ETV Bharat / state

ಬೆಣ್ಣೆಯಂತೆ ಕರಗಿದ ಬೆಣ್ಣೆನಗರಿ ಹೋಟೆಲ್, ರೆಸ್ಟೋರೆಂಟ್ ವ್ಯಾಪಾರ ವಹಿವಾಟು

author img

By

Published : Nov 10, 2020, 2:11 PM IST

ಖಾರ, ಮಂಡಕ್ಕಿ, ಮೆಣಸಿನಕಾಯಿ ಬೋಂಡಾ ಸೇರಿದಂತೆ ಬಹುತೇಕ ಬೀದಿ ವ್ಯಾಪಾರಿಗಳು ಬದುಕು ಕಂಗೆಟ್ಟು ಹೋಗಿದೆ. ಶೇ.60ರಷ್ಟು ಮಂದಿ ವ್ಯಾಪಾರ ಇಲ್ಲದೇ ಅಂಗಡಿಗಳನ್ನು ತೆರೆಯಲು ಮುಂದಾಗುತ್ತಿಲ್ಲ. ಅಂಗಡಿ ತೆರೆದವರಿಗೆ‌ ವ್ಯಾಪಾರ ಅಷ್ಟಾಗಿಲ್ಲ.

lose in hotel and restaurant business
ಹೋಟೆಲ್, ರೆಸ್ಟೋರೆಂಟ್ ವ್ಯಾಪಾರ ವಹಿವಾಟು ಕುಸಿತ

ದಾವಣಗೆರೆ: ದಾವಣಗೆರೆ ಹೋಟೆಲ್​​​ ಉದ್ಯಮದಲ್ಲಿ ಮುಂಚೂಣಿಯಲ್ಲಿರುವ ಜಿಲ್ಲೆ. ಆದರೀಗ ಹೋಟೆಲ್​​, ರೆಸ್ಟೋರೆಂಟ್ ವ್ಯಾಪಾರ - ವಹಿವಾಟು ಸಂಪೂರ್ಣವಾಗಿ ನೆಲಕಚ್ಚಿದೆ. ಇನ್ನು ಕೆಲವು ಮುಚ್ಚುವ ಹಂತಕ್ಕೆ ತಲುಪಿವೆ.

ಲಾಕ್​​ಡೌನ್​​ನಿಂದ ಬಂದ್​ ಆಗಿದ್ದ ಹೋಟೆಲ್, ರೆಸ್ಟೋರೆಂಟ್​​​ಗಳು ಅನ್​​ಲಾಕ್​ ನಂತರ ಗ್ರಾಹಕರಿಗೆ ಮುಕ್ತವಾಗಿವೆ. ಕೊರೊನಾ ಭೀತಿಯಿಂದ ಜನರು‌ ಹೋಟೆಲ್​​ಗಳತ್ತ ಹೆಜ್ಜೆ ಹಾಕುತ್ತಿಲ್ಲ. ವ್ಯಾಪಾರ - ವಹಿವಾಟು ಇಲ್ಲದೆ ಭಾರಿ ನಷ್ಟ ಅನುಭವಿಸಿದ್ದ ಮಾಲೀಕರು, ಅನ್‌ಲಾಕ್‌ ಬಳಿಕ ಮತ್ತೆ ಚೇತರಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ.

ಬೆಣ್ಣೆದೋಸೆ ವ್ಯಾಪಾರ ಪೂರ್ತಿ ಡಲ್: ದಾವಣಗೆರೆ ಬೆಣ್ಣೆದೋಸೆಗೆ ಹೆಸರುವಾಸಿ. ಈಗದನ್ನು ಸೇವಿಸುವವರೇ ಕಡಿಮೆಯಾಗಿದ್ದಾರೆ. ಕೊರೊನಾ ಹಿನ್ನೆಲೆ ಗ್ರಾಮೀಣ ಭಾಗದ ಜನರು ನಗರದತ್ತ ಮುಖ ಮಾಡುತ್ತಿಲ್ಲ.‌ ಸುಮಾರು 50 - 60 ಬೆಣ್ಣೆದೋಸೆ ಹೋಟೆಲ್​​ಗಳಿದ್ದು, ವ್ಯಾಪಾರ ಇಲ್ಲದೇ ನಷ್ಟ ತೀವ್ರ ಅನುಭವಿಸಿವೆ. ಕಾರ್ಮಿಕರು ಹೋಟೆಲ್​​ ಊಟಕ್ಕಿಂತ ಮನೆಯ ಊಟವನ್ನೇ ಬುತ್ತಿ ತೆಗೆದುಕೊಂಡು ಹೋಗುತ್ತಿದ್ದಾರೆ. ನಗರಕ್ಕೆ ಬರುವ ಎಷ್ಟೋ ಮಂದಿಗೆ ಹೋಟೆಲ್​​ ಊಟ ಬೇಡವೆಂದೇ ನಿರ್ಧರಿಸಿದ್ದಾರೆ. ಆರ್ಥಿಕ ಸಂಕಷ್ಟಕ್ಕೆ ಒಳಗಾದರೂ ಉಪಾಹಾರದ ಖರ್ಚಾದರೂ ಉಳಿಯುತ್ತದೆ ಎಂಬ ಭಾವನೆ ಅವರಲ್ಲಿದೆ.

ಹೋಟೆಲ್​ ವ್ಯಾಪಾರ ವಹಿವಾಟು ಕುಸಿತ

ಈ ಕಾರಣಗಳಿಂದ ಹೆಚ್ಚಿನ ಹೋಟೆಲ್​​ ಮಾಲೀಕರು ಬಂದ್ ಮಾಡುವತ್ತ ಚಿತ್ತ ನೆಟ್ಟಿದ್ದಾರೆ. ಮಾಲೀಕರಿಗೆ ಬಾಡಿಗೆ, ಕಾರ್ಮಿಕರ ವೇತನ, ವಿದ್ಯುತ್​ ಬಿಲ್​ ಸೇರಿದಂತೆ ಇತರ ಖರ್ಚುಗಳು ಜಾಸ್ತಿಯಾಗುತ್ತಿವೆ. ವ್ಯಾಪಾರವಾದರೂ ಆದರೆ, ಹೇಗೋ ಸಂಬಾಳಿಸಿಕೊಂಡು ಹೋಗಬಹುದು. ಇಲ್ಲದಿದ್ದರೆ ಹೇಗೆ ಎಂಬುದು ಲೆಕ್ಕಾಚಾರ ಹೋಟೆಲ್​​ ಹಾಗೂ ರೆಸ್ಟೋರೆಂಟ್ ಮಾಲೀಕರದ್ದು.

ಟೈಲರ್​​​ಗಳ ಬದುಕು ಬೀದಿಗೆ: ತಿಂಗಳಿಗೆ 15 - 20 ಸಾವಿರ ದುಡಿಯುತ್ತಿದ್ದ ಟೈಲರ್​​ಗಳು ಈಗ 7 ಸಾವಿರ ರೂಪಾಯಿ ಸಂಪಾದನೆಗೆ ಇಳಿದಿದ್ದಾರೆ. 30ರಿಂದ 40 ಜೊತೆ ಪ್ಯಾಂಟು, ಶರ್ಟ್ ಹೊಲಿಯುತ್ತಿದ್ದೆವು. ಈಗ ಅದರ ಸಂಖ್ಯೆ 15ಕ್ಕೆ ಇಳಿದಿದೆ. ಕೊರೊನಾ ಆರ್ಥಿಕ ಹೊಡೆತ ಕೊಟ್ಟರೆ, ವರುಣ ಗಾಯದ ಮೇಲೆ ಮತ್ತೆ ಬರೆ ಎಳೆಯುತ್ತಿದ್ದಾನೆ ಎನ್ನುತ್ತಾರೆ ಟೈಲರ್​​​ಗಳು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.