ಹುಬ್ಬಳ್ಳಿ: ನಿಷೇಧಿತ ಪ್ಲಾಸ್ಟಿಕ್ ತಯಾರಿಸುವ ಹಾಗೂ ಸಂಗ್ರಹಿಸುತ್ತಿದ್ದ ಗೋಡೌನ್ಗಳ ಮೇಲೆ ಪಾಲಿಕೆ ಘನತ್ಯಾಜ್ಯ ನಿರ್ವಹಣಾಧಿಕಾರಿಗಳು ದಾಳಿ ನಡೆಸಿ ಲಕ್ಷಾಂತರ ಮೌಲ್ಯದ ನಿಷೇಧಿತ ಪ್ಲಾಸ್ಟಿಕ್ ವಶಪಡಿಸಿಕೊಂಡು ದಂಡ ವಿಧಿಸಿದ್ದಾರೆ.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತ ಡಾ. ಸುರೇಶ ಇಟ್ನಾಳ್ ರವರ ನಿರ್ದೇಶನದಂತೆ ಪಾಲಿಕೆಯ ಘನತ್ಯಾಜ್ಯ ವಸ್ತು ನಿರ್ವಹಣಾ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ವಿಜಯಕುಮಾರ್ ಆರ್ ರವರ ನೇತೃತ್ವದ ತಂಡ ನಗರದ ಕಾರವಾರ ರಸ್ತೆಯಲ್ಲಿರುವ ದೊಡ್ಡ ಪ್ಲಾಸ್ಟಿಕ್ ಗೋಡೌನ್ನ ಮೇಲೆ ದಾಳಿ ಮಾಡಿದ್ದರು. ದಾಲ್ ಮಿಲ್ ಗೋಡೌನ್ನಲ್ಲಿ 2019 ಕೆ. ಜಿ(2.1 ಟನ್) ನಿಷೇಧಿತ ಪ್ಲಾಸ್ಟಿಕ್ ವಶಪಡಿಸಿಕೊಂಡು ರೂ. 2. ಲಕ್ಷ ದಂಡ ಹಾಗೂ ಇಂಡಿಯನ್ ರೋಡ್ ಟ್ರಾನ್ಸ್ಪೋರ್ಟ್ ಗೋಡೌನ್ನ ಮೇಲೆ ದಾಳಿ ಮಾಡಿ 4 ಟನ್ ನಿಷೇಧಿತ ಪ್ಲಾಸ್ಟಿಕ್ ವಶಪಡಿಸಿಕೊಂಡು 2 ಲಕ್ಷ ದಂಡ ವಿಧಿಸಿದ್ದಾರೆ.
ದಾಳಿ ಸಂದರ್ಭದಲ್ಲಿ ವಲಯ ಕಚೇರಿ 10 ರ ಸಹಾಯಕ ಆಯುಕ್ತ ಆನಂದ ಕಾಂಬಳೆ, ಪಾಲಿಕೆಯ ಪರಿಸರ ಅಭಿಯಂತರ ಸಂತೋಷ್ ಕುಮಾರ್ ಯರಂಗಳಿ, ಶ್ರೀಧರ್ ಟಿ. ಎನ್, ಯುವರಾಜ್ ಕೆ. ಆರ್, ಮಲ್ಲಿಕಾರ್ಜುನ ಬಿ. ಎಮ್, ನವೀನ ಎಮ್, ಎನ್ ಹಾಗೂ ಆರೋಗ್ಯ ನಿರೀಕ್ಷಕ ರಾಘವೇಂದ್ರ ಉಳ್ಳಿಕಾಶಿ, ಸುರೇಶ ರಾಥೋಡ್, ನೂರಂದಪ್ಪ ಭಜಂತ್ರಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ದಾಳಿಯಲ್ಲಿ ಪಾಲ್ಗೊಂಡಿದ್ದರು.