ETV Bharat / state

ಅಕ್ಷಯ್ ಕಲ್ಲೇಗ ಕೊಲೆ ಕೇಸ್: ಆರೋಪಿಗಳು ಮಾದಕ ಪದಾರ್ಥ ಸೇವಿಸಿರುವ ಮಾಹಿತಿ ಇಲ್ಲ-ಎಸ್​ಪಿ

author img

By ETV Bharat Karnataka Team

Published : Nov 10, 2023, 6:54 AM IST

Akshay Kallega murder case: ಜನಪ್ರಿಯ ಹುಲಿ ವೇಷ ಕುಣಿತ ತಂಡದ ಅಕ್ಷಯ್‌ ಕಲ್ಲೇಗ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ಮಾದಕ ಪದಾರ್ಥ ಸೇವಿಸಿರುವ ಬಗ್ಗೆ ಮಾಹಿತಿ ಇಲ್ಲ ಎಂದು ಎಸ್​ಪಿ ಮಾಹಿತಿ ನೀಡಿದ್ದಾರೆ.

SP CB Rishyanth
ಎಸ್​ಪಿ ಸಿ ಬಿ ರಿಷ್ಯಂತ್

ಅಕ್ಷಯ್ ಕಲ್ಲೇಗ ಕೊಲೆ ಕೇಸ್ ಬಗ್ಗೆ ಮಂಗಳೂರಿನಲ್ಲಿ ಮಾತನಾಡಿದ ಎಸ್​ಪಿ ಸಿ.ಬಿ.ರಿಷ್ಯಂತ್

ಮಂಗಳೂರು: ಪುತ್ತೂರಿನಲ್ಲಿ ಇತ್ತೀಚೆಗೆ ಭೀಕರವಾಗಿ ಹತ್ಯೆಗೀಡಾದ ಹುಲಿವೇಷ ಕುಣಿತ ತಂಡದ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಅವರ ಕೊಲೆ ಪ್ರಕರಣದ ಆರೋಪಿಗಳು ಯಾವುದೇ ರೀತಿಯ ಮಾದಕ ಪದಾರ್ಥ ಸೇವನೆ ಮಾಡಿರುವ ಕುರಿತು ಮಾಹಿತಿ ಸಿಕ್ಕಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಎಸ್​ಪಿ ಸಿ.ಬಿ.ರಿಷ್ಯಂತ್ ತಿಳಿಸಿದರು. ಮಂಗಳೂರಿನಲ್ಲಿ ಗುರುವಾರ ಮಾತನಾಡಿದ ಅವರು, ಆರೋಪಿಗಳಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇದುವರೆಗೂ ಆರೋಪಿಗಳು ಯಾವುದೇ ರೀತಿಯ ಮಾದಕ ದ್ರವ್ಯ ಸೇವಿಸಿದ್ದರ ಕುರಿತು ಮಾಹಿತಿ ದೊರೆತಿಲ್ಲ. ತನಿಖೆ ನಡೆಯುತ್ತಿದೆ ಎಂದರು.

ಅಕ್ಷಯ್ ಹತ್ಯೆಗೆ ಅಪಘಾತ ಒಂದು ನೆಪವೇ ಅಥವಾ ಬೇರೆ ಯಾವುದಾದರೂ ವಿಚಾರ ಇದೆಯೇ ಎಂಬ ಕುರಿತು ಸಹ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದೇವೆ. ಅಕ್ಷಯ್ ಮತ್ತು ಆರೋಪಿಗಳ ನಡುವಿನ ನಂಟು, ವೈಷಮ್ಯದ ಕುರಿತು ಎದ್ದಿರುವ ಪ್ರಶ್ನೆಗಳ ಬಗ್ಗೆ ಗಮನಹರಿಸಿದ್ದೇವೆ. ಅದನ್ನೂ ತನಿಖೆ ನಡೆಸಲಾಗುವುದು ಎಂದು ಹೇಳಿದರು.

ಆರೋಪಿಗಳಾದ ಬನ್ನೂರು ಕೃಷ್ಣನಗರ ನಿವಾಸಿ ಹಾಗೂ ಖಾಸಗಿ ಬಸ್ ಚಾಲಕ ಚೇತನ್, ದಾರಂದಕುಕ್ಕು ನಿವಾಸಿ ಮನೀಶ್, ಪಡೀಲು ನಿವಾಸಿ ಕೇಶವ ಮತ್ತು ಬನ್ನೂರು ನಿವಾಸಿ ಮಂಜುನಾಥನನ್ನು ಘಟನಾ ಸ್ಥಳಕ್ಕೆ ಕರೆದೊಯ್ದು ಮಹಜರು ನಡೆಸಲಾಗಿದೆ. ಬಳಿಕ, ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ. ಆರೋಪಿಗಳಿಗೆ ನ.22ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಆರೋಪಿಗಳನ್ನು ಘಟನಾ ಸ್ಥಳಕ್ಕೆ ಕೊಂಡೊಯ್ಯುತ್ತಿದ್ದಾಗ ಅಕ್ಷಯ್ ಸ್ನೇಹಿತರು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿತ್ತು. ಪೊಲೀಸರು ಗುಂಪು ಚದುರಿಸಿದರು.

ಇದನ್ನೂ ಓದಿ: ಪುತ್ತೂರು: ಟೈಗರ್ಸ್‌ ಕಲ್ಲೇಗ ಹುಲಿವೇಷ ತಂಡದ ಅಕ್ಷಯ್‌ ಕಲ್ಲೇಗ ಬರ್ಬರ ಹತ್ಯೆ; ಮೂವರ ಬಂಧನ

ಪ್ರಕರಣದ ಹಿನ್ನೆಲೆ ಹೀಗಿದೆ..: ಪುತ್ತೂರು ಪೇಟೆಯ ನೆಹರೂ ನಗರದಲ್ಲಿ ಸೋಮವಾರ ತಡರಾತ್ರಿ (ನವೆಂಬರ್ 6) ಪ್ರಸಿದ್ಧ ಹುಲಿ ವೇಷ ಕುಣಿತ ತಂಡದ ಸಾರಥ್ಯ ವಹಿಸಿದ್ದ ಅಕ್ಷಯ್‌ ಕಲ್ಲೇಗ ಹತ್ಯೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸೋಮವಾರ ​ಸಂಜೆ ವಾಹನ ಅಪಘಾತದ ವಿಚಾರದಲ್ಲಿ ಅಕ್ಷಯ್‌ ಹಾಗೂ ಆರೋಪಿಗಳ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಅಪಘಾತ ನಷ್ಟದ ಬಾಬ್ತು ಮಾತನಾಡಲೆಂದು ಪುನಃ ಆರೋಪಿಗಳು ಅಕ್ಷಯ್‌ನನ್ನು ರಾತ್ರಿ 11.30 ಗಂಟೆಯ ಸುಮಾರಿಗೆ ನೆಹರೂ ನಗರದ ಬಳಿ ಕರೆದು ಹತ್ಯೆ ಮಾಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿರುವುದಾಗಿ ಪೊಲೀಸ್​ ಮೂಲಗಳು ತಿಳಿಸಿವೆ.

ನೆಹರೂ ನಗರದಿಂದ ವಿವೇಕಾನಂದ ಕಾಲೇಜಿಗೆ ತೆರಳುವ ರಸ್ತೆಯ ತುಸು ದೂರದಲ್ಲಿರುವ ಕೆನರಾ ಬ್ಯಾಂಕ್​ ಎಟಿಎಂ ಬಳಿ ಅಕ್ಷಯ್‌ ಮೇಲೆ ದಾಳಿ ನಡೆಸಿ, ಅಲ್ಲಿಂದ ಮಾಣಿ ಮೈಸೂರು ಹೆದ್ದಾರಿವರೆಗೂ ಅಟ್ಟಾಡಿಸಿಕೊಂಡು ಬಂದು ತಲವಾರಿನಿಂದ ಹಲ್ಲೆ ಮಾಡಿದ್ದಾರೆ. ಮಾಣಿ ಮೈಸೂರು ಹೆದ್ದಾರಿಯ ಒಂದು ಬದಿಯಿಂದ ಇನ್ನೊಂದು ಬದಿಯವರೆಗೆ ರಕ್ತದ ಕಲೆಗಳು ಕಂಡುಬಂದಿವೆ ಎಂದು ಪೊಲೀಸ್‌ ಮೂಲಗಳಿಂದ ತಿಳಿದುಬಂದಿದೆ.

ಇದನ್ನೂ ಓದಿ: "ನಾನು ಸತ್ತಾಗ ಬೆಂಕಿ ಇಡಬೇಕಾದ ಮಗನಿಗೆ ನಾನೇ ಬೆಂಕಿ ಇಡಬೇಕಾಯಿತಲ್ಲಾ", ಪೋಷಕರ ಆಕ್ರಂದನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.