ETV Bharat / state

Amarnath Yatra: ಸ್ವಂತ ಹಣದಲ್ಲಿ ಹೆಲಿಕ್ಯಾಪ್ಟರ್​ ಮೂಲಕ ಶ್ರೀನಗರ ತಲುಪಿದ ಧಾರವಾಡದ ಯಾತ್ರಿಗಳು!

author img

By

Published : Jul 10, 2023, 3:51 PM IST

ಜು. 6ರಂದು ಅಮರನಾಥ ದರ್ಶನ ಮಾಡಿ ವಾಪಸ್​ ಬರುವಾಗ ಮಾರ್ಗಮಧ್ಯೆ ಗುಡ್ಡ ಕುಸಿತ ಉಂಟಾಗಿದ್ದು, ಐವರು ಯಾತ್ರಿಗಳು ಸಿಲುಕಿಕೊಂಡಿದ್ದರು.

ಶ್ರೀನಗರ ತಲುಪಿದ ಧಾರವಾಡ ಯಾತ್ರಿಗಳು
ಶ್ರೀನಗರ ತಲುಪಿದ ಧಾರವಾಡ ಯಾತ್ರಿಗಳು

ಧಾರವಾಡ : ನಿರಂತರ ಮಳೆಯಾಗುತ್ತಿರುವ ಪರಿಣಾಮ ಜಮ್ಮು ಕಾಶ್ಮೀರದ ಅಮರನಾಥ ಮಾರ್ಗ ಮಧ್ಯೆ ಗುಡ್ಡಕುಸಿತ ಉಂಟಾಗಿ ಅಮರನಾಥದಲ್ಲಿ ಧಾರವಾಡದ ಐವರು ತಮ್ಮದೇ ಸ್ವಂತ ಹಣದಲ್ಲಿ ಶ್ರೀನಗರ ತಲುಪಿದ್ದಾರೆ. ಪಂಚತಾರಣಿ ಬಳಿ ಸಿಲುಕಿದ್ದ ಐವರು ಧಾರವಾಡ ಯಾತ್ರಿಗಳು ಸುರಕ್ಷಿತವಾಗಿ ಶ್ರೀನಗರ ತಲುಪಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಟೆಂಟ್‌ನಲ್ಲಿ ವಾಸವಾಗಿದ್ದ ಯಾತ್ರಿಗಳು ಸರ್ಕಾರದಿಂದ ಯಾವುದೇ ಸಹಾಯ ಸಿಗದ ಹಿನ್ನೆಲೆ ಹೆಲಿಕ್ಯಾಪ್ಟರ್ ಮೂಲಕ ಶ್ರೀನಗರಕ್ಕೆ ಪ್ರಯಾಣಿಸಿದ್ದಾರೆ.

ಪ್ರತಿಯೊಬ್ಬರಿಗೆ 4200ರೂ. ನೀಡಿ ಹೆಲಿಕ್ಯಾಪ್ಟರ್​ನಲ್ಲಿ ಪ್ರಯಾಣಿಸಿ ಸದ್ಯ ಐವರು ಶ್ರೀನಗರದಲ್ಲಿದ್ದಾರೆ. ರಾಕೇಶ ನಾಝರೆ, ವಿಠ್ಠಲ ಬಾಚಗುಂಡಿ, ಹರೀಶ ಸಾಳುಂಕೆ, ನಾಗರಾಜ ಮತ್ತು ಮಡಿವಾಳಪ್ಪ ಕೊಟಬಾಗಿ ಸುರಕ್ಷಿತವಾಗಿದ್ದು, ಜು. 3 ರಂದು ಧಾರವಾಡದಿಂದ ತೆರಳಿದ್ದರು. ಜು. 6ರಂದು ಅಮರನಾಥ ದರ್ಶನ ಮಾಡಿ ವಾಪಸ್​ ಬರುವಾಗ ವೇಳೆ ಭಾರಿ ಮಳೆಯಾದ ಪರಿಣಾಮ ಗುಡ್ಡ ಕುಸಿತ ಉಂಟಾಗಿ ಮಾರ್ಗ ಬಂದ್ ಆಗಿತ್ತು. ಇದರಿಂದ ಅಮರನಾಥದಲ್ಲಿ ಸಿಲುಕಿ ಸಂಕಷ್ಟಕ್ಕೆ ಸಿಲುಕಿದ್ದರು.

ಯಾತ್ರಿಗಳಿಗೆ ಅಗತ್ಯ ನೆರವು : ಅಮರನಾಥಯಾತ್ರೆಗೆ ರಾಜ್ಯದಿಂದ ತೆರಳಿದ್ದ ಯಾತ್ರಾರ್ಥಿಗಳು ಸುರಕ್ಷಿವಾಗಿದ್ದು, ಅವರಿಗೆ ಅಗತ್ಯ ನೆರವು ಒದಗಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ವಿಧಾನಸಭೆಗೆ ತಿಳಿಸಿದ್ದಾರೆ. ಇಂದು ಶೂನ್ಯವೇಳೆಯಲ್ಲಿ ಮಾಗಡಿ ಶಾಸಕ ಹೆಚ್.ಸಿ ಬಾಲಕೃಷ್ಣ ಅವರು ಮಾಡಿದ ಪ್ರಸ್ತಾಪಕ್ಕೆ ಉತ್ತರಿಸಿದ ಸಚಿವರು, ಅಮರನಾಥಯಾತ್ರೆಗೆ ಹೋಗಿದ್ದ 18 ಸಾವಿರ ಯಾತ್ರಾರ್ಥಿಗಳು ಹವಾಮಾನ ವೈಪರಿತ್ಯದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಮ್ಮ ರಾಜ್ಯದಿಂದ ತೆರಳಿರುವ ಯಾತ್ರಾರ್ಥಿಗಳು ಜಮ್ಮು ಮತ್ತು ಕಾಶ್ಮೀರ ಸರ್ಕಾರದ, ರಾಷ್ಟ್ರೀಯ ವಿಕೋಪ ನಿರ್ವಹಣಾ ಪಡೆ, ಸೇನಾಪಡೆಗಳ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ : ಮಳೆಯಿಂದ ಅಮರನಾಥ ಮಾರ್ಗ ಮಧ್ಯೆ ಗುಡ್ಡ ಕುಸಿತ: ಸಂಕಷ್ಟಕ್ಕೆ ಸಿಲುಕಿದ ಧಾರವಾಡದ ಐವರು ಗೆಳೆಯರು

ಈಗಾಗಲೇ 129 ಯಾತ್ರಾರ್ಥಿಗಳು ಶ್ರೀನಗರ ತಲುಪಿದ್ದಾರೆ. ಬಾಲ್ತಾಲ್ ಕ್ಯಾಂಪನಲ್ಲಿ ಇರುವವರಿಗೆ ಸೌಕರ್ಯವಿದೆ. ರಸ್ತೆ ಬಂದ್​ ಆಗಿದ್ದು, ಬುಧವಾರದ ನಂತರ ರಸ್ತೆ ಸಂಪರ್ಕ ಆರಂಭವಾಗುವ ಮಾಹಿತಿ ಇದೆ. ಅಲ್ಲಿಯವರೆಗೆ ಕ್ಯಾಂಪ್​ನಲ್ಲಿ ಉಳಿದುಕೊಳ್ಳಬಹುದು. ನಾಲ್ವರು ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಶ್ರೀನಗರದಲ್ಲಿದ್ದು, ಯಾತ್ರಾರ್ಥಿಗಳ ನೆರವಿಗೆ ಸ್ಪಂಧಿಸುತ್ತಿದ್ದಾರೆ. ರಾಜ್ಯದವರು ಸುರಕ್ಷಿತವಾಗಿದ್ದು, ಯಾವುದೇ ತೊಂದರೆ ಇಲ್ಲ ಎಂದು ಕೃಷ್ಣ ಬೈರೇಗೌಡ ಅವರು ಮಾಹಿತಿ ನೀಡಿದರು.

ಇನ್ನು ಲೇಲಡಾಖ್​​​​ನಲ್ಲಿ ಸಿಲುಕಿರುವವರ ಮಾಹಿತಿ ಇಲ್ಲ. ಆ ಪ್ರದೇಶ ಸೇನಾ ನಿಯಂತ್ರಣದಲ್ಲಿದೆ. ಅಲ್ಲಿನ ಸರ್ಕಾರವನ್ನು ಸಂಪರ್ಕಿಸಿ ನೆರವಿಗೆ ಸ್ಪಂಧಿಸುವ ಭರವಸೆ ನೀಡಿದರು. ಇದಕ್ಕೂ ಮುನ್ನ ಬಾಲಕೃಷ್ಣ ಅವರು ಮಾತನಾಡಿ ಅಮರನಾಥಯಾತ್ರೆಗೆ ಹೋಗಿದ್ದ ನಾಲ್ವರು ಲೇಲಡಾಖ್​​​ನ ಹೋಟೆಲ್​ನಲ್ಲಿದ್ದಾರೆ. ವಾಪಸ್ ಬರಲು ಸಾಧ್ಯವಾಗದೇ ತೊಂದರೆ ಆಗುತ್ತಿದ್ದು, ಸರ್ಕಾರ ಅವರ ನೆರವಿಗೆ ಧಾವಿಸಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ : ರಾಜ್ಯದ ಅಮರನಾಥ ಯಾತ್ರಿಕರು ಸುರಕ್ಷಿತವಾಗಿದ್ದಾರೆ, ಭಯ ಪಡುವ ಅವಶ್ಯಕತೆ ಇಲ್ಲ: ಹೆಚ್ ಕೆ ಪಾಟೀಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.