ETV Bharat / state

Art gallery: ಬೆಣ್ಣೆ ನಗರಿಯಲ್ಲಿ ವಿದ್ಯಾರ್ಥಿಗಳಿಂದ ಅರಳಿತು ಕಲಾಲೋಕ.. ಕಣ್ಮನ ಸೆಳೆಯುವ ಚಿತ್ರಕಲಾ ಪ್ರದರ್ಶನ

author img

By ETV Bharat Karnataka Team

Published : Sep 13, 2023, 7:08 PM IST

Updated : Sep 13, 2023, 7:14 PM IST

ದಾವಣಗೆರೆಯ ದೃಶ್ಯಕಲಾ ವಿದ್ಯಾಲಯದಲ್ಲಿ ಚಿತ್ರೋತ್ಸವ ಆಯೋಜನೆ ಮಾಡಲಾಗಿದೆ. ಈ ಚಿತ್ರಕಲಾ ಪ್ರದರ್ಶನದಲ್ಲಿ ವಿದ್ಯಾರ್ಥಿಗಳ ಕಲಾಕುಂಚದಲ್ಲಿ ಅರಳಿದ ಚಿತ್ರಗಳು ಎಲ್ಲರ ಗಮನ ಸೆಳೆಯುತ್ತಿವೆ.

art-exhibition-in-davangere-visual-arts-college
ದಾವಣಗೆರೆಯಲ್ಲಿ ವಿದ್ಯಾರ್ಥಿಗಳಿಂದ ಅರಳಿದ ಕಲಾ ಲೋಕ: ಕಣ್ಮನ ಸೆಳೆಯುತ್ತಿದೆ ಚಿತ್ರಕಲಾ ಪ್ರದರ್ಶನ

ದಾವಣಗೆರೆಯ ದೃಶ್ಯಕಲಾ ವಿದ್ಯಾಲಯದಲ್ಲಿ ಚಿತ್ರೋತ್ಸವ ಆಯೋಜನೆ

ದಾವಣಗೆರೆ: ಬೆಣ್ಣೆನಗರಿಯ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಬಣ್ಣದ ಲೋಕವೇ ಅನಾವರಣಗೊಂಡಿದೆ. ವಿದ್ಯಾರ್ಥಿಗಳ ಕಲಾಕುಂಚದಲ್ಲಿ ಅರಳಿದ ಚಿತ್ರಕಲೆಗಳನ್ನು ಒಂದೇ ಸೂರಿನಡಿ ಪ್ರದರ್ಶನಕ್ಕಿಡಲಾಗಿದೆ. ಚಿತ್ರಗಳ ಮೂಲಕವೇ ಬದುಕು, ಬವಣೆ, ವಿಡಂಬನೆ ಸೇರಿದಂತೆ ಜನರಿಗೆ ಜಾಗೃತಿ ಮೂಡಿಸುವ ಚಿತ್ರಗಳು ಇಲ್ಲಿ ಕಾಣಸಿಗುತ್ತಿವೆ. ಹೌದು, ದಾವಣಗೆರೆ ನಗರದ ದೃಶ್ಯಕಲಾ ವಿದ್ಯಾಲಯದಲ್ಲಿ ಚಿತ್ರೋತ್ಸವ ಆಯೋಜನೆ ಮಾಡಲಾಗಿದೆ.

ಚಿತ್ರಕಲಾ ಪ್ರದರ್ಶನದಲ್ಲಿ ವೈವಿಧ್ಯಮಯ ಪ್ರಪಂಚ, ಪರಿಸರ ಕಾಳಜಿ, ಜೀವನ ಮೌಲ್ಯ, ವಿಡಂಬನೆ ತಿಳಿಸುವ ಚಿತ್ರಗಳು ಸೇರಿದಂತೆ ವೈವಿಧ್ಯಮಯ ಚಿತ್ರಕಲೆಗಳು ದಾವಣಗೆರೆಯ ದೃಶ್ಯಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಕೈಯಲ್ಲಿ ಅರಳಿವೆ. ಡಿಜಿಟಲ್‌ ಯುಗದಲ್ಲಿ ಕೈ ಬರವಣಿಗೆ ಚಿತ್ರಗಳನ್ನು ಉಳಿಸಿ ಬೆಳೆಸಲು ಈ ವಿದ್ಯಾಲಯ ಶ್ರಮಿಸುತ್ತಿದೆ. ಪ್ರತಿ ವರ್ಷ ಚಿತ್ರ ಪ್ರದರ್ಶನ ನಡೆಸುತ್ತಿದೆ. ಅದರಂತೆ ಈ ವರ್ಷವೂ ಸಹ ಕಾಲೇಜಿನಲ್ಲಿ ಚಿತ್ರೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸುಮಾರು 70ಕ್ಕೂ ಹೆಚ್ಚು ಚಿತ್ರಗಳನ್ನು ಇಲ್ಲಿ ಪ್ರದರ್ಶನಕ್ಕಿಡಲಾಗಿದೆ. ಎಲ್ಲಾ ಚಿತ್ರಗಳನ್ನೂ ಕಾಲೇಜಿನ ವಿದ್ಯಾರ್ಥಿಗಳು ಕೈ ಬರವಣಿಗೆಯಿಂದ ಬಿಡಿಸಿ ಬಣ್ಣ ತುಂಬಿರುವುದು ವಿಶೇಷ. ಪ್ರತಿ ಚಿತ್ರವು ನೋಡುಗರ ಮನಸೆಳೆಯುವಂತಿದೆ. ಯಾಕಂದ್ರೆ ಅದ್ಬುತವಾದ ಚಿತ್ರಗಳು ವಿದ್ಯಾರ್ಥಿಗಳ ಕಲಾಕುಂಚದಲ್ಲಿ ಮೂಡಿಬಂದಿವೆ.

ಇದರಿಂದ ಬೆಣ್ಣೆನಗರಿಯಲ್ಲಿ ಬೆರಗು ಮೂಡಿಸುವ ಬಣ್ಣದ ಲೋಕ ನಿರ್ಮಾಣ ಆಗಿದೆ. ಇಲ್ಲಿ ಸಾಂಪ್ರದಾಯಿಕ ಚಿತ್ರಕಲೆ, ಸಮಕಾಲೀನ ಚಿತ್ರಶೈಲಿ, ತೈಲವರ್ಣ, ಕೋಲೇಜ್, ಲಿಥೋಗ್ರಾಫ್, ಡೂಡಲ್, ಉಬ್ಬು ಚಿತ್ರಗಳು, ಗ್ರಾಫಿಕ್, ಛಾಯಾಚಿತ್ರ, ಪೆನ್ಸಿಲ್ ಚಿತ್ರ ಸೇರಿದಂತೆ ತರಹೇವಾರಿ ಚಿತ್ರಗಳು ಪ್ರದರ್ಶನಗೊಂಡವು. ಜೀವನ ಅನುಭವದಿಂದ ವ್ಯಕ್ತವಾಗುವ ಚಿತ್ರಕೃತಿಗಳನ್ನು ನೋಡುವುದೇ ಉಲ್ಲಾಸಮಯವಾಗಿತ್ತು. ಗಿಡ ಮರ ಬೆಳೆಸಿ ಉಳಿಸಿ, ಜನಸಂಖ್ಯಾ ನಿಯಂತ್ರಣ, ಪ್ರಾಣಿ ಸಂಕುಲ ಉಳಿಸುವ ಮಾರ್ಗ, ರೈತರ ಕೃಷಿ ಮಾರುಕಟ್ಟೆ, ಚಂದ್ರಯಾನ-3 ಮಾದರಿ ಪ್ರದರ್ಶನ ಎಲ್ಲರ ಗಮನ ಸೆಳೆದವು.

ವಿದ್ಯಾರ್ಥಿನಿ ಮೊನಿಕಾ ಮಾತನಾಡಿ, ನಮ್ಮ ಕಾಲೇಜಿನಲ್ಲಿ ಚಿತ್ರೋತ್ಸವ ನಡೆಯುತ್ತಿದೆ. ಈ ಬಾರಿ ಚಂದ್ರಯಾನ-3 ಚಿತ್ರಗಳನ್ನು ಅಚ್ಚುಕಟ್ಟಾಗಿ ಚಿತ್ರಿಸಲಾಗಿದೆ. ಇಲ್ಲಿ ಎಲ್ಲಾ ವಿದ್ಯಾರ್ಥಿಗಳು ಒಂದೊಂದು ವಿಷಯವನ್ನು ಆಧಾರವಾಗಿಟ್ಟುಕೊಂಡು ಚಿತ್ರಗಳನ್ನು ಬಿಡಿಸಿದ್ದೇವೆ. ಎಲ್ಲಾ ಪೈಂಟಿಂಗ್​ಗಳನ್ನು ಕೈಯಿಂದಲೇ ಬಿಡಿಸಲಾಗಿದೆ. ಚಿತ್ರೋತ್ಸವದಲ್ಲಿ ಕ್ಯಾನ್ವಾಸ್ ಪೇಟಿಂಗ್, ಅಯಿಲ್ ಕಲರ್, ವಾಟರ್ ಕಲರ್ ಸೇರಿದಂತೆ ಎಲ್ಲಿ ರೀತಿಯ ಪೈಂಟಿಂಗ್​ಗಳು ಇಲ್ಲಿವೆ. ಕಾಲೇಜಿನ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಈ ಚಿತ್ರಕಲೆಗಳನ್ನು ಅರಳಿಸಿದ್ದಾರೆ ಎಂದು ತಿಳಿಸಿದರು.

ವಿದ್ಯಾರ್ಥಿ ಅರುಣ್ ಮಾತನಾಡಿ, ದೃಶ್ಯ ಕಲಾ ಮಹಾವಿದ್ಯಾಲಯದಲ್ಲಿ ಮೂರು ದಿನಗಳ ಕಾಲ ಚಿತ್ರೋತ್ಸವವನ್ನು ಆಚರಿಸುತ್ತಿದ್ದೇವೆ. ವಿವಿಧ ರೀತಿಯ ಚಿತ್ರಗಳನ್ನು ಇಲ್ಲಿ ಪ್ರದರ್ಶನಕ್ಕಿಡಲಾಗಿದೆ. ಇಲ್ಲಿ ಪ್ರದರ್ಶಗೊಳ್ಳುತ್ತಿರುವ ಚಿತ್ರಗಳನ್ನು ಮಹಾವಿದ್ಯಾಲಯದಲ್ಲಿ ಈಗ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳೇ ಬಿಡಿಸಿದ್ದಾರೆ. ಹಳೆ ವಿದ್ಯಾರ್ಥಿಗಳು ಬಿಡಿಸಿರುವ ಚಿತ್ರಗಳನ್ನು ಗ್ಯಾಲರಿಯಲ್ಲಿ ಇಡಲಾಗಿದೆ. ಎಲ್ಲಾ ರೀತಿಯ ಚಿತ್ರಕಲೆಗಳು ನೋಡುವುದಕ್ಕೆ ಸಿಗುತ್ತವೆ ಎಂದು ಹೇಳಿದರು.

ಇದನ್ನೂ ಓದಿ: ದಾವಣಗೆರೆ: ಮಾರುಕಟ್ಟೆಯಲ್ಲಿ ಮಹಾರಾಷ್ಟ್ರದ ಈರುಳ್ಳಿಯದ್ದೇ ದರ್ಬಾರ್

Last Updated : Sep 13, 2023, 7:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.