ಮಂಗಳೂರು: ಇಡೀ ದೇಶವನ್ನು ಬೆಚ್ಚಿಬೀಳಿಸಿದ್ದ ಮಂಗಳೂರು ವಿಮಾನ ದುರಂತಕ್ಕೆ ಮೇ.22ರಂದು ಒಂಭತ್ತು ವರ್ಷವಾಗಲಿದೆ. ಮಂಗಳೂರು ನಗರವನ್ನು ದುಃಖಕ್ಕೆ ಈಡು ಮಾಡಿದ ಈ ಕಹಿ ಘಟನೆ ನಡೆದು ಒಂಭತ್ತು ವರ್ಷ ಕಳೆದರು ಇನ್ನೂ ಆ ಕಹಿ ನೆನಪು ಮರೆಯಾಗಿಲ್ಲ.
2010 ರ ಮೇ 22 ರಂದು ಮುಂಜಾನೆ ಇಡೀ ದೇಶ ಬೆಚ್ಚಿಬೀಳುವಂತಹ ಘಟನೆ ಮಂಗಳೂರಿನಲ್ಲಿ ನಡೆಯಿತು. ಅಂದು ಮಂಗಳೂರು ವಿಮಾನ ದುರಂತ ಸಂಭವಿಸಿ 158 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದರು. ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ರನ್ ವೇಯಲ್ಲಿ ದುರಂತಕ್ಕೀಡಾಗಿ ಪ್ರಯಾಣಿಕರು ಸುಟ್ಟು ಕರಕಲಾಗಿದ್ದರು.
ಈ ಘಟನೆಯಿಂದ ಇಡೀ ದೇಶವೇ ದುಃಖ ಪಟ್ಟಿತ್ತು. ವಿಮಾನ ದುರಂತದ ವೇಳೆ ಅದರ ಸಂಪೂರ್ಣ ನಿಭಾವಣೆ ಜವಾಬ್ದಾರಿ ಜಿಲ್ಲಾಡಳಿತಕ್ಕೆ ಇರುತ್ತದೆ. ಆಗ ಜಿಲ್ಲಾಧಿಕಾರಿಯಾಗಿದ್ದ ಪೊನ್ನುರಾಜ್ ಅಧ್ಯಯನಕ್ಕಾಗಿ ವಿದೇಶಕ್ಕೆ ತೆರಳಿದ್ದರು. ಆ ಸಂದರ್ಭದಲ್ಲಿ ಪ್ರಭಾರ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಣೆ ಮಾಡಿದವರು ಪ್ರಭಾಕರ್ ಶರ್ಮ.
ಪ್ರಪಾತದಲ್ಲಿದ್ದ ವಿಮಾನದ ಅವಶೇಷಗಳಡಿ ಇದ್ದ ಮೃತ ಪ್ರಯಾಣಿಕರ ಮೃತದೇಹ ತಂದು, ಅದನ್ನು ಗುರುತಿಸುವ ಕಾರ್ಯವನ್ನು ಯಾವುದೇ ಸಮಸ್ಯೆ ಬಾರದಂತೆ ವ್ಯವಸ್ಥಿತವಾಗಿ ಮಾಡಿರುವ ಬಗ್ಗೆ ಈಗ ನಿವೃತ್ತವಾಗಿರುವ ಪ್ರಭಾಕರ್ ಶರ್ಮ ಈಟಿವಿ ಭಾರತ್ ಜೊತೆಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ.