ದಾವಣಗೆರೆ: ಕಷ್ಟಪಡದೇ ಯಾರೂ ದೊಡ್ಡವರಾಗುವುದಿಲ್ಲ ಎಂಬ ಮಾತು ಗಟ್ಟಿಯಾಗಿಸಿಕೊಂಡು ಶಿಕ್ಷಣ ಕ್ಷೇತ್ರದಲ್ಲಿ ಅವಿರತವಾಗಿ ಕೆಲಸ ಮಾಡಿದ ಬಾಪೂಜಿ ವಿದ್ಯಾಸಂಸ್ಥೆಯ ನಿರ್ದೇಶಕ ಎಂ.ಜಿ.ಈಶ್ವರಪ್ಪ ಅವರಿಗೆ ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ಪ್ರಶಸ್ತಿ ಘೋಷಣೆಯಾದ ಬಳಿಕ ಈ ಬಗ್ಗೆ ಈಟಿವಿ ಭಾರತಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಇದು ಇಷ್ಟು ವರ್ಷ ಪ್ರಾಧ್ಯಾಪಕ ವೃತ್ತಿಯಲ್ಲಿ ಕೆಲಸ ಮಾಡಿದ್ದಕ್ಕೆ ಸಂದ ಗೌರವ. ನನ್ನ ಸಹಪಾಠಿಗಳು, ವಿದ್ಯಾರ್ಥಿ ಸಮೂಹದ ಹಾರೈಕೆಯಿಂದ ಇದು ಸಾಧ್ಯವಾಗಿದೆ ಎಂದು ಸಂತಸ ಹಂಚಿಕೊಂಡರು.
ಈಶ್ವರಪ್ಪರ ಪರಿಚಯ:
ಶಿವಮೊಗ್ಗ ಜಿಲ್ಲೆಯ ಹಾಡೋನಹಳ್ಳಿಯಲ್ಲಿ ಎಂ.ಜಿ. ಈಶ್ವರಪ್ಪ 1950ರ ಡಿಸೆಂಬರ್ 2 ರಂದು ಜನಿಸಿದರು. ತಮ್ಮ 13ನೇ ವಯಸ್ಸಿನಲ್ಲಿಯೇ ತಂದೆ, ತಾಯಿಯನ್ನು ಕಳೆದುಕೊಂಡಿದ್ದರು. ಇವರನ್ನು ಓದಿಸಿ, ಬೆಳೆಸಿದ್ದು ತಾತ ಸಣ್ಣವೀರಪ್ಪ. 5 ಕಿಲೋಮೀಟರ್ ಕಾಲ್ನಡಿಗೆಯಲ್ಲಿ ಶಾಲೆಗೆ ಹೋಗಿ ಬರಬೇಕಾದ ಅನಿವಾರ್ಯತೆ ಇವರಿಗಿತ್ತು. ತ್ತಿದ್ದರು. 1972ರಲ್ಲಿ ಕನ್ನಡದಲ್ಲಿ ಎಂಎ ಪೂರೈಸಿದ ಅವರು, 38 ವರ್ಷ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಶೈಕ್ಷಣಿಕ ಚಟುವಟಿಕೆಗಳಲ್ಲಿ ಆಸಕ್ತಿ, ಅಧ್ಯಾಪಕರ ಸಂಘ, ವಿದ್ಯಾರ್ಥಿ ಸಂಘಗಳ ಕೆಲಸ ಕಾರ್ಯಗಳ ಸಕ್ರಿಯ ನಿರ್ವಹಣೆ ಮಾಡಿ ಗಮನ ಸೆಳೆದಿದ್ದಾರೆ.
ಎನ್.ಎಸ್.ಎಸ್. ಅಧಿಕಾರಿಯಾಗಿ ಕಾಲೇಜಿನಲ್ಲಿ 11 ವರ್ಷ ಸೇವೆ ಸಲ್ಲಿಸಿರುವುದು ಇವರ ಮತ್ತೊಂದು ಹೆಗ್ಗಳಿಕೆ. ಗ್ರಾಮೀಣ ಜನರ ಜೀವನದ ಸಮಸ್ಯೆಗಳ ಆಳ ಪರಿಚಯಿಸಿದ ಕೀರ್ತಿಯೂ ಇವರಿಗಿದೆ. ಕರ್ನಾಟಕ ಜನಪದ ಅಕಾಡೆಮಿ ಸದಸ್ಯರಾಗಿ, ಹಂಪಿ ಕನ್ನಡ ವಿವಿ ಸಿಂಡಿಕೇಟ್ ಸದಸ್ಯರಾಗಿ, ಕುವೆಂಪು ವಿವಿಯ ಶಿಕ್ಷಣ ಮಂಡಳಿ ಸದಸ್ಯರಾಗಿ, ಪುಣೆಯ ಇಂಡಿಯನ್ ಕಾಲೇಜಿನಲ್ಲಿ ತರಬೇತುದಾರ ಪ್ರಿನ್ಸಿಪಾಲ್ ಆಗಿಯೂ ಇವರು ಕೆಲಸ ನಿರ್ವಹಿಸಿದ್ದಾರೆ.
ನಾಟಕ ಅಕಾಡೆಮಿಯ ಅಫಿಲಿಯೇಷನ್ ಪಡೆದಿರುವ ದಾವಣಗೆರೆಯ ಪ್ರತಿಷ್ಠಿತ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಸಂಸ್ಥೆಯಾದ ಪ್ರತಿಮಾಸಭಾದ ಕಾರ್ಯದರ್ಶಿ, ಉಪಾಧ್ಯಕ್ಷ, ಅಧ್ಯಕ್ಷರಾಗಿ 25 ವರ್ಷಗಳಿಂದ ರಂಗಭೂಮಿ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮ್ಯಾಸಬೇಡರು, ಬೇಸಾಯ ಪದ್ಧತಿ, ನಮ್ಮ ಬೇಸಾಯ, ಶತಮಾನದ ದಾವಣಗೆರೆ ಸೇರಿದಂತೆ 18 ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಗುಂಡ್ಮಿ ಜಾನಪದ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.