ETV Bharat / state

ಜನವರಿ 22ರ ಅಭಿಜಿನ್ ಮುಹೂರ್ತದಲ್ಲಿ ರಾಮದೇವರ ಪ್ರಾಣಪ್ರತಿಷ್ಠೆ: ಪೇಜಾವರ ಶ್ರೀ

author img

By ETV Bharat Karnataka Team

Published : Nov 17, 2023, 10:39 AM IST

Updated : Nov 17, 2023, 11:34 AM IST

Prana Pratistha of Lord Sri Rama: ರಾಮಭಕ್ತರ ಕನಸಿನ ರಾಮಮಂದಿರದಲ್ಲಿ ಶ್ರೀರಾಮದೇವರ ಪ್ರಾಣಪ್ರತಿಷ್ಠೆ ಸಮಯ, ಸಂದರ್ಭದ ಕುರಿತು ಪೇಜಾವರ ಮಠಾಧೀಶರಾದ ವಿಶ್ವಪ್ರಸನ್ನ ಸ್ವಾಮೀಜಿ ಮಾಹಿತಿ ನೀಡಿದ್ದಾರೆ.

vishwa prasanna swamiji
ಪೇಜಾವರ ಮಠಾಧೀಶ ವಿಶ್ವ ಪ್ರಸನ್ನ ಸ್ವಾಮೀಜಿ

ಪೇಜಾವರ ಮಠಾಧೀಶರಾದ ವಿಶ್ವಪ್ರಸನ್ನ ಸ್ವಾಮೀಜಿಯಿಂದ ಮಾಹಿತಿ

ಮಂಗಳೂರು: ಅಯೋಧ್ಯೆಯ ರಾಮಮಂದಿರದಲ್ಲಿ ಮಕರಸಂಕ್ರಾಂತಿ ಮುಗಿಯುತ್ತಿದ್ದಂತೆ ಉತ್ತರಾಯಣದ ಪರ್ವಕಾಲದಲ್ಲಿ ಶ್ರೀರಾಮದೇವರ ಪ್ರಾಣ ಪ್ರತಿಷ್ಠೆ ನಡೆಯಲಿದೆ ಎಂದು ಪೇಜಾವರ ಮಠಾಧೀಶ ವಿಶ್ವಪ್ರಸನ್ನ ಸ್ವಾಮೀಜಿ ತಿಳಿಸಿದರು. ಮಂದಿರ ನಿರ್ಮಾಣ ಸಮಿತಿಯ ಟ್ರಸ್ಟಿಗಳಾಗಿರುವ ಸ್ವಾಮೀಜಿ, ಜನವರಿ 22ರ ಅಭಿಜಿನ್ ಮುಹೂರ್ತದಲ್ಲಿ ಶ್ರೀರಾಮದೇವರ ಪ್ರಾಣ ಪ್ರತಿಷ್ಠೆ ನಡೆಯಲಿದೆ. ಪ್ರಧಾನಿ ಮೋದಿ ಮಂದಿರದ ಉದ್ಘಾಟನೆ ಮಾಡಲಿದ್ದಾರೆ ಎಂದರು.

ರಾಮದೇವರ ಪ್ರತಿಷ್ಠಾಪನೆಯ ದಿನ ಎಲ್ಲರಿಗೂ ಅವಕಾಶ ಇರುವುದಿಲ್ಲ. ಹಾಗಾಗಿ ತಮ್ಮದೇ ಊರಿನ ದೇವಮಂದಿರಗಳಲ್ಲಿ ಅಳವಡಿಸಿರುವ ಬೃಹತ್ ಪರದೆಯಲ್ಲಿ ದೃಶ್ಯ ವೀಕ್ಷಣೆ ಮಾಡಬೇಕು. ಬಳಿಕ ಪೂಜೆ, ಭಜನೆ ಪ್ರಸಾದ ವಿತರಣೆ ಮಾಡಬೇಕು. ರಾತ್ರಿ ಹೊತ್ತು 5 ಶತಮಾನಗಳ ದ್ಯೋತಕವಾಗಿ ಐದು ದೀಪಗಳನ್ನು ಬೆಳಗಬೇಕು. ಜನವರಿ 23ರಿಂದ ಮಾರ್ಚ್ 10ರವರೆಗೆ 48 ದಿನಗಳ ಕಾಲ ರಾಮಮಂದಿರದಲ್ಲಿ ಮಂಡಲ ಉತ್ಸವ ನಡೆಯುತ್ತದೆ ಎಂದು ತಿಳಿಸಿದರು.

ರಾಮಮಂದಿರದಲ್ಲಿ ಯಾವುದೇ ಸೇವಾ ರೂಪದ ಪಟ್ಟಿ ಇರುವುದಿಲ್ಲ. ನಾವು ರಾಮಂದಿರ ಮಾತ್ರವಲ್ಲ, ರಾಮರಾಜ್ಯದ ಕನಸು ಕಂಡವರು. ಆದ್ದರಿಂದ ರಾಮಭಕ್ತಿ ಬೇರೆಯಲ್ಲ, ದೇಶ ಭಕ್ತಿ ಬೇರೆಯಲ್ಲ.‌ ರಾಮ ಸೇವೆ ಮಾಡುವ ಇಚ್ಛೆಯುಳ್ಳವರು ಅಶಕ್ತರಿಗೆ ಸಹಾಯ ಮಾಡುವ ಮೂಲಕ, ತಾವು ಮಾಡುವ ಕೆಲಸದಲ್ಲಿಯೇ ಸೇವೆ ಮಾಡುವ ಮೂಲಕ ದೇಶಸೇವೆ ಮಾಡಬಹುದು. ಇದನ್ನೇ ರಾಮದೇವರ ಸೇವೆ ಎಂದು ಮಾಡಿ. ರಾಮಮಂದಿರಕ್ಕೆ ಬಂದಾಗ ಇದನ್ನೇ ಸೇವೆ ಎಂದು ರಾಮಾರ್ಪಣೆ ಮಾಡಿ ಎಂದು ಶ್ರೀಗಳು ಸಲಹೆ ನೀಡಿದರು.

ಹಿಂದೂ ಕಾರ್ಯಕರ್ತರ ಗಡಿಪಾರು ಒಪ್ಪುವಂಥದ್ದಲ್ಲ: ಹಿಂದೂ ಕಾರ್ಯಕರ್ತರ ಗಡಿಪಾರು ಒಪ್ಪುವಂಥ ಮಾತಲ್ಲ. ಇಂತಹ ಘಟನೆಗಳು ನಡೆಯಬಾರದು ಎಂದು ಸ್ವಾಮೀಜಿ ಹೇಳಿದ್ದಾರೆ‌. ಇಂಥ ವಿಚಾರಗಳು ನಡೆಯಲೇಬಾರದು. ಸರ್ಕಾರ ಎಲ್ಲರಿಗೂ ಸಂಬಂಧಪಟ್ಟದ್ದು. ಸರ್ಕಾರಕ್ಕೆ ಎಲ್ಲರೂ ಸಮಾನರು.‌ ಒಂದು ಗುಂಪನ್ನು ಟಾರ್ಗೆಟ್ ಮಾಡಿದರೆ ಅದು ಶೋಭೆ ತರುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ನೇಮಕ ವಿಚಾರವಾಗಿ ಪ್ರತಿಕ್ರಿಯಿಸಿ, ಸರ್ಕಾರ ಇರಬೇಕಾದರೆ ಪ್ರತಿಪಕ್ಷ ಪ್ರಬಲವಾಗಿರಬೇಕು. ನಾಯಕನಿಲ್ಲದೆ ಪ್ರತಿಪಕ್ಷ ಕುಂಠಿತವಾಗಿತ್ತು. ಆದರೆ ಇದೀಗ ಸಮರ್ಥ ನಾಯಕ ಬಂದಿದ್ದಾರೆ.‌ ರಾಜ್ಯದ ಅಭಿವೃದ್ಧಿಗೆ ಪೂರಕವಾಗಲಿ ಎಂದು ಹಾರೈಸುತ್ತೇನೆ ಎಂದರು.

ಗೋಪ್ರಜ್ಞೆ ಜಾಗೃತವಾಗಲಿ: ಹಿಂದೆ ಮನೆಮನೆಗಳಲ್ಲಿ ಗೋಶಾಲೆಯಿದ್ದರೆ, ಈಗ ಒಂದೆರಡು ನೋಡಲು ಸಿಗೋದು ಕಷ್ಟ‌. ಹೀಗಿರುವಾಗ ಕದ್ರಿಯ ಮಂಜುಪ್ರಾಸಾದದಲ್ಲಿ ಗೋವುಗಳನ್ನು ಸಾಕುತ್ತಿದ್ದಾರೆ. ಈ ಮೂಲಕ ಪರಿಸರದ ಜನತೆಯಲ್ಲಿ ಗೋಪ್ರಜ್ಞೆ ಜಾಗೃತವಾಗಬೇಕು. ಇನ್ನಷ್ಟು ಮನೆಗಳಲ್ಲಿ ಗೋವುಗಳ ಪೋಷಣೆ ನಿರಂತರವಾಗಿರಲಿ ಎಂದರು.

ಗೋಪೂಜಾ ಉತ್ಸವದಲ್ಲಿ ಭಾಗವಹಿಸಿ ಮಾತನಾಡಿ ಶ್ರೀಗಳು, ಹೆತ್ತವರನ್ನು ದೇವರಂತೆ ಪೂಜಿಸಬೇಕು. ಮನೆಯ ಹೊರಗೆ ಕೊಟ್ಟಿಗೆಯಲ್ಲಿರುವ ಗೋವುಗಳು ನಮ್ಮ ತಾಯಿಯಂತೆ. ಆಕಳ ಹಾಲು, ಮೊಸರು, ಮಜ್ಜಿಗೆ, ತುಪ್ಪವನ್ನುಂಡು ಬದುಕುವ ನಮಗೆ ಅವುಗಳ ಬಗ್ಗೆ ಪೂಜನೀಯ ಭಾವವಿರಬೇಕು ಎಂದು ಕಿವಿಮಾತು ಹೇಳಿದರು.

ಇದನ್ನೂ ಓದಿ: ಅಯೋಧ್ಯೆಯಲ್ಲಿ ಶ್ರೀರಾಮ ಮೂರ್ತಿ ಪ್ರತಿಷ್ಠಾಪನೆ ದಿನ ಊರಲ್ಲಿ ಪೂಜೆ ಸಲ್ಲಿಸಿ: ಹಿಂದೂ ಸಮುದಾಯಕ್ಕೆ ವಿಎಚ್‌ಪಿ ಕರೆ

Last Updated : Nov 17, 2023, 11:34 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.