಪ್ಪ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎಂಬ ಸುದ್ದಿ ಹಬ್ಬಿದ ಹಿನ್ನೆಲೆಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿರುವ ಅವರು, ''ಕಾಂಗ್ರೆಸ್ ಪಕ್ಷದಲ್ಲಿ ನಮ್ಮ ಸ್ನೇಹಿತರು ಇದ್ದಾರೆ, ಬಂಧುಗಳು ಇದ್ದಾರೆ. ಆದರೆ, ಈವರೆಗೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಜಗದೀಶ್ ಶೆಟ್ಟರ್ ಸೇರಿದಂತೆ ಯಾವೊಬ್ಬ ನಾಯಕರು ನನ್ನೊಂದಿಗೆ ಮಾತನಾಡಿಲ್ಲ. ಹೀಗಾಗಿ ಬಿಜೆಪಿ ತೊರೆಯುವ ಮಾತಿಲ್ಲ'' ಎಂದರು.

''ನಾನು ಲೋಕಸಭೆ ಚುನಾವಣೆ ಟಿಕೆಟ್ ಆಕಾಂಕ್ಷಿ ಅಲ್ಲ. ಮನೆಯಲ್ಲಿ ಕಹಿ ಘಟನೆ ನಡೆದಿದ್ದು, ಈ ನಿಟ್ಟಿನಲ್ಲಿ ಮನಸ್ಸು ಸಹ ಸರಿ ಇಲ್ಲ. ನಾನು ರಾಜಕೀಯವಾಗಿ ಯಾವುದೇ ಒಂದು ತೀರ್ಮಾನ ಮಾಡಬೇಕಾದರೆ ಜಿಲ್ಲೆಯ 8 ತಾಲೂಕಿನ ಮುಖಂಡರೊಂದಿಗೆ ಚರ್ಚೆ ಮಾಡಿಯೇ ತಿರ್ಮಾನ ತೆಗೆದುಕೊಳ್ಳುತ್ತೇನೆ. ಈ ಹಿನ್ನೆಲೆ ಸದ್ಯ ಯಾವುದೇ ಸಭೆ ಮಾಡಿಲ್ಲ. ಹೀಗಾಗಿ ನವೆಂಬರ್ ವರೆಗೂ ಸಕ್ರಿಯ ರಾಜಕೀಯದಲ್ಲಿ ಇರೋದಿಲ್ಲ. ಆದರೇ ನನಗೆ ಸ್ವಲ್ಪ ಭಿನ್ನಾಭಿಪ್ರಾಯಗಳಿವೆ. ಇದು ಸತ್ಯ ಎಂದು'' ತಮ್ಮ ಅಸಮಾಧಾನ ಹೊರ ಹಾಕಿದರು.

''ಬಿಜೆಪಿಯಲ್ಲಿ ನಾಯಕರೊಂದಿಗೆ ಭಿನ್ನಾಭಿಪ್ರಾಯ ಇರೋದು ಸತ್ಯ, ಈಗಾಗಲೇ ಧಾರವಾಡ ಜಿಲ್ಲೆಯಲ್ಲಿ ಅನೇಕ ಬಿಜೆಪಿ ನಾಯಕರು ಪಕ್ಷ ಬಿಟ್ಟು ಹೋಗಿದ್ದಾರೆ. ಕಾರ್ಯಕರ್ತರಿಗೆ ನೋವಾದಾಗ ನಮಗೆ ಸಂಕಟವಾಗುತ್ತದೆ. ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಹಾಗೂ ಜಗದೀಶ್ ಶೆಟ್ಟರ್ ನನ್ನ ಬೆಳವಣಿಗೆಗೆ ಕಾರಣಿಭೂತರಾಗಿದ್ದಾರೆ. ಇವತ್ತು ಅನಂತಕುಮಾರ್ ಅವರು ಇದ್ದಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಇದೀಗ ಪಕ್ಷದ ಎಲ್ಲ ಜವಾಬ್ದಾರಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಮೇಲಿದೆ'' ಎಂದರು.

''ಈ ಹಿಂದೆ ಬಿಜೆಪಿ ಆಡಳಿತದಲ್ಲಿದ್ದಾಗ ಮಾಡಿದ ನಿಗಮ ಮಂಡಳಿ, ಅಧಿಕಾರ ಹಂಚಿಕೆ ವಿಚಾರದಲ್ಲಿ ಅಸಮಾಧಾನ ಕಾರ್ಯಕರ್ತರಲ್ಲಿದೆ. ಹಿಂದೆ ತಪ್ಪು ಆಗಿದೆ. ಆದರೆ, ಮುಂದೆ ಆ ತಪ್ಪು ಆಗಬಾರದು. ಸದ್ಯ ಬಿಜೆಪಿಯಿಂದ ನಾನು ತೋರೆಯುವ ಊಹಾಪೋಹಗಳು ಸತ್ಯಕ್ಕೆ ದೂರವಾಗಿದ್ದು, ಮುಂದಿನ ದಿನಗಳಲ್ಲಿ ಅಂತಹ ಪರಿಸ್ಥಿತಿ ಬಂದಲ್ಲಿ ನಾನೇ ಸಾರ್ವಜನಿಕವಾಗಿ ಪ್ರಕಟ ಮಾಡುವೆ. ಜನವರಿ ಕೊನೆಯಲ್ಲಿ ಮುಂದಿನ ರಾಜಕೀಯ ತೀರ್ಮಾ ಮಾಡುವೆ'' ಎಂದು ಹೇಳುವ ಮೂಲಕ ಸದ್ಯ ಹರದಾಡುತ್ತಿರುವ ವದಂತಿಗೆ ಬ್ರೇಕ್​ ಹಾಕಿದರು.

ಇದನ್ನೂ ಓದಿ: ಧಾರವಾಡದಿಂದ ಇಬ್ಬರು ಬಿಜೆಪಿ ನಾಯಕರು ಕಾಂಗ್ರೆಸ್​ಗೆ ಬರುವ ಮಾಹಿತಿ ಇದೆ: ಸಚಿವ ಸಂತೋಷ್​ ಲಾಡ್

ಜಿಲ್ಲಾ ಉಸ್ತುವಾರಿ ಸಚಿವರ ಹೇಳಿಕೆ: ಧಾರವಾಡ ಜಿಲ್ಲೆಯಲ್ಲಿ ಇಬ್ಬರು ಬಿಜೆಪಿ ನಾಯಕರಾದ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹಾಗೂ ಕುಂದಗೋಳ ಮಾಜಿ ಶಾಸಕ ಚಿಕ್ಕನಗೌಡ ಕಾಂಗ್ರೆಸ್ ಪಕ್ಷಕ್ಕೆ ಬರುತ್ತಾರೆ ಎಂಬ ಮಾಹಿತಿಯಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್​​​ ಲಾಡ್ ಅವರು ಭಾನುವಾರಷ್ಟೇ ಹೇಳಿಕೆ ನೀಡಿದ್ದರು.

ಇದನ್ನೂ ಓದಿ: ಯಾರೂ ಪಕ್ಷ ಬಿಟ್ಟು ಹೋಗಲ್ಲ, ಮೈತ್ರಿ ಉಳಿಸಿಕೊಳ್ಳುವಲ್ಲಿ‌ ಕಾಂಗ್ರೆಸ್ ವಿಫಲ: ಪ್ರಹ್ಲಾದ್ ಜೋಶಿ

ಪ್ರಹ್ಲಾದ್ ಜೋಶಿ ಸ್ಪಷ್ಟನೆ: ಇದಕ್ಕೂ ಮುನ್ನ ಮಾತನಾಡಿದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, "ಸದ್ಯದ‌ ಮಟ್ಟಿಗೆ ನನಗೆ ಹೆಚ್ಚಿನ ಮಾಹಿತಿಯಿಲ್ಲ. ಈ ಬಗ್ಗೆ ಕೆಲವರ ಜೊತೆ ಮಾತನಾಡಿದ್ದೇನೆ. ಆ ರೀತಿಯ ಯಾವುದೇ ಬೆಳವಣಿಗೆ ಆಗಿಲ್ಲ ಎಂದಿದ್ದಾರೆ. ಎಸ್​ಟಿ ಸೋಮಶೇಖರ್, ಶಿವರಾಂ ಹೆಬ್ಬಾರ್ ಪಕ್ಷ ಬಿಟ್ಟು ಹೋಗಲ್ಲ ಎಂದಿದ್ದಾರೆ. ನಾಳೆ ಏನಾಗುತ್ತೆ ಅಂತ ಹೇಳಲು ನಾನು ಭವಿಷ್ಯಗಾರನಲ್ಲ. ನನಗೆ ಇರುವ ಮಾಹಿತಿ ಪ್ರಕಾರ ಯಾರೂ ಬಿಜೆಪಿ ಬಿಟ್ಟು ಹೋಗಲ್ಲ. ಮುನೇನಕೊಪ್ಪ ಕೂಡ ನನ್ನೊಂದಿಗೆ ಮಾತನಾಡಿದ್ದು, ಅವರು ಪಕ್ಷ ತೊರೆಯಲ್ಲ ಅಂದಿದ್ದಾರೆ. ನಾನು ಲೋಕಸಭೆಗೆ ಧಾರವಾಡದಿಂದಲೇ ಸ್ಪರ್ಧಿಸುವೆ" ಎಂದು ಸ್ಪಷ್ಟಪಡಿಸಿದ್ದರು.

Last Updated : Aug 28, 2023, 3:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.