ETV Bharat / state

ಸಜೀಪಮೂಡದಲ್ಲಿ ಪುರುಷಾಮೃಗದ ಅಪರೂಪದ ಶಿಲ್ಪವುಳ್ಳ ಬಂಗರಸನ ಶಾಸನ

author img

By

Published : Sep 5, 2021, 7:00 PM IST

ಕ್ಷೇತ್ರಕಾರ್ಯ ಶೋಧನೆಯ ಸಂದರ್ಭದಲ್ಲಿ ಕಿಶನ್ ಕುಮಾರ್ ಮೂಡುಬೆಳ್ಳೆ ಹಾಗೂ ಸ್ಥಳೀಯರಾದ ಎಸ್ ಲಿಂಗಪ್ಪ ದೋಟ, ಕುಶೇಷ್ ಮತ್ತು ರಮೇಶ್ ಅನ್ನಪಾಡಿಯವರು ಸಹಕಾರ ನೀಡಿದ್ದಾರೆ. ಗ್ರಾನೈಟ್ (ಕಣ) ಶಿಲೆಯಲ್ಲಿ ಕೊರೆಯಲ್ಪಟ್ಟಿರುವ ಈ ಶಾಸನವು 138 ಸೆಂ.ಮೀ ಎತ್ತರ ಹಾಗೂ 76 ಸೆಂ.ಮೀ ಅಗಲವಿದೆ. ಕನ್ನಡ ಭಾಷೆಯಲ್ಲಿರುವ ಈ ಶಾಸನವು 17 ಸಾಲುಗಳನ್ನು ಹೊಂದಿದೆ..

Rare Bangarasana inscription
ಬಂಗರಸನ ಶಾಸನ

ಬಂಟ್ವಾಳ : ತಾಲೂಕಿನ ಸಜೀಪಮೂಡದಲ್ಲಿ ಪುರುಷಾಮೃಗದ ಅಪರೂಪದ ಶಿಲ್ಪವುಳ್ಳ ಬಂಗರಸನ ಶಾಸನವೊಂದನ್ನು ಪತ್ತೆ ಹಚ್ಚಲಾಗಿದೆ. ಅನ್ನಪಾಡಿ ಬಾಲಗಣಪತಿ ದೇವಾಲಯದ ಬಳಿಯಿರುವ ದಿ.ಮೋನಪ್ಪ ಪೂಜಾರಿಯವರ ತೋಟದಲ್ಲಿ ಶಾಸನ ಪತ್ತೆಯಾಗಿದೆ.

ಇದನ್ನು ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಡಾ.ತುಕಾರಾಮ ಪೂಜಾರಿ ಹಾಗೂ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಯಶವಂತ ದೇರಾಜೆ ಪತ್ತೆ ಮಾಡಿದ್ದಾರೆ.

ಉಡುಪಿ ಪ್ರಾಚ್ಯಸಂಚಯ ಸಂಶೋಧನಾ ಕೇಂದ್ರ (ಎನ್​​ಟಿಸಿ-ಎಒಎಂನ ಅಂಗ ಸಂಸ್ಥೆ) ಅಧ್ಯಯನ ನಿರ್ದೇಶಕರಾದ ಪ್ರೊ.ಎಸ್ ಎ ಕೃಷ್ಣಯ್ಯ ಮಾರ್ಗದರ್ಶನದಲ್ಲಿ ಈ ಶಾಸನವನ್ನು ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಓದಿ ಅರ್ಥೈಸಿದ್ದು, 15ನೇ ಶತಮಾನದ ಈ ಶಾಸನವು ಜೈನ ಮನೆತನದ ಬಂಗರಸರಿಗೆ ಸೇರಿದ್ದು ಎಂದು ತಿಳಿಸಿದ್ದಾರೆ.

ಕ್ಷೇತ್ರಕಾರ್ಯ ಶೋಧನೆಯ ಸಂದರ್ಭದಲ್ಲಿ ಕಿಶನ್ ಕುಮಾರ್ ಮೂಡುಬೆಳ್ಳೆ ಹಾಗೂ ಸ್ಥಳೀಯರಾದ ಎಸ್ ಲಿಂಗಪ್ಪ ದೋಟ, ಕುಶೇಷ್ ಮತ್ತು ರಮೇಶ್ ಅನ್ನಪಾಡಿಯವರು ಸಹಕಾರ ನೀಡಿದ್ದಾರೆ. ಗ್ರಾನೈಟ್ (ಕಣ) ಶಿಲೆಯಲ್ಲಿ ಕೊರೆಯಲ್ಪಟ್ಟಿರುವ ಈ ಶಾಸನವು 138 ಸೆಂ.ಮೀ ಎತ್ತರ ಹಾಗೂ 76 ಸೆಂ.ಮೀ ಅಗಲವಿದೆ. ಕನ್ನಡ ಭಾಷೆಯಲ್ಲಿರುವ ಈ ಶಾಸನವು 17 ಸಾಲುಗಳನ್ನು ಹೊಂದಿದೆ.

ಶಾಸನದ ಮೇಲ್ಭಾಗದಲ್ಲಿ ಸೂರ್ಯ-ಚಂದ್ರರಿದ್ದು, ಮಧ್ಯ ಭಾಗದಲ್ಲಿ ಪ್ರಭಾವಳಿ ಸಹಿತ ಶಿವಲಿಂಗ ಹಾಗೂ ಇದರ ಬಲ ಭಾಗದಲ್ಲಿ ಶಿವಲಿಂಗವನ್ನು ಪೂಜಿಸುತ್ತಿರುವ ಪುರುಷಾಮೃಗ ಮತ್ತು ಎಡ ಭಾಗದಲ್ಲಿ ನಂದಿಯ ಉಬ್ಬು ಕೆತ್ತನೆ ಇದೆ. ಪ್ರಾಯಶಃ ಈವರೆಗೆ ಲಭ್ಯವಾಗಿರುವ ಕರ್ನಾಟಕದ ಶಾಸನಗಳಲ್ಲಿ ಪುರುಷಾಮೃಗದ ಕೆತ್ತನೆ ಇದೇ ಮೊದಲು ಎಂದು ಸಂಶೋಧನಾರ್ಥಿ ಅಭಿಪ್ರಾಯ ಪಟ್ಟಿರುತ್ತಾರೆ.

ಶಾಸನದಲ್ಲಿ ಜಯಾಭ್ಯುದಯ ಶಾಲಿವಾಹನ ಶಕವರುಷ 1405 ನೇ ಶೋಭಕೃತ ಸಂವತ್ಸರದ ಜೇಷ್ಠ ಶುದ್ಧ 1 ಬುಧವಾರ ಎಂದು ಉಲ್ಲೇಖವಿದ್ದು, ಇದು ಕ್ರಿ.ಶ. 1483 ಮೇ 17 ಬುಧವಾರಕ್ಕೆ ಸರಿ ಹೊಂದುತ್ತದೆ.

ಬಂಗ ದೊರೆ ಪಾಂಡ್ಯಪ್ಪರಸನ ಅಳಿಯನಾದ ಲಕ್ಷ್ಮಪ್ಪರಸ ಒಡೆಯನು ಯಿಚಿಲದ ಮಠಕ್ಕೆ ಚಂದ್ರಗ್ರಹಣದ ಸಮಯದಲ್ಲಿ ಬರೆಸಿ ಕೊಟ್ಟಂತಹ ದಾನ ಶಾಸನ ಇದಾಗಿದ್ದು, ಈ ಮಠಕ್ಕೆ ಅಕ್ಕಿಯ ನೈವೇದ್ಯಕ್ಕೆ 33 ಕಾಟಿ ಗದ್ಯಾಣಗಳನ್ನು ಧಾರಾ ಪೂರ್ವಕವಾಗಿ ಕೊಟ್ಟಂತಹ ದಾನವನ್ನು ಈ ಶಾಸನವು ಉಲ್ಲೇಖಿಸುತ್ತದೆ. ಶಾಸನದ ಕೊನೆಯಲ್ಲಿ ಶಾಪಾಶಯ ವಾಕ್ಯವನ್ನು ಕಾಣಬಹುದು ಎಂದರು.

ಓದಿ: ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ರಾಜ್ಯ ಸರ್ಕಾರ ಅನುಮತಿ: ಆದ್ರೆ, ಕಂಡಿಷನ್ಸ್‌ ಅಪ್ಲೈ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.