ETV Bharat / state

ದಾವಣಗೆರೆಯಲ್ಲಿ ಪ್ರಧಾನಿ ಮೋದಿ ರೋಡ್​ ಶೋ ವೇಳೆ ಭದ್ರತಾ ಲೋಪ

author img

By

Published : Mar 25, 2023, 7:54 PM IST

Updated : Mar 25, 2023, 9:21 PM IST

ದಾವಣಗೆರೆಯಲ್ಲಿ ಇಂದು ಪ್ರಧಾನಿ ಮೋದಿ ನಡೆಸಿದ ರೋಡ್​ ಶೋ ವೇಳೆ ಭದ್ರತಾ ಲೋಪ ಉಂಟಾಗಿದೆ. ಆದರೆ, ಯಾವುದೇ ಭದ್ರತಾ ಲೋಪ ಉಂಟಾಗಿಲ್ಲ ಎಂದು ಎಸ್​ಪಿ ಸಿಬಿ ರಿಷ್ಯಂತ್ ತಿಳಿಸಿದ್ದಾರೆ.

Security breach during PM Modi's roadshow
ಪ್ರಧಾನಿ ಮೋದಿ ರೋಡ್​ ಶೋ ವೇಳೆ ಭದ್ರತಾ ಲೋಪ

ದಾವಣಗೆರೆಯಲ್ಲಿ ಪ್ರಧಾನಿ ಮೋದಿ ರೋಡ್​ ಶೋ ವೇಳೆ ಭದ್ರತಾ ಲೋಪ

ದಾವಣಗೆರೆ: ಪ್ರಧಾನಿ ಮೋದಿ ರೋಡ್​ ಶೋ ವೇಳೆ ಭದ್ರತಾ ಲೋಪ ಉಂಟಾಗಿದೆ. ಯುವಕನೋರ್ವ ಪ್ರಧಾನಿ ಬೆಂಗಾವಲು ಪಡೆಯತ್ತ ಓಡಲು ಯತ್ನಿಸಿದ ಘಟನೆ ನಡೆದಿದೆ. ಈ ವೇಳೆ ತಕ್ಷಣವೇ ಎಚ್ಚೆತ್ತ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ಇಲ್ಲಿನ ಜಿಎಂಐಟಿ ಹೆಲಿಪ್ಯಾಡ್​ಯಿಂದ ತೆರೆದ ವಾಹನದಲ್ಲಿ ಜಿಎಂಐಟಿ ಕ್ಯಾಂಪಸ್ ಬಳಿಯಿರುವ ವಿಶಾಲ ಮೈದಾನದತ್ತ ಪ್ರಧಾನಿ ಮೋದಿ ಬರುತ್ತಿದ್ದರು. ಈ ವೇಳೆ ಏಕಾಏಕಿ ಯುವಕನೋರ್ವ ಪ್ರಧಾನಿ ವಾಹನದತ್ತ ಓಡಿ ಬಂದಿದ್ದಾನೆ. ಇದನ್ನು ಗಮನಿಸಿದ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ, ಯುವಕ ರಸ್ತೆಗೆ ತಲುಪುವ ಮುನ್ನವೇ ಆತನನ್ನು ತಡೆದಿದ್ದಾರೆ.

ಪೊಲೀಸರ ಸ್ಪಷ್ಟನೆ: ತೆರೆದ ವಾಹನದಲ್ಲಿ ಪ್ರಧಾನಿ ಮೋದಿ ವೇದಿಕೆಗೆ ಆಗಮಿಸುವ ವೇಳೆ ಯುವಕ ಬ್ಯಾರಿಕೇಡ್ ಹಾರಿ ಬಂದಿದ್ದಾನೆ. ಈತನನ್ನು ಕೊಪ್ಪಳ ಮೂಲದ 28 ವರ್ಷದ ಬಸವರಾಜ ಎಂದು ಗುರುತಿಸಲಾಗಿದೆ. ಪ್ರಧಾನಿ ವಾಹನದತ್ತ ಓಡಿ ಬರುತ್ತಿದ್ದಂತೆ ಸ್ವತಃ ಎಡಿಜಿಪಿ ಅಲೋಕ್ ಕುಮಾರ್ ಅವರೇ ಯುವಕ ಬಸವರಾಜ​ನನ್ನು ಹಿಡಿದಿದ್ದಾರೆ.

'ಪ್ರಧಾನಿ ಮೋದಿ ಅವರ ಭದ್ರತೆಯಲ್ಲಿ ಯಾವುದೇ ಲೋಪವಾಗಿಲ್ಲ. ನಾನು ಮತ್ತು ಎಸ್​ಪಿಜಿಯವರು ದೂರದಲ್ಲಿರುವಾಗಲೇ ಯುವಕನನ್ನು ತಡೆದಿದ್ದೇವೆ. ಈ ಕುರಿತು ಸೂಕ್ತ ಕ್ರಮ ಕೈಗೊಂಡಿದ್ದೇವೆ' ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.

ಇದೇ ವಿಷಯವಾಗಿ ಈಟಿವಿ ಭಾರತ್​​ ಜೊತೆ ದೂರವಾಣಿ ಮೂಲಕ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಸಿಬಿ ರಿಷ್ಯಂತ್, ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಯಾವುದೇ ಭದ್ರತಾ ಲೋಪ ಉಂಟಾಗಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರಿಂದ ನೂಕಾಟ ತಳ್ಳಾಟ ನಡೆದಿದೆ. ಈ ಸಂದರ್ಭದಲ್ಲಿ ಬ್ಯಾರಿಕೇಡ್ ಹಾರಿ ಆ ಯುವಕ ಮುಂದೇ ಬಂದಿದ್ದಾನೆ ಅಷ್ಟೇ ಎಂದು ಹೇಳಿದರು.

ಅಲ್ಲದೇ, ಯುವಕನ ಬಳಿ ಯಾವುದೇ ಹಾರವೂ ಇರಲಿಲ್ಲ. ಪ್ರಧಾನಿಯವರು ವಾಹನದಲ್ಲಿ ಬರುತ್ತಿದ್ದಾಗ ಮುಂದೆ ಬಂದ ಯುವಕನನ್ನು ತಡೆಯಲಾಗಿದೆ. ಯುವಕ ಓಡಿ ಬಂದ ಜಾಗದಿಂದ ಪ್ರಧಾನಿ ಮೋದಿ ದೂರ ಇದ್ದರು. ಇಲ್ಲಿ ಯಾವುದೇ ಭದ್ರತಾ ವೈಫಲ್ಯವಾಗಿಲ್ಲ ಎಂದು ಎಸ್​ಪಿ ಸ್ಪಷ್ಟನೆ ನೀಡಿದರು.

ಇನ್ನು, ವಿಜಯ ಸಂಕಲ್ಪ ಯಾತ್ರೆಯ ಸಮಾರೋಪ ಸಮಾರಂಭದ ಮಹಾಸಂಗಮ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಪಾಲ್ಗೊಂಡಿದ್ದರು. ಭವ್ಯ ಸ್ವಾಗತ ಕೋರಲು ಅಪಾರ ಜನಸ್ತೋಮ ನೆರೆದಿದ್ದರು. ಸಮಾವೇಶಕ್ಕೂ ಜನಸಾಗರವೇ ಹರಿದು ಬಂದಿತ್ತು. ಯುವಕರು, ಬಾಲಕರು ಮೋದಿ ಮುಖವಾಡ ಧರಿಸಿ ಗಮನ ಸೆಳೆದರು. ಅಲ್ಲದೇ, ಮೋದಿ ಮೋದಿ ಎಂದು ಅಭಿಮಾನಿಗಳು ಘೋಷಣೆ ಕೂಗಿದರು. ಇದೇ ವೇಳೆ ವೇದಿಕೆಗೆ ಆಗಮಿಸುವ ಮುನ್ನ ಪ್ರಧಾನಿ ಮೋದಿ ಜನರ ಮಧ್ಯೆ ಬಂದು ನೆರೆದಿದ್ದ ಜನರು ಉತ್ಸಾಹ ಹೆಚ್ಚಿಸಿದರು.

ಇದನ್ನೂ ಓದಿ: ಡಬಲ್ ಇಂಜಿನ್ ಸರ್ಕಾರವನ್ನು ಮರಳಿ ತರಲು ಕರ್ನಾಟಕ ನಿರ್ಧರಿಸಿದೆ: ಪ್ರಧಾನಿ ಮೋದಿ

ಹುಬ್ಬಳ್ಳಿಯಲ್ಲೂ ನಡೆದಿತ್ತು ಇಂತಹದ್ದೇ ಘಟನೆ: ಕಳೆದ ಫೆಬ್ರವರಿ 3ರಂದು ಪ್ರಧಾನಿ ಮೋದಿ ಪ್ರವಾಸದ ವೇಳೆ ಇಂತಹದ್ದೇ ಘಟನೆ ನಡೆದಿತ್ತು. ಅಂದು ಹಮ್ಮಿಕೊಂಡಿದ್ದ ರಾಷ್ಟ್ರೀಯ ಯುವಜನೋತ್ಸವ ಉದ್ಘಾಟನಾ ಸಮಾರಂಭದ ಪೂರ್ವಭಾವಿಯಾಗಿ ಪ್ರಧಾನಿ ಮೋದಿ ರೋಡ್‌ ಶೋ ನಡೆಸಿದ್ದರು. ಈ ವೇಳೆ ಬಾಲಕನೊಬ್ಬ ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಹಾರಿ ನುಗ್ಗಿ ಬಂದಿದ್ದ. ಅಲ್ಲದೇ, ಈ ಬಾಲಕ ಕೈಯಲ್ಲಿ ಹೂವಿನ ಹಾರ ಹಿಡಿದು ಮೋದಿ ಕಾರಿನತ್ತ ಬಂದಿದ್ದ. ಆಗ ಪ್ರಧಾನಿ ಮೋದಿ ಅವರು ಬಾಲಕ ತಂದಿದ್ದ ಹಾರವನ್ನು ಸ್ವೀಕರಿಸಿದ್ದರು. ಆದರೆ, ಈ ಸಂದರ್ಭದಲ್ಲಿ ಭದ್ರತಾ ಲೋಪ ಕಂಡು ಬಂದಿದೆ ಎಂಬ ಆರೋಪವನ್ನು ಪೊಲೀಸ್​ ಅಧಿಕಾರಿಗಳು ಅಲ್ಲಗೆಳೆದಿದ್ದರು.

ಇದನ್ನೂ ಓದಿ: ಹುಬ್ಬಳ್ಳಿ ಪ್ರಧಾನಿ ಮೋದಿ ರೋಡ್ ಶೋ ವೇಳೆ ಭದ್ರತೆ ಲೋಪ.. ಆರೋಪವನ್ನು ತಳ್ಳಿ ಹಾಕಿದ ಪೊಲೀಸ್​ ಅಧಿಕಾರಿಗಳು

Last Updated : Mar 25, 2023, 9:21 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.