ETV Bharat / state

ಕಡಬದ ಎಲಿಫಂಟ್ ಆಪರೇಷನ್ ಕಾರ್ಯಾಚರಣೆ ಸ್ಥಗಿತ.. ಭಯದ ಜೊತೆಗೆ ಸಂಕಷ್ಟದಲ್ಲಿ ಜನತೆ

author img

By

Published : Mar 16, 2023, 7:31 PM IST

Updated : Mar 16, 2023, 10:35 PM IST

ಕಾಡಾನೆಗಳನ್ನು ಹಿಡಿದು ಸ್ಥಳಾಂತರಿಸಲಾಗುವುದು ಎಂದು ಹೇಳಿ ಐದು ಸಾಕಾನೆಗಳನ್ನು ತಂದು ಕಾರ್ಯಾಚರಣೆ ಆರಂಭಿಸಿದ್ದ ಅರಣ್ಯ ಇಲಾಖೆ ಕಾಟಾಚಾರಕ್ಕೆ ಒಂದು ಕಾಡಾನೆಯನ್ನು ಮಾತ್ರ ಸೆರೆಹಿಡಿದು ಮೂರೇ ದಿನಕ್ಕೆ ಕಾರ್ಯಾಚರಣೆ ಸ್ಥಗಿತಗೊಳಿಸಿದೆ.

kadabas-elephant-operation-halted-dot-people-in-distress-along-with-fear-dot
ಕಡಬದ ಎಲಿಫಂಟ್ ಆಪರೇಷನ್ ಕಾರ್ಯಾಚರಣೆ ಸ್ಥಗಿತ.. ಭಯದ ಜೊತೆಗೆ ಸಂಕಷ್ಟದಲ್ಲಿ ಜನತೆ..!

ಕಡಬದ ಎಲಿಫಂಟ್ ಆಪರೇಷನ್ ಕಾರ್ಯಾಚರಣೆ ಸ್ಥಗಿತ.. ಭಯದ ಜೊತೆಗೆ ಸಂಕಷ್ಟದಲ್ಲಿ ಜನತೆ

ಕಡಬ(ದಕ್ಷಿಣ ಕನ್ನಡ): ಕಳೆದ ತಿಂಗಳು ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ನೈಲಾ ಎಂಬಲ್ಲಿ ಆನೆ ದಾಳಿಗೆ ಇಬ್ಬರು ಬಲಿಯಾದ ಬಳಿಕವೂ ಕಡಬ ವ್ಯಾಪ್ತಿಯಲ್ಲಿ ಕಾಡಾನೆಗಳ ಉಪಟಳ ಮಾತ್ರ ನಿರಂತರವಾಗಿದ್ದು, ಇಲ್ಲಿನ ಜನರ ಬದುಕನ್ನೇ ತಲ್ಲಣಗೊಳಿಸಿದೆ.

ರಬ್ಬರ್‌, ಅಡಿಕೆ, ಬಾಳೆ ಸೇರಿದಂತೆ ಕೃಷಿ ತೋಟಗಳಿಗೆ ಕಾಡಾನೆಗಳು ನಿರಂತರವಾಗಿ ಲಗ್ಗೆ ಇಟ್ಟು ಕೃಷಿ ಬೆಳೆಗಳನ್ನು ನಾಶಪಡಿಸುವುದರ ಜೊತೆಗೆ, ಕೃಷಿಗೆ ಅಳವಡಿಸಲಾಗಿರುವ ಪೈಪ್‌ಗಳು, ಸ್ಪಿಂಕ್ಲರ್‌ಗಳು, ರಬ್ಬರ್ ಮರಗಳಿಗೆ ಅಳವಡಿಸಿರುವ ರಬ್ಬರ್ ಹಾಲು ಸಂಗ್ರಾಹಕಗಳು ನಾಶಮಾಡುವುದು ನಿರಂತರವಾಗಿ ನಡೆಯುತ್ತಿದೆ. ಮಾತ್ರವಲ್ಲದೆ ಅಡಿಕೆ ತೋಟಗಳಿಗೆ, ರಬ್ಬರ್ ಟ್ಯಾಪಿಂಗ್‌ಗೆ ಹೋಗಲಾರದ ಸ್ಥಿತಿ ಎದುರಾಗಿದೆ.

ಈಗಾಗಲೇ ಜನರಲ್ಲಿ ಜೀವ ಭಯ ಹುಟ್ಟಿಸಿರುವ ಕಾಡಾನೆಗಳನ್ನು ಹಿಡಿದು ಸ್ಥಳಾಂತರಿಸಲಾಗುವುದು ಎಂದು ಹೇಳಿ ಐದು ಸಾಕಾನೆಗಳನ್ನು ತಂದು ಕಾರ್ಯಾಚರಣೆ ಆರಂಭಿಸಿದ್ದ ಅರಣ್ಯ ಇಲಾಖೆ ಕಾಟಾಚಾರಕ್ಕೆ ಒಂದು ಕಾಡಾನೆಯನ್ನು ಮಾತ್ರ ಸೆರೆಹಿಡಿದು ಮೂರೇ ದಿನಕ್ಕೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತು. ನಂತರದಲ್ಲಿ ವಿಶ್ರಾಂತಿಗೆಂದು ಹೋದ ಸಾಕಾನೆಗಳು ಮತ್ತೆ ಈ ಕಡೆ ಬರಲೇ ಇಲ್ಲ. ಅರಣ್ಯ ಅಧಿಕಾರಿಗಳು ಕಾಡ್ಗಿಚ್ಚಿನ ನೆಪ ಹೇಳಿಕೊಂಡು ಸ್ಥಳದಿಂದ ಕಾಲ್ಕಿತ್ತರು.

ಆದರೆ ಬಹುತೇಕ ಕಡೆಗಳಲ್ಲಿ ಕಾಡ್ಗಿಚ್ಚು ಇನ್ನೂ ನಿಯಂತ್ರಣಕ್ಕೇ ಬಂದಿಲ್ಲ. ಇದರಿಂದಾಗಿ ಇನ್ನೊಂದು ಕಡೆ ವಿಷಯುಕ್ತ ಹಾವುಗಳು ಹಾಗೂ ಇತರ ಕಾಡುಪ್ರಾಣಿಗಳು ಇನ್ನೂ ಹೆಚ್ಚಾಗಿ ಜನವಸತಿ ಸ್ಥಳಗಳಿಗೆ ಬರಲು ಆರಂಭಿಸಿವೆ. ಇದು ಕೂಡಾ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕಡಬದ ರೆಂಜಿಲಾಡಿ ಘಟನೆಯಿಂದಾಗಿ ಆಕ್ರೋಶಗೊಂಡಿದ್ದ ಸ್ಥಳೀಯ ಜನರು ಕಾಡಾನೆಗಳ ಹಾವಳಿಯನ್ನು ಸಂಪೂರ್ಣ ತಡೆಯಲು ಕ್ರಮ ಕೈಗೊಳ್ಳಬೇಕು, ಜನರನ್ನು ಬಲಿ ಪಡೆದ ಆನೆಗಳನ್ನು ಸೆರೆಹಿಡಿಯಬೇಕು ಎಂದು ಪಟ್ಟುಹಿಡಿದು ಸಚಿವ ಎಸ್‌. ಅಂಗಾರ, ದ.ಕ ಜಿಲ್ಲಾಧಿಕಾರಿ, ಜಿಲ್ಲಾ ಅರಣ್ಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.

ಈ ಹಿಂದೆ ಉಪಟಳ ನೀಡುವ ಎಲ್ಲಾ ಕಾಡಾನೆಗಳನ್ನು ಸೆರೆಹಿಡಿದು ಸ್ಥಳಾಂತರಿಸಲಾಗುವುದು ಎಂದು ಜಿಲ್ಲಾ ಅರಣ್ಯ ಅಧಿಕಾರಿ ಡಾ. ದಿನೇಶ್ ಅವರು ಮಾಧ್ಯಮಗಳ ಮುಂದೆ ಹೇಳಿಕೆಯನ್ನೂ ನೀಡಿದ್ದರು. ಆದರೆ ಅರಣ್ಯಾಧಿಕಾರಿಗಳು ಕೂಡ ಈಗ ಸುಮ್ಮನಾಗಿದ್ದಾರೆ. ಇತ್ತ ಜನರು ನಿರಂತರವಾಗಿ ಕಾಡಾನೆಗಳಿಂದ ತೊಂದರೆ ಅನುಭವಿಸುತ್ತಲೇ ಇದ್ದಾರೆ.

ಕಾಡಾನೆಗಳ ತೊಂದರೆ ಹೆಚ್ಚಳ: ಶಿರಿಬಾಗಿಲು ಗ್ರಾಮದ ಪರ್ಜೆ, ಪಿಲಿಕಡೆ, ಅನಿಲ, ದೇರಣೆ, ಗುಂಡ್ಯ, ಬಾರ್ಯ, ರೆಂಜಾಳ, ಕೊಂಬಾರು ಗ್ರಾಮದ ಕಾವಾರು, ಆಗು, ಬಗ್ಗುಣಿ, ಮಿತ್ತಬೈಲು, ಕಮರ್ಕಜೆ, ಮರುವಂಜಿ, ಬೊಟ್ಟಡ್ಡ, ಹಾಗೂ ಬಳಕ, ನೂಜಿಬಾಳ್ತಿಲ, ಬದಿಬಾಗಿಲು, ಸುಬ್ರಹ್ಮಣ್ಯ, ಕಳಂಜ, ಕಾಯರ್ತಡ್ಕ, ಶಿರಾಡಿ ಹಾಗೂ ಈ ಮೊದಲು ಇಬ್ಬರು ಮೃತಪಟ್ಟ ರೆಂಜಿಲಾಡಿಯ ನೈಲಾ ಪರಿಸರಗಳಲ್ಲಿ ಕಾಡಾನೆಗಳ ತೊಂದರೆ ಹೆಚ್ಚಳವಾಗಿದೆ ಎಂಬುದು ಸ್ಥಳೀಯ ಆರೋಪ.

ಕಾಡಾನೆಗಳಿಂದಾಗಿ ಜೀವಹಾನಿಯಾದ ಕಾರಣದಿಂದಾಗಿ ರಬ್ಬರ್‌ ಟ್ಯಾಪರ್‌ಗಳು, ರಾತ್ರಿ ತೋಟಗಳಿಗೆ ನೀರು ಬಿಡಲು ಹೋಗುವ ಕೃಷಿಕರೂ ಹೊರಗಡೆ ಬರದಂತಾಗಿ ಜೀವ ಭಯದಿಂದ ತತ್ತರಿಸುವಂತಾಗಿದೆ. ಮಾತ್ರವಲ್ಲದೆ ಕೃಷಿ ತೋಟಗಳಿಗೆ ಪಕ್ಕದ ಕಾಡಿನಿಂದ ಆಹಾರ ಅರಸಿಕೊಂಡು ಬರುವ ಕಾಡಾನೆಗಳಿಗೆ ದಿನ ನಿತ್ಯ ಅಪಾರ ಪ್ರಮಾಣದ ಬಾಳೆ, ಅಡಿಕೆ, ತೆಂಗು ಸೇರಿ ಕೃಷಿಗಳು ಆಹುತಿಯಾಗುತ್ತಿರುವುದರ ಜತೆಗೆ ತೋಟಗಳಲ್ಲಿ ಇರುವ ಬೆಲೆಬಾಳುವ ನೀರಾವರಿ ಪೈಪ್‌ಗಳು, ಸ್ಪಿಂಕ್ಲರ್‌ಗಳೂ ಸರ್ವನಾಶವಾಗುತ್ತಿವೆ.

ಜನರು ರಾತ್ರಿ ಮಾತ್ರವಲ್ಲದೇ ಹಗಲು ಹೊತ್ತಿನಲ್ಲಿಯೂ ಶಾಲಾ ಮಕ್ಕಳು ಪ್ರಾಣ ಭೀತಿಯಿಂದಲೇ ಓಡಾಡುವಂತಾಗಿದೆ. ಒಟ್ಟಿನಲ್ಲಿ ಮುಂದಿನ ಅಪಾಯ ಎದುರಾಗುವ ಮೊದಲು ಸರ್ಕಾರ, ಅರಣ್ಯ ಇಲಾಖೆ ಈ ಬಗ್ಗೆ ಕಾರ್ಯಪ್ರವೃತ್ತರಾಗಬೇಕೆಂಬುದು ಇಲ್ಲಿನ ಜನರ ಆಗ್ರಹವಾಗಿದೆ.

ಇದನ್ನೂ ಓದಿ: ಆಪರೇಷನ್ ಎಲಿಫೆಂಟ್ ಸ್ಥಗಿತಗೊಂಡಿಲ್ಲ: ಡಿಎಫ್ಒ ದಿನೇಶ್ ಸ್ಪಷ್ಟನೆ

Last Updated : Mar 16, 2023, 10:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.