ETV Bharat / state

ಶಾಸಕರು ದೂರು ನೀಡಿದ ವಿಚಾರ ನನ್ನ ಗಮನಕ್ಕೆ ಬಂದಿಲ್ಲ: ಸಿಎಂ ಸಿದ್ದರಾಮಯ್ಯ

author img

By

Published : Jul 25, 2023, 2:07 PM IST

Updated : Jul 25, 2023, 3:25 PM IST

ಹುಬ್ಬಳ್ಳಿಯಲ್ಲಿ ಮಾತನಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮದೇ ಶಾಸಕರ ಅಸಮಾಧಾನದ ಬಗ್ಗೆ ಸ್ಪಷ್ಟಪಡಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ

ಹುಬ್ಬಳ್ಳಿಯಲ್ಲಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ

ಹುಬ್ಬಳ್ಳಿ: ಸರ್ಕಾರ ರಚನೆಯಾಗಿ ಕೇವಲ ಎರಡು ತಿಂಗಳಾಗಿದೆ. ಸಣ್ಣ-ಪುಟ್ಟ ಅಸಮಾಧಾನಗಳು ಇರಬಹುದು. ಆದರೆ, ದೂರು ನೀಡುವಷ್ಟು ಅಸಮಾಧಾನ ಕಾಂಗ್ರೆಸ್​ ಪಕ್ಕದಲ್ಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಹಾವೇರಿಯಲ್ಲಿ ಇಂದು (ಮಂಗಳವಾರ) ಪ್ರಗತಿ ಪರಿಶೀಲನೆ ನಡೆಯುತ್ತಿದ್ದು, ಬೆಂಗಳೂರಿನಿಂದ ನೇರವಾಗಿ ಹುಬ್ಬಳ್ಳಿಯ ವಿಮಾನ‌‌ ನಿಲ್ದಾಣಕ್ಕೆ ಆಗಮಿಸಿದ ಅವರನ್ನು ಕಾಂಗ್ರೆಸ್​ ಮುಖಂಡರು ಬರಮಾಡಿಕೊಂಡರು. ಈ ವೇಳೆ ಶಾಸಕರ ಅಸಮಾಧಾನದ ಬಗ್ಗೆ ಮಾಧ್ಯಮದವರು ಕೇಳಲಾದ ಪ್ರಶ್ನೆಗಳಿಗೆ ಅವರು ಉತ್ತರ ನೀಡಿದರು.

''ಸಚಿವರು ತಮಗೆ ಸರಿಯಾಗಿ ಸ್ಪಂದಿಸುತ್ತಿಲ್ಲವೆಂದು 30 ಶಾಸಕರು ಪತ್ರ ಬರೆಯುವ ಮೂಲಕ ಅಳಲು ತೋಡಿಕೊಂಡಿರುವ ಬಗ್ಗೆ ನನಗೆ ಗೊತ್ತಿಲ್ಲ. ಸಚಿವರ ವಿರುದ್ಧ ಶಾಸಕರು ನೀಡಿದ ದೂರಿನ ವಿಚಾರ ಕೂಡ ನನ್ನ ಗಮನಕ್ಕೆ ಬಂದಿಲ್ಲ'' ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

''ಶಾಸಕರು, ಶಾಸಕಾಂಗ ಸಭೆ ಕರೆಯುವಂತೆ ಒತ್ತಾಯಿಸುತ್ತಿದ್ದಾರೆ. ಕಳೆದ ವಾರವೇ ಸಭೆ ಕರೆಯಬೇಕಿತ್ತು. ಆದರೆ, ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಆಗಮನದ ಹಿನ್ನೆಲೆಯಲ್ಲಿ ಮತ್ತು ಅವರೇ ಸಭೆ ನಡೆಸುವುದಾಗಿ ಹೇಳಿದ್ದರು. ಹೀಗಾಗಿ ಸಭೆ ನಡೆದಿಲ್ಲ. ಗುರುವಾರ ಶಾಸಕಾಂಗ ಪಕ್ಷದ ಸಭೆ ಕರೆದಿದ್ದೇನೆ. ಅಲ್ಲಿ ಎಲ್ಲದರ ಬಗ್ಗೆ ಚರ್ಚೆ ನಡೆಸಲಾಗುವುದು'' ಎಂದರು.

ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ

ಸರ್ಕಾರ ಅತಂತ್ರಗೊಳಿಸುವ ನಿಟ್ಟಿನಲ್ಲಿ ಸಿಂಗಾಪುರದಲ್ಲಿ ಪಿತೂರಿ ನಡಿಯುತ್ತಿದೆ ಎಂಬ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ, ''ಈ ಬಗ್ಗೆಯೂ ತಮಗೆ ಮಾಹಿತಿ ಇಲ್ಲ. ಈ ಪ್ರಶ್ನೆಯನ್ನು ಡಿ ಕೆ ಶಿವಕುಮಾರ್​ ಅವರನ್ನೇ ಕೇಳಿ'' ಎಂದು ಹೇಳುವ ಮೂಲಕ ಆ ವಿಚಾರವನ್ನು ಮೊಟಕುಗೊಳಿಸಿದರು.

ಮಳೆ ಬಗ್ಗೆ ಪ್ರತಿಕ್ರಿಯಿಸಿ, ''ಮಳೆ ಎಲ್ಲ ಕಡೆ ಆಗುತ್ತಿದೆ. ಜೂನ್​ ತಿಂಗಳಲ್ಲಿ ಸ್ವಲ್ಪ ಕೊರತೆ ಆಗಿತ್ತು. ಆದರೆ, ಜುಲೈ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚಾಗಿದೆ. ಸದ್ಯ ತಾವು ಹಾವೇರಿಗೆ ತೆರಳುತ್ತಿದ್ದು, ಮಳೆ ಎಲ್ಲೆಲ್ಲೆ ಸುರಿದಿದೆ ಅನ್ನೋದರ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಹಾವೇರಿ ಬಳಿಕ ಉಡುಪಿ, ಮಂಗಳೂರು, ಉತ್ತರ ಕನ್ನಡ ಜಿಲ್ಲೆಗೆ ತೆರಳುವೆ. ಕಾಂಗ್ರೆಸ್​ ಸರ್ಕಾರ ಆಡಳಿತಕ್ಕೆ ಬಂದರೆ ಬರಗಾಲ ಬರುತ್ತದೆ ಅನ್ನೋದು ಮೂಢನಂಬಿಕೆ. ಇದರಲ್ಲಿ ನನಗೆ ನಂಬಿಕೆ ಇಲ್ಲ. ನೈಸರ್ಗಿಕ ವಿಕೋಪದಿಂದ ಇಂತಹ ಘಟನೆಗಳು ಸಹಜ. ಅದಕ್ಕೆಲ್ಲ ಕಿವಿಗೊಡಬಾರದು'' ಎಂದು ಸಿಎಂ ಹೇಳಿದರು.

''ಗೃಹಲಕ್ಷ್ಮೀ ಅರ್ಜಿಗೆ ಹಣ ಪಡೆದರೆ ಕ್ರಿಮಿನಲ್​ ಕೇಸ್ ದಾಖಲು ಮಾಡಲಾಗುತ್ತದೆ. ಸರ್ಕಾರ ಉಚಿತವಾಗಿ ನೋಂದಣಿ ಮಾಡಿಕೊಡುತ್ತಿದೆ. ಯಾರಾದರೂ ಹಣ ತೆಗೆದುಕೊಂಡಿರುವ ಬಗ್ಗೆ ಕಂಡು ಬಂದಲ್ಲಿ ಅವರ ಮೇಲೆ ಕ್ರಿಮಿನಲ್​ ಕೇಸ್ ದಾಖಲು ಮಾಡಲಾಗುತ್ತದೆ'' ಎಂದು ಎಚ್ಚರಿಕೆ ನೀಡಿದರು.

ಬರುವ ಲೋಕಸಭೆಗೆ ಬಿಜೆಪಿ ಮತ್ತು ಜೆಡಿಎಸ್​ ಒಂದಾಗಿ ಕಾಂಗ್ರೆಸ್ ಪಕ್ಷವನ್ನು ಎದುರಿಸಲಿವೆ ಎಂಬ ಮಾತಿಗೆ, ''ಒಂದಾಗಲಿ, ಬಿಜೆಪಿ ಮತ್ತು ಜೆಡಿಎಸ್ ಒಗ್ಗಟ್ಟು ಆಗುವುದರಿಂದ ನಮಗೆ ಯಾವುದೇ ಭಯವಿಲ್ಲ. ನಾವು ಈ ಬಾರಿ 15 ರಿಂದ 20 ಲೋಕಸಭೆ ಸ್ಥಾನಗಳನ್ನು ಕರ್ನಾಟಕದಲ್ಲಿ ಗೆದ್ದೇ ಗೆಲ್ಲುತ್ತೇವೆ'' ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಸಿಂಗಾಪುರದಲ್ಲಿ ಕುಳಿತು ಸರ್ಕಾರ ಬೀಳಿಸುವ ಪಿತೂರಿ ಬಗ್ಗೆ ನಮಗೂ ಮಾಹಿತಿ ಇದೆ: ಡಿ ಕೆ ಶಿವಕುಮಾರ್

Last Updated : Jul 25, 2023, 3:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.