ಸುಳ್ಯ: ತೋಟದ ಮನೆಯೊಂದರಿಂದ ಕದ್ದಿದ್ದ 10 ಗೋಣಿ ಕಾಳು ಮೆಣಸನ್ನು ಕದ್ದು ಸಾಗಿಸುತ್ತಿದ್ದ ವೇಳೆ ಕಳ್ಳರು ಬೆಳ್ಳಾರೆ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡ ಘಟನೆ ಸುಳ್ಯ ತಾಲೂಕಿನ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
![ಕಾಳು ಮೆಣಸಿಗೆ ಕಣ್ಣು ಹಾಕಿದ ಕಳ್ಳರು](https://etvbharatimages.akamaized.net/etvbharat/prod-images/kn-dk-02-theft-brk-pho-kac10008_05072022205722_0507f_1657034842_639.jpg)
ಸುಳ್ಯ ತಾಲೂಕಿನ ಕಳಂಜಿ ಮನೆ ನಿವಾಸಿ ಮಂಜು, ಕೊಡಿಯಬೈಲು ಮನೆ ನಿವಾಸಿ ಪ್ರವೀಣ, ಜಾಲ್ಸೂರ ಗ್ರಾಮದ ಬರ್ಪೆಡ್ಕ್ ಮನೆ ನಿವಾಸಿ ಪವನ್ ಕುಮಾರ್ ಹಾಗೂ ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಅಬ್ದುಲ್ ಬಾಶೀತ್ ಬಂಧಿತರು. ಈ ಕೃತ್ಯದಲ್ಲಿ ಒಟ್ಟು ಐವರು ಭಾಗಿಯಾಗಿದ್ದು, ಇನ್ನೊಬ್ಬ ಅಪ್ರಾಪ್ತ ಬಾಲಕ ಎನ್ನಲಾಗಿದೆ.
ಕೊಳ್ತಿಗೆ ಗ್ರಾಮದ ಕುದ್ಕುಳಿ ಎಂಬಲ್ಲಿರುವ ಮಹಮ್ಮದ್ ಶಾಫಿ ಎಂಬುವರ ತೋಟದಲ್ಲಿರುವ ಗೋದಾಮಿನಿಂದ ಸುಮಾರು 1,18,750 ರೂಪಾಯಿ ಮೌಲ್ಯದ 10 ಗೋಣಿ ಜೀಲದಲ್ಲಿ ತುಂಬಿಸಿಟ್ಟಿದ್ದ 250 ಕೆ.ಜಿ ಕಾಳು ಮೆಣಸನ್ನು ಜೂ. 15 ರಿಂದ ಜು 3ರ ಮಧ್ಯದ ಸಮಯದಲ್ಲಿ ಕಳ್ಳತನ ಮಾಡಲಾಗಿತ್ತು. ಈ ಬಗ್ಗೆ ಮಹಮ್ಮದ್ ಶಾಫಿ ಅವರ ತೋಟ ನೋಡಿಕೊಳ್ಳುತ್ತಿದ್ದ ಆದಂ ಕುಂಞಿ ಎಂಬವರು ಬೆಳ್ಳಾರೆ ಪೊಲೀಸ್ ಠಾಣೆಗೆ ಜು.3 ರಂದು ದೂರು ನೀಡಿದ್ದರು.
ಐಪಿಸಿ ಕಲಂ : 454, 457, 380 ಪ್ರಕರಣ ದಾಖಲಾಗಿ ಬೆಳ್ಳಾರೆ ಪೊಲೀಸರು ತನಿಖೆ ನಡೆಸುತ್ತಿದರು. ಬೆಳ್ಳಾರೆ ಠಾಣಾ ಪೊಲೀಸರು ಉಪನಿರೀಕ್ಷಕ ರುಕ್ಮ ನಾಯ್ಕ್ ಪ್ರಕರಣದ ತನಿಖೆಯನ್ನು ನಡೆಸುವ ವೇಳೆ ದೊರೆತ ಮಾಹಿತಿ ಆಧಾರದಲ್ಲಿ ಜು .4 ರಂದು ಅಡ್ಕಾರ್ ನಲ್ಲಿ ಕಾರೊಂದನ್ನು ತಡೆದು ಮಂಜು ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.
ಈತ ನೀಡಿದ ಮಾಹಿತಿಯಂತೆ ಇನ್ನೋರ್ವ ಆರೋಪಿ ಪವನ್ ಕುಮಾರ್ ಎಂಬಾತನ ಮನೆಯಲ್ಲಿ ಕಳವು ಮಾಡಿ ಬಚ್ಚಿಟ್ಟಿದ್ದ 10 ಗೋಣಿ ಕಾಳು ಮೆಣಸನ್ನು ಹಾಗೂ ಕೃತ್ಯಕ್ಕೆ ಬಳಸಿದ ಕಾರು ಸ್ವಾಧೀನ ಪಡಿಸಿಕೊಂಡಿದ್ದಾರೆ. ಆರೋಪಿಗಳಾದ ಮಂಜು ಬಿ, ಪ್ರವೀಣ, ಪವನ್ ಕುಮಾರ್, ಅಬ್ದುಲ್ ಬಾಶೀತ್ ಎಂಬುವರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ ಎಂದು ತಿಳಿದು ಬಂದಿದೆ.
ದಕ್ಷಿಣ ಕನ್ನಡ ಪೊಲೀಸ್ ಅಧೀಕ್ಷಕರಾದ ಶ್ರೀ ಸೋನಾವಣೆ ರಿಷಿಕೇಶ್, ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರಚಂದ್ರ ಹಾಗೂ ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಡಾ. ಗಾನಾ ಪಿ ಕುಮಾರ್ ಅವರ ಆದೇಶದಂತೆ ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಬೆಳ್ಳಾರೆ, ಠಾಣಾಧಿಕಾರಿ ರುಕ್ಮ ನಾಯ್ಕ್ ಹಾಗೂ ಸಿಬ್ಬಂದಿಗಳಾದ ಎಎಸ್ಐ ನಾರಾಯಣ, ಬಾಲಕೃಷ್ಣ, ನವೀನ್, ಸತೀಶ, ಮಂಜುನಾಥ, ಚಂದ್ರಶೇಖರ, ಪ್ರವೀಣ ಕಮಾರ್, ಶ್ರೀಶೈಲ, ಮಂಜುನಾಥ ಹೆಚ್. ಜೆ ಹಾಗೂ ವಾಹದ ಚಾಲಕರಾದ ಪುರಂದರ ಅವರು ಭಾಗವಹಿಸಿರುತ್ತಾರೆ ಹಾಗೂ ಜಿಲ್ಲಾ ಗಣಕಯಂತ್ರದ ದಿವಾಕರ ಹಾಗೂ ಸಂಪತ್ ಆರೋಪಿಗಳ ಪತ್ತೆಗೆ ಸಹಕರಿಸಿರುತ್ತಾರೆ.
ಓದಿ: ಮುಂದಿನ ಸಂಪುಟದಲ್ಲಿ ನೂತನ ಉದ್ಯೋಗ ನೀತಿ ಮಂಡಿಸಿ: ಅಧಿಕಾರಿಗಳಿಗೆ ಸಿಎಂ ಸೂಚನೆ