ದಾವಣಗೆರೆ: ಮಹಾನಗರ ಪಾಲಿಕೆಗೆ 15ನೇ ಹಣಕಾಸು ಯೋಜನೆಯಡಿ 29 ಕೋಟಿ ರೂಪಾಯಿ ಅನುದಾನ ಬಿಡುಗಡೆ ಆಗಿದೆ. ಆದರೆ ಇದನ್ನು ಎಲ್ಲ 45 ವಾರ್ಡ್ಗಳಿಗೆ ಸಮರ್ಪಕವಾಗಿ ಹಂಚಿಕೆ ಮಾಡದೆ ತಾರತಮ್ಯ ಎಸಗಲಾಗುತ್ತಿದ್ದು, ಕೂಡಲೇ ಮಧ್ಯ ಪ್ರವೇಶಿಸಿ ಸರಿಪಡಿಸಬೇಕು ಎಂದು ಒತ್ತಾಯಿಸಿ ಪಾಲಿಕೆ ವಿರೋಧ ಪಕ್ಷದ ನಾಯಕ ಗಡಿಗುಡಾಳ್ ಮಂಜುನಾಥ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಅವರಿಗೆ ಮನವಿ ಸಲ್ಲಿಸಲಾಯಿತು.
2022-23 ನೇ ಸಾಲಿನಲ್ಲಿ ಅನುದಾನ ಬಂದಿದ್ದರೂ ಇದುವರೆಗೆ ಬಿಡುಗಡೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಜಯಮ್ಮ ಗೋಪಿನಾಯ್ಕ್ ಮೇಯರ್ ಆಗಿ ಎಂಟು ತಿಂಗಳಾಗುತ್ತಾ ಬಂದಿದ್ದರೂ, 15ನೇ ಹಣಕಾಸು ಯೋಜನೆಯಡಿ ಬಂದಿರುವ ಹಣವನ್ನು ಸರಿಯಾಗಿ ನೀಡದೇ ತಾರತಮ್ಯ ಎಸಗಲಾಗಿದೆ. ಇದರಿಂದ ಅಭಿವೃದ್ಧಿ ಕುಂಠಿತವಾಗಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
ಅನುದಾನ ಬಿಡುಗಡೆ ಮಾಡದೇ ನಿರ್ಲಕ್ಷ್ಯ ತೋರಲಾಗಿದೆ. 45 ವಾರ್ಡ್ ಗಳಿಗೂ ಅನುದಾನ ಸಮರ್ಪಕವಾಗಿ ಹಂಚುವಂತೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗಿದೆ. ನಾವು ಹೋರಾಟ ಮಾಡಿದ್ದೇವೆ. ಆಗ ಅನುದಾನ ಸರಿಯಾಗಿ ಯಾವುದೇ ಪಕ್ಷಪಾತ ಇಲ್ಲದೇ ನೀಡುವುದಾಗಿ ಮೇಯರ್ ಭರವಸೆ ನೀಡಿದ್ದರು. ಆದ್ರೂ ಪ್ರಯೋಜವಾಗಿಲ್ಲ. ನೀಡಿದ್ದ ಭರವಸೆಯನ್ನೂ ಈಡೇರಿಸಿಲ್ಲ ಎಂದು ದೂರಲಾಗಿದೆ.
ಸಭೆಯಲ್ಲಿ ಎಲ್ಲಾ ವಾರ್ಡ್ಗಳಿಗೂ ತಲಾ 25 ಲಕ್ಷ ರೂಪಾಯಿ ಅನುದಾನ ನೀಡುವುದಾಗಿ ಒಪ್ಪಿದ್ದರೂ ಕಾರ್ಯರೂಪಕ್ಕೆ ಬಂದಿಲ್ಲ. ಈ ಬಗ್ಗೆ ದಾಖಲೆಯೂ ಆಗಿದೆ. ಕಾಂಗ್ರೆಸ್ ಸದಸ್ಯರ ವಾರ್ಡ್ಗಳಿಗೆ ಸರಿಯಾಗಿ ಅನುದಾನ ನೀಡಿಲ್ಲ. ಇದರಿಂದ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ. ಆದ್ದರಿಂದ ಮಧ್ಯಪ್ರವೇಶಿಸಿ ಸಮರ್ಪಕ ಅನುದಾನ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಇದನ್ನೂ ಓದಿ: ದಾವಣಗೆರೆ ಯುವತಿಯರ ಹೊಡೆದಾಟಕ್ಕೆ ಬಿಗ್ ಟ್ವಿಸ್ಟ್: ಹಲ್ಲೆ ಹಿಂದಿತ್ತು ಇಬ್ಬರ ನಡುವಿನ ಸಲಿಂಗಕಾಮ!