ETV Bharat / state

ಬಿಜೆಪಿ, ಜೆಡಿಎಸ್ ಶಾಸಕರು ಕಾಂಗ್ರೆಸ್​ಗೆ ಬಂದರೆ ಅಚ್ಚರಿ ಇಲ್ಲ: ಸಚಿವ ಶಿವರಾಜ್ ತಂಗಡಗಿ

author img

By

Published : Aug 21, 2023, 5:34 PM IST

Updated : Aug 21, 2023, 5:52 PM IST

ನಾವು ಶಾಸಕರನ್ನು ಕರೆದುಕೊಳ್ಳಬೇಕು ಎಂದು ನಿರ್ಧರಿಸಿದರೆ ಬಿಜೆಪಿ, ಜೆಡಿಎಸ್ ಸಂಪೂರ್ಣ ಖಾಲಿಯಾಗುತ್ತದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ತಂಗಡಗಿ ವ್ಯಂಗ್ಯವಾಡಿದರು.

minister-shivraj-thangadagi-reaction-on-joining-of-bjp-and-jds-mlas-to-congress
Minister Shivraj Thangadagi: ಬಿಜೆಪಿ, ಜೆಡಿಎಸ್ ಶಾಸಕರು ಕಾಂಗ್ರೆಸ್​ಗೆ ಬಂದರೆ ಆಶ್ಚರ್ಯ ಪಡುವ ಅಗತ್ಯ ಇಲ್ಲ - ಶಿವರಾಜ್ ತಂಗಡಗಿ

ಸಚಿವ ಶಿವರಾಜ್ ತಂಗಡಗಿ

ದಾವಣಗೆರೆ: "ಬಿಜೆಪಿ, ಜೆಡಿಎಸ್‌ನಿಂದ ಅತಿಹೆಚ್ಚು ಶಾಸಕರು ಕಾಂಗ್ರೆಸ್​ಗೆ ಬರುತ್ತಾರೆ. ಬಿಜೆಪಿಯಿಂದ ಕಾಂಗ್ರೆಸ್​ಗೆ ಸೇರ್ಪಡೆಯಾದವರು ಕೂಡ ಕಾಂಗ್ರೆಸ್​ಗೆ ಬರುವ ಸಾಧ್ಯತೆ ದಟ್ಟವಾಗಿದೆ" ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ತಂಗಡಗಿ ಹೇಳಿದರು. ದಾವಣಗೆರೆಯಲ್ಲಿಂದು ಮಾತನಾಡಿದ ಅವರು, "ಬಿಜೆಪಿಯಂತೆ ಅಪರೇಷನ್ ಕಮಲ, ಸ್ವಾರ್ಥ ರಾಜಕಾರಣ ನಾವು ಮಾಡುವುದಿಲ್ಲ. ಬದಲಾಗಿ, ಸಿಎಂ ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಯಾಗಿ ರಾಜ್ಯದ ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ. ಅದ್ದರಿಂದ ಸಿದ್ದರಾಮಯ್ಯರ ಒಳ್ಳೆಯ ಕೆಲಸ, ತತ್ವ ಸಿದ್ಧಾಂತ ಮೆಚ್ಚಿ ಶಾಸಕರು ಕಾಂಗ್ರೆಸ್​ಗೆ ಬಂದರೆ ಆಶ್ಚರ್ಯ ಪಡುವ ಅಗತ್ಯ ಇಲ್ಲ" ಎಂದರು.

"135 ಶಾಸಕರು ಇದ್ದರೂ ನಮ್ಮ ಪಕ್ಷಕ್ಕೆ ಬರುತ್ತಾರೆೆಂದರೆ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬಲು ಮತ್ತು ಪಕ್ಷದ ಶಕ್ತಿ ಜಾಸ್ತಿಯಾಗಿದೆ ಎಂದರ್ಥ. ಬಿಜೆಪಿಯವರು ಆಪರೇಷನ್ ಮಾಡಲು ಸಾಧ್ಯವಿಲ್ಲ. ಐದು ವರ್ಷ ಅಧಿಕಾರದಲಿದ್ದು ರಾಜ್ಯಕ್ಕೆ ಏನೂ ಕೊಡುಗೆ ನೀಡದವರ ಜೊತೆ ಯಾರು ಹೋಗುತ್ತಾರೆ?. ವಿಧಾನಸಭಾ ಚುನಾವಣೆಯಲ್ಲಿ ದೇಶದ ಪ್ರಧಾನಿ ಗಲ್ಲಿಗಲ್ಲಿ ಸುತ್ತಿದರೂ 66 ಸ್ಥಾನಗಳು ಮಾತ್ರ ಬಂದವು. ಬಿಜೆಪಿಯವರ ಆಡಳಿತ ವ್ಯವಸ್ಥೆ ಎಲ್ಲರಿಗೂ ಗೊತ್ತಾಗಿದೆ. ಅದ್ದರಿಂದ ಯಾರೂ ಹೋಗಲ್ಲ" ಎಂದು ಟೀಕಿಸಿದರು. ಒಳಮೀಸಲಾತಿ ಬಗ್ಗೆ ಪ್ರತಿಕ್ರಿಯಿಸಿ, "ಅದಕ್ಕೊಂದು ಸಮಿತಿ ಇದೆ. ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳು ಚರ್ಚೆ ಮಾಡಿ ನಿರ್ಧಾರವನ್ನು ಕೈಗೊಳ್ಳುತ್ತಾರೆ" ಎಂದು ತಿಳಿಸಿದರು.

ಹೆಚ್​.ಡಿ.ಕುಮಾರಸ್ವಾಮಿಯವರ ವರ್ಗಾವಣೆ ದಂಧೆ ಆರೋಪಕ್ಕೆ ಪ್ರತಿಕ್ರಿಯಿಸಿ, "ಹೆಚ್.​ಡಿ.ಕುಮಾರಸ್ವಾಮಿಯವರು ವರ್ಗಾವಣೆ ದಂಧೆ ಬಗ್ಗೆ ಮಾತನಾಡುತ್ತಾರೆ. ಅವರ ಅವಧಿಯಲ್ಲಿ ವರ್ಗಾವಣೆ ನಡೆದಿಲ್ವಾ?. ಹೊಸ ಸರ್ಕಾರ ಬಂದಾಗ ವರ್ಗಾವಣೆ ಎನ್ನುವುದು ಒಂದು ಪ್ರಕ್ರಿಯೆ. ಕೆಲವು ಭ್ರಷ್ಟ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕಾಗುತ್ತದೆ. ಇವರು ಅಧಿಕಾರದಲ್ಲಿದ್ದಾಗ ವರ್ಗಾವಣೆ ಮಾಡಿದ್ದರು, ಆಗ ಇವರೂ ದಂಧೆ ನಡೆಸಿದ್ದರಾ?. ಮೊದಲು ತಮ್ಮನ್ನು ತಾವು ಪ್ರೆಶ್ನೆ ಮಾಡಿಕೊಂಡು ನಂತರ ಬೇರೆಯವರನ್ನು ಪ್ರಶ್ನಿಸಬೇಕು ಎಂದು ವಿನಂತಿ ಮಾಡಿಕೊಳ್ಳುತ್ತೇನೆ" ಎಂದು ಹೆಚ್​ಡಿಕೆಗೆ ತಿರುಗೇಟು ಕೊಟ್ಟರು.

"ಕರ್ನಾಟಕ ಎಂದು ಹೆಸರಿಟ್ಟು ಈ ನವೆಂಬರ್​ಗೆ 50 ವರ್ಷ ಆಗಲಿದೆ. ಈ ಬಾರಿ ಮಹತ್ವದ ಕಾರ್ಯಕ್ರಮ ನಡೆಸಲಾಗುವುದು. ದೇವರಾಜ್ ಅರಸ್ ಅವರ ಅವಧಿಯಲ್ಲಿ ಕರ್ನಾಟಕ ಎಂದು ಹೆಸರಿಟ್ಟಿದ್ದರು. ಈಗ ಸಿದ್ದರಾಮಯ್ಯನವರ ಅಧಿಕಾರವಧಿಯಲ್ಲಿ 50 ವರ್ಷ ತುಂಬಿದೆ. ಈ ಇಬ್ಬರು ನಾಯಕರು ದಲಿತರ, ಹಿಂದುಳಿದವರ ಬಗ್ಗೆ ಚಿಂತನೆ ಹೊಂದಿದವರು, ಇಡೀ ವರ್ಷ ಕಾರ್ಯಕ್ರಮ ಮಾಡಲು ಚಿಂತನೆ ಇದೆ. ನಾಳೆ ಬೆಳಗ್ಗೆ ಬೆಳಗಾವಿಯಲ್ಲಿ ಸಭೆಯನ್ನು ನಡೆಸಿ ರೂಪುರೇಷೆಗೆ ಸಿದ್ಧತೆ ಮಾಡಲಾಗುತ್ತದೆ" ಎಂದರು.

ಕಾವೇರಿ ಅಣೆಕಟ್ಟೆಯಿಂದ ತಮಿಳುನಾಡಿಗೆ ನೀರು ಹರಿಸುವುದರ ಬಗ್ಗೆ ಪ್ರತಿಕ್ರಿಯಿಸಿ, "ಈ ವಿಚಾರವಾಗಿ ಪ್ರತಿಭಟನೆ ಮಾಡಲು ಬಿಜೆಪಿಯವರಿಗೆ ಯಾವ ನೈತಿಕ ಹಕ್ಕೂ ಇಲ್ಲ. ಅದರ ಬಗ್ಗೆ ಕೂಲಂಕಶವಾಗಿ ಚರ್ಚೆ ಮಾಡಲು ಆ. 23ಕ್ಕೆ ಸರ್ವ ಪಕ್ಷಗಳ ಸಭೆಯನ್ನು ಸಿಎಂ ಸಿದ್ದರಾಮಯ್ಯ ಕರೆದಿದ್ದಾರೆ. ಅಲ್ಲಿ ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸುವ ಬಗ್ಗೆ ಚರ್ಚೆ ನಡೆಯುತ್ತದೆ" ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಕಾಂಗ್ರೆಸ್​ಗೆ ಆಪರೇಷನ್ ಹಸ್ತದ ಅವಶ್ಯಕತೆ ಇಲ್ಲ: ಶಾಸಕ ತನ್ವೀರ್ ಸೇಠ್

Last Updated : Aug 21, 2023, 5:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.