ETV Bharat / state

ಮಂಗಳಾದೇವಿ ನವರಾತ್ರಿ ಉತ್ಸವ: ಅನ್ಯಧರ್ಮೀಯ ವ್ಯಾಪಾರಿಗಳಿಗೆ ಅವಕಾಶ ನಿರಾಕರಣೆ ಆರೋಪ-ಪ್ರತಿಭಟನೆ

author img

By ETV Bharat Karnataka Team

Published : Oct 13, 2023, 4:32 PM IST

Mangaladevi Temple
ಮಂಗಳಾದೇವಿ ದೇವಸ್ಥಾನ

ಅನ್ಯಧರ್ಮೀಯರು ವ್ಯಾಪಾರ ಮಾಡಲು ಯಾವುದೇ ವಿರೋಧ ವ್ಯಕ್ತಪಡಿಸಿಲ್ಲ ಎಂದು ಮಂಗಳಾದೇವಿ ದೇವಸ್ಥಾನದ ಮ್ಯಾನೇಜರ್​ ಸ್ಪಷ್ಟಪಡಿಸಿದ್ದಾರೆ.

ಅನ್ಯಧರ್ಮೀಯ ವ್ಯಾಪಾರಿಗಳಿಗೆ ಅವಕಾಶ ನಿರಾಕರಣೆ ಆರೋಪ- ಸ್ಪಷ್ಟನೆ

ಮಂಗಳೂರು: ಮಂಗಳಾದೇವಿ ದೇವಸ್ಥಾನದ ನವರಾತ್ರಿ ಉತ್ಸವದಲ್ಲಿ ವ್ಯಾಪಾರ ಮಾಡಲು ಅನ್ಯಧರ್ಮೀಯರಿಗೆ ಅವಕಾಶ ನಿರಾಕರಿಸಲಾಗಿದೆ ಎಂದು ಆರೋಪಿಸಿ ದ.ಕ ಮತ್ತು ಉಡುಪಿ ‌ಜಿಲ್ಲೆ ಜಾತ್ರಾ ವ್ಯಾಪಾರಸ್ಥರ ಸಮನ್ವಯ ಸಮಿತಿ ಮಂಗಳೂರಿನಲ್ಲಿ ಪ್ರತಿಭಟನೆ ‌ನಡೆಸಿದೆ. ಪುರಭವನದ ಬಳಿ ಪ್ರತಿಭಟನೆ ನಡೆಸಿದ ಜನರು ಮಂಗಳಾದೇವಿ ದೇವಸ್ಥಾನದ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಂಘಟನೆಯ ಮುಖಂಡ ಬಿ.ಕೆ.ಇಮ್ತಿಯಾಝ್ ಮಾತನಾಡಿ, "ಮಂಗಳಾದೇವಿಯ ನವರಾತ್ರಿ ಉತ್ಸವವನ್ನು ಎಲ್ಲರೂ ಸಂಭ್ರಮದಿಂದ ಆಚರಿಸುತ್ತಾರೆ. ಆದರೆ ಬಡ ಜಾತ್ರಾ ವ್ಯಾಪಾರಿಗಳಿಗೆ ಸಂಭ್ರಮ ಇಲ್ಲದಂತೆ ಮಾಡಿದೆ. ನವರಾತ್ರಿ ಉತ್ಸವಕ್ಕೆ ಅನ್ಯಧರ್ಮೀಯರಿಗೂ ಅವಕಾಶ ‌ನೀಡುವಂತೆ ಹಲವು ದಿನಗಳಿಂದ ವಿನಂತಿ ಮಾಡಲಾಗುತ್ತಿದೆ. ಆದರೆ ಅನ್ಯಧರ್ಮೀಯರಿಗೆ ಅವಕಾಶ ಕೊಟ್ಟರೆ ಗಲಾಟೆ ಆಗಬಹುದು. ನಿಮಗೆ ನಷ್ಟ ಆಗಬಹುದು ಎಂದು ಭಯಪಡಿಸಿದ್ದಾರೆ. ಇದರಿಂದ ಬಡ ವ್ಯಾಪಾರಿಗಳು ಸಂಕಷ್ಟದಲ್ಲಿದ್ದಾರೆ" ಎಂದು ಹೇಳಿದರು.

ಮಂಗಳಾದೇವಿ ದೇವಸ್ಥಾನದ ಮ್ಯಾನೇಜರ್ ರಂಜಿತ್ ಮಾತನಾಡಿ, "ನಾವು ಈ ಬಾರಿ ಆನ್​ಲೈನ್ ಮೂಲಕ ಟೆಂಡರ್ ಕರೆದಿದ್ದೆವು. ಆ ಟೆಂಡರ್​ನಲ್ಲಿ ಭಾಗವಹಿಸಿದವರು ಏಲಂನಲ್ಲಿ ಭಾಗವಹಿಸಿದ್ದರು. ಈ ರೀತಿ 94 ಮಳಿಗೆಗಳನ್ನು ಹಂಚಲಾಗಿದೆ. ಈ ಟೆಂಡರ್​ನಲ್ಲಿ ಯಾರೂ ಅನ್ಯಮತೀಯರು ಭಾಗವಹಿಸಿಲ್ಲ. ನಾವು ಅನ್ಯಧರ್ಮೀಯರಿಗೆ ಕೊಡುವುದಕ್ಕೆ ವಿರೋಧ ವ್ಯಕ್ತಪಡಿಸಿಲ್ಲ" ಎನ್ನುತ್ತಾರೆ.

ಜಿಲ್ಲಾಧಿಕಾರಿ ಆದೇಶ: ಶ್ರೀ ಮಂಗಳಾದೇವಿ ದೇವಸ್ಥಾನದ ಜಾತ್ರೆಯಲ್ಲಿ ಈ ಹಿಂದೆ ಯಶಸ್ವಿ ಬಿಡ್ಡುದಾರರಿಗೆ ಮಳಿಗೆಗಳನ್ನು ನೀಡುವ ಕ್ರಮ ಬದಲಾಯಿಸಿ ದೇವಸ್ಥಾನದಿಂದಲೇ ಜಾತ್ರಾ ವ್ಯಾಪಾರಿಗಳಿಗೆ ಹರಾಜು ಮೂಲಕ ಹಂಚಬೇಕು ಎಂದು ಕರ್ನಾಟಕ ರಾಜ್ಯ ಹಿಂದೂ ವ್ಯಾಪಾರಸ್ಥರ ಸಂಘ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿತ್ತು. ಅದರಂತೆ ಓರ್ವನೇ ಟೆಂಡರ್ ಪಡೆಯುವ ಕ್ರಮಕ್ಕೆ ಜಿಲ್ಲಾಧಿಕಾರಿ ಕಡಿವಾಣ ಹಾಕಿದ್ದಾರೆ.

ದೇವಳದಲ್ಲಿ ನಡೆಯುವ ನವರಾತ್ರಿ ಹಾಗೂ ವರ್ಷಾವಧಿ ಜಾತ್ರೋತ್ಸವದ ಸಂದರ್ಭ ಮ.ನ.ಪಾ ವ್ಯಾಪ್ತಿಗೆ ಒಳಪಡುವ ಸ್ಥಳದಲ್ಲಿ ಸಂತೆ ಇಡಲು ಬಹಿರಂಗ ಹರಾಜು ಪ್ರಕ್ರಿಯೆ ಮೂಲಕ ಓರ್ವನೇ ಬಿಡ್ಡುದಾರನಿಗೆ ನೀಡಲಾಗುತ್ತಿದೆ. ಬಿಡ್ಡುದಾರ ಆ ಜಾಗವನ್ನು ವಿವಿಧ ಸ್ಟಾಲ್​ಗಳನ್ನಾಗಿ ಪರಿವರ್ತಿಸಿ, ಪ್ರತಿ ಸ್ಟಾಲ್​ಗಳನ್ನು ಆತನೇ ವಿವಿಧ ವ್ಯಕ್ತಿಗಳಿಗೆ ವ್ಯಾಪಾರ ಮಾಡಲು ನೀಡಿ ಅವರಿಂದ ಬಾಡಿಗೆ ವಸೂಲಿ ಮಾಡುತ್ತಾನೆ‌. ಇದರಿಂದ ಸ್ಟಾಲ್ ನಡೆಸುವ ವ್ಯಾಪಾರಸ್ಥರು ಹೆಚ್ಚು ಬಾಡಿಗೆ ವಸೂಲಿ ಮಾಡುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ಹಿಂದೂ ಜಾತ್ರಾ ವ್ಯಾಪಾರಸ್ಥರ ಸಂಘ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತ್ತು. ಆದ್ದರಿಂದ ಸ್ಥಳೀಯ ಬಿಡ್ ವ್ಯಾಪಾರಸ್ಥರಿಗೆ ಹರಾಜು ಮಾಡದೆ, ದೇವಸ್ಥಾನ ಮೂಲಕ ಎಲ್ಲರಿಗೂ ಜಾಗ ಕೊಡಬೇಕಾಗಿ ವಿನಂತಿಸಿತ್ತು.

ಆದ್ದರಿಂದ ನವರಾತ್ರಿ ಹಾಗೂ ವರ್ಷಾವಧಿ ಜಾತ್ರೋತ್ಸವಗಳ ಸಂದರ್ಭ ನಡೆಯುವ ಸಂತೆಗಳನ್ನು ದೇವಸ್ಥಾನದ ವತಿಯಿಂದಲೇ ಪ್ರತಿ ಸ್ಟಾಲ್​ಗಳನ್ನು ಕೆಲವೊಂದು ಷರತ್ತಿನಂತೆ ಬಹಿರಂಗ ಹರಾಜು ನಡೆಸಬೇಕೆಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ. ದೇವಸ್ಥಾನ ಕರ್ನಾಟಕ ಸರ್ಕಾರ ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮಾದಾಯ ದತ್ತಿಗಳ ಇಲಾಖೆಗೆ ಸೇರಿದ್ದಾಗಿದೆ. ಆದ್ದರಿಂದ ಷರತ್ತುಗಳಿಗೆ ವಿರುದ್ಧವಾಗಿ ವರ್ತಿಸುವುದು, ಗಲಾಟೆ, ಗೊಂದಲಕ್ಕೆ ಆಸ್ಪದ ನೀಡಬಾರದು. ದೇವಸ್ಥಾನದಿಂದ ಗುರುತು ಮಾಡಿದ ಜಾಗದಲ್ಲಿ ಮಾತ್ರ ಅಂಗಡಿಗಳನ್ನು ಇಡತಕ್ಕದ್ದು ಹಾಗೂ ಅಂಗಡಿಗಳನ್ನು ಒಳಬಾಡಿಗೆಗೆ ನೀಡಬಾರದು. ಸ್ಟಾಲ್​ಗಳಲ್ಲಿ ಜೂಜು, ಜುಗಾರಿ, ಲಕ್ಕಿಡಿಪ್, ಮಾಂಸದ ಹೋಟೆಲ್‌ ನಡೆಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ನಿಷೇಧಿತ ವಸ್ತುಗಳನ್ನು ಮಾರಾಟ ಮಾಡತಕ್ಕದಲ್ಲ. ಧ್ವನಿವರ್ಧಕ ಬಳಸುವಂತಿಲ್ಲ. ವಿದ್ಯುತ್ ಸಂಪರ್ಕವನ್ನು ದೇವಸ್ಥಾನದಿಂದ ಒದಗಿಸಲಾಗುವುದಿಲ್ಲ. ಅದರ ವ್ಯವಸ್ಥೆಯನ್ನು ಅಂಗಡಿಯವರೇ ಮಾಡಬೇಕು ಎಂದು ಷರತ್ತು ವಿಧಿಸಲಾಗಿದೆ.

ಇದನ್ನೂ ಓದಿ: ಲೈಸನ್ಸ್ ಪಡೆಯದೆ ವ್ಯಾಪಾರ, ವಹಿವಾಟು; ಎಪಿಎಂಸಿ ವರ್ತಕರಿಗೆ ಸರ್ಕಾರದಿಂದ ಬಿಸಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.