ETV Bharat / state

ಮಂಗಳೂರಿನ ಫಲ್ಗುಣಿ ನದಿ ದಂಡೆಗೆ ಹರಿದು ಬಂದ ತ್ಯಾಜ್ಯ: ಪರಿಸರ ಪ್ರೇಮಿಗಳಿಂದ ಸ್ವಚ್ಛತೆ ಕಾರ್ಯ

author img

By

Published : Jul 15, 2022, 4:58 PM IST

ಮಂಗಳೂರು ನಗರದ ಬಂಗ್ರಕೂಳೂರಿನಲ್ಲಿರುವ ಫಲ್ಗುಣಿ ನದಿಯ ದಂಡೆಯಲ್ಲಿ ಬರೋಬ್ಬರಿ 10 ಲೋಡ್‌ಗೂ ಅಧಿಕ ತ್ಯಾಜ್ಯ ಸಂಗ್ರಹವಾಗಿದೆ. ಈ ಹಿನ್ನೆಲೆಯಲ್ಲಿ ಪರಿಸರ ಪ್ರೇಮಿಗಳು ಸ್ವಚ್ಚತಾ ಕಾರ್ಯ ನಡೆಸಿದರು.

garbage-heaps-in-banks-of-phalguni-river-in-mangaluru
ಮಂಗಳೂರಿನ ಫಲ್ಗುಣಿ ನದಿ ದಂಡೆಗೆ ಹರಿದು ಬಂದ ಲೋಡ್ ಗಟ್ಟಲೆ ತ್ಯಾಜ್ಯ: ಪರಿಸರ ಪ್ರೇಮಿಗಳಿಂದ ಸ್ವಚ್ಚತೆ ಕಾರ್ಯ

ಮಂಗಳೂರು: ಭಾರಿ ಮಳೆಯಿಂದ ಭಾರಿ ಪ್ರಮಾಣದ ತ್ಯಾಜ್ಯ ಫಲ್ಗುಣಿ ನದಿ ದಡದಲ್ಲಿ ಸಂಗ್ರಹವಾಗಿದೆ. ಜನರು ಹೊಳೆ, ತೋಡಿಗೆ ಎಸೆದಿದ್ದ ತ್ಯಾಜ್ಯದ ದಡಕ್ಕೆ ಬಂದು ಸೇರಿದ್ದು, ಪರಿಸರ ಪ್ರೇಮಿಗಳು ಅದನ್ನು ಸ್ವಚ್ಛ ಗೊಳಿಸಿದ್ದಾರೆ.

ನಗರದ ಬಂಗ್ರಕೂಳೂರಿನಲ್ಲಿರುವ ಫಲ್ಗುಣಿ ನದಿಯ ದಂಡೆಯಲ್ಲಿ ಬರೋಬ್ಬರಿ 10 ಲೋಡ್‌ಗೂ ಅಧಿಕ ತ್ಯಾಜ್ಯ ಸಂಗ್ರಹವಾಗಿದೆ. ಅಧಿಕ ನೆರೆ ನೀರಿನಿಂದ ಬಂದ ತ್ಯಾಜ್ಯದ ರಾಶಿಯು ನದಿ ದಂಡೆಯಲ್ಲಿ ಸೇರಿ ಅಸಹ್ಯ ಮೂಡಿಸುವಂತಿತ್ತು. ಇದನ್ನು ಪರಿಸರ ಪ್ರೇಮಿಗಳು ಸ್ವಚ್ಛಗೊಳಿಸುವ ಮೂಲಕ ಮಾದರಿ ಕಾರ್ಯಕ್ಕೆ ಸಾಕ್ಷಿಯಾದರು.

ಮಂಗಳೂರಿನ ಫಲ್ಗುಣಿ ನದಿ ದಂಡೆಗೆ ಹರಿದು ಬಂದ ಲೋಡ್ ಗಟ್ಟಲೆ ತ್ಯಾಜ್ಯ: ಪರಿಸರ ಪ್ರೇಮಿಗಳಿಂದ ಸ್ವಚ್ಚತೆ ಕಾರ್ಯ

ಪರಿಸರ ಪ್ರೇಮಿ ಜೀತ್ ಮಿಲನ್‌, ಫಲ್ಗುಣಿ ನದಿ ತೀರದಲ್ಲಿ ಇರುವ ತ್ಯಾಜ್ಯ ಸ್ವಚ್ಚತೆಗೆ ಸಹಕರಿಸುವಂತೆ ಬುಧವಾರ ಸಾಮಾಜಿಕ ಜಾಲತಾಣದ ಪೋಸ್ಟ್​ ಹಾಕುವ ಮೂಲಕ ಸಾರ್ವಜನಿಕರಲ್ಲಿ ವಿನಂತಿಸಿದ್ದರು. ಅದರಂತೆ ಪರಿಸರಾಸಕ್ತರು ಸ್ವಚ್ಚತೆಗೆ ಕೈಜೋಡಿಸಿದರು. ಪರಿಸರಾಸಕ್ತರ ಜೊತೆಗೆ ಸ್ಕೂಲ್ ಆಫ್ ರೋಶನಿ ನಿಲಯ, ಸಿಒಡಿಪಿ ವಿದ್ಯಾರ್ಥಿಗಳು ಸಹಿತ 27 ಮಂದಿ ಬೆಳಗ್ಗೆ 9 ಗಂಟೆಯಿಂದ ನದಿ ದಂಡೆಯಲ್ಲಿ ಸ್ವಚ್ಛತೆಯಲ್ಲಿ ತೊಡಗಿದ್ದರು.

ಸಾರ್ವಜನಿಕರು ಎಸೆದ ಪ್ಲಾಸ್ಟಿಕ್, ಬಾಟಲಿಗಳು, ಗಾಜು, ಸ್ಯಾನಿಟರಿ ಪ್ಯಾಡ್ ಸಹಿತ ಕಸ - ಕಡ್ಡಿಗಳು ನದಿಯ ದಂಡೆಯಲ್ಲಿ ಶೇಖರಣೆಗೊಂಡಿತ್ತು. ಈ ಹಿನ್ನೆಲೆಯಲ್ಲಿ ದಿನವಿಡೀ ಸ್ವಚ್ಚತಾ ಕಾರ್ಯ ನಡೆದಿದ್ದು, 2 ಟ್ರಕ್ ಕಸವನ್ನು ಮರು ಸಂಸ್ಕರಣೆಗೆ ಬಳಕೆ ಮಾಡಲಾಗಿದೆ. ಸಂಸ್ಕರಣೆಗೆ ಯೋಗ್ಯವಲ್ಲದ ಕಸವನ್ನು ಪಚ್ಚನಾಡಿ ಡಂಪಿಂಗ್ ಯಾರ್ಡ್‌ಗೆ ಕಳುಹಿಸಲಾಗಿದೆ.

ಇದನ್ನೂ ಓದಿ: ಹುಬ್ಬಳ್ಳಿ: ರಸ್ತೆಯೆಲ್ಲ ಗುಂಡಿಮಯ.. ಪಾಲಿಕೆ - ಜನಪ್ರತಿನಿಧಿಗಳ ವಿರುದ್ದ ಜನರಿಂದ ಹಿಡಿಶಾಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.