ಬಂಟ್ವಾಳ: ಬಂಟ್ವಾಳ ತಾಲೂಕಿನ ಕಡೇಶ್ವಾಲ್ಯ ಗ್ರಾಮದ ನಿವಾಸಿ ಜಯಲಕ್ಷ್ಮೀ ಜಿ. ಅವರು 2017 ನೇ ಸಾಲಿನ ರಾಷ್ಟ್ರೀಯ ಕ್ರೀಡಾರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕಡೇಶ್ವಾಲ್ಯ ಪೆರ್ಲಾಪು ಗಾಣದಕೊಟ್ಯ ನಿವಾಸಿ ದಿ. ವಿಶ್ವನಾಥ ಸಪಲ್ಯ- ರೇವತಿ ದಂಪತಿಯ ಪುತ್ರಿ ಜಯಲಕ್ಷ್ಮೀ. ಇವರು ಕಡೇಶ್ವಾಲ್ಯ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಎಸ್ಎಲ್ಸಿ ಪೂರ್ಣಗೊಳಿಸಿದ ಬಳಿಕ ಆಳ್ವಾಸ್ನಲ್ಲಿ ಪದವಿಪೂರ್ವ, ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನೂ ಪೂರ್ಣಗೊಳಿಸಿದರು. ಅಲ್ಲಿಯ ಕೋಚ್ ಪ್ರವೀಣ್ ಕುಮಾರ್ ಅವರಿಂದ ಬಾಲ್ ಬ್ಯಾಡ್ಮಿಂಟನ್ ಕಲಿತು ರಾಷ್ಟ್ರಮಟ್ಟದಲ್ಲಿ ಮಿಂಚಿದ್ದು, ಕರ್ನಾಟಕ ತಂಡದ ನಾಯಕಿಯಾಗಿದ್ದರು. ರಾಷ್ಟ್ರೀಯ ಮಟ್ಟದಲ್ಲಿ ನಾಲ್ಕು ಬಾರಿ ಸ್ಟಾರ್ ಆಫ್ ಇಂಡಿಯಾ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಈಕೆಯ ಸಾಧನೆಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಇದೀಗ ಜಯಲಕ್ಷ್ಮೀ ಅವರು ಆಳ್ವಾಸ್ನಲ್ಲಿ ವಿದ್ಯಾರ್ಥಿಗಳಿಗೆ ಬಾಲ್ ಬ್ಯಾಡ್ಮಿಂಟನ್ ತರಬೇತಿ ನೀಡುತ್ತಿದ್ದಾರೆ.