ETV Bharat / state

ವಿವಾದಕ್ಕೆ ಕಾರಣವಾದ ಅಡ್ಯನಡ್ಕ ಶೈಕ್ಷಣಿಕ ಕಾರ್ಯಾಗಾರ: ವಿಧಾನಸೌಧದಲ್ಲೂ ವಿಷಯ ಪ್ರಸ್ತಾಪ

author img

By

Published : Feb 22, 2023, 7:04 AM IST

ವಿಟ್ಲ ಸಮೀಪದ ಅಡ್ಯನಡ್ಕ ಎಂಬಲ್ಲಿ ಸಂಘಟನೆಯೊಂದು ಆಯೋಜಿಸಿದ್ದ ಶೈಕ್ಷಣಿಕ ಕಾರ್ಯಾಗಾರವು ವಿವಾದಕ್ಕೆ ಕಾರಣವಾಗಿದ್ದು, ಇದೀಗ ರಾಜಕೀಯ ತಿರುವು ಪಡೆದುಕೊಂಡಿದೆ.

adyanadka academic workshop controversy
ವಿವಾದಕ್ಕೆ ಕಾರಣವಾದ ಅಡ್ಯನಡ್ಕ ಶೈಕ್ಷಣಿಕ ಕಾರ್ಯಾಗಾರ

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಗಡಿಭಾಗದ ಅಡ್ಯನಡ್ಕ ಎಂಬಲ್ಲಿ ಸಂಘಟನೆಯೊಂದು ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸಿದ ಶೈಕ್ಷಣಿಕ ಕಾರ್ಯಾಗಾರ ವಿವಾದಕ್ಕೆ ಕಾರಣವಾಗಿದ್ದು ಪೊಲೀಸ್ ಠಾಣೆ ಮೆಟ್ಟಲೇರಿದ್ದಲ್ಲದೇ, ವಿಧಾನಸಭೆಯಲ್ಲೂ ವಿಷಯ ಪ್ರಸ್ತಾಪವಾಯಿತು.

ನುಸ್ರುತುಲ್ ಇಸ್ಲಾಮಿಕ್ ಯಂಗ್ ಮೆನ್ಸ್ ಅಸೋಸಿಯೇಶನ್ (ಎನ್.ಐ.ವೈ.ಎ.) ಶೈಕ್ಷಣಿಕ ಕಾರ್ಯಕ್ರಮವೊಂದನ್ನು ಫೆಬ್ರವರಿ 18ರಂದು ಅಡ್ಯನಡ್ಕದ ಹಾಲ್​ವೊಂದರಲ್ಲಿ ಆಯೋಜಿಸಲಾಗಿತ್ತು. ಅದರಲ್ಲಿ ಅಡ್ಯನಡ್ಕದ ಖಾಸಗಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅಲ್ಲಿಗೆ ತೆರಳಿದ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ ಸಂದರ್ಭದಲ್ಲಿ ಒಂದು ಧರ್ಮದ ಬಗ್ಗೆ ಮತಪ್ರವಚನ ಮಾಡಲಾಗಿದೆ ಎಂಬ ಕುರಿತು ಸುದ್ದಿ ಹರಡಿದ್ದು, ಈ ಕುರಿತು ವಿದ್ಯಾರ್ಥಿಗಳು ನೀಡಿದ ಮಾಹಿತಿಯನ್ವಯ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಆಗಮಿಸಿದ್ದರು.

'ನಮಗೆ ಅಲ್ಲಿಗೆ ತೆರಳಲು ಇಷ್ಟವಿಲ್ಲದಿದ್ದರೂ ಒತ್ತಾಯಪೂರ್ವಕವಾಗಿ ಶಾಲಾ ಪ್ರಾಂಶುಪಾಲರು ಕಳುಹಿಸಿದ್ದಾರೆ ಎಂದು ಕೆಲ ವಿದ್ಯಾರ್ಥಿಗಳು ಆಪಾದಿಸಿದ್ದಾರೆ ಎಂಬ ಮಾಹಿತಿ ಪಡೆದ ಹಿಂದೂ ಕಾರ್ಯಕರ್ತರು, ಸ್ಥಳಕ್ಕಾಗಮಿಸಿ ಕಾರ್ಯಕ್ರಮ ಆಯೋಜಕರನ್ನು ತರಾಟೆಗೆ ತೆಗೆದುಕೊಂಡರು. ಅದೇ ದಿನ ರಾತ್ರಿ ಈ ವಿಚಾರವಾಗಿ ಹಿಂದೂ ಕಾರ್ಯಕರ್ತರು, ಮುಖಂಡರಾದ ಪುತ್ತೂರಿನ ಅರುಣ್ ಕುಮಾರ್ ಪುತ್ತಿಲ ಮತ್ತಿತರರು ವಿಟ್ಲ ಪೊಲೀಸ್ ಠಾಣೆಗೆ ತೆರಳಿ ಇದಕ್ಕೆಲ್ಲಾ ಪ್ರಾಂಶುಪಾಲರು ಕಾರಣ ಎಂದು ದೂರಿ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಇನ್ನು, ಅರುಣ್ ಕುಮಾರ್ ಪುತ್ತಿಲ ಅವರು ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಆಗಿದ್ದು, ಈ ವಿಚಾರ ರಾಜಕೀಯ ತಿರುವು ಪಡೆದುಕೊಂಡಿದೆ. ನಿಯೋಗದಲ್ಲಿ ಬಿಜೆಪಿ ಸ್ಥಳೀಯ ಮುಖಂಡರಾದ ಅರುಣ್ ವಿಟ್ಲ, ಹರಿಪ್ರಸಾದ್, ಕೇಪು ಗ್ರಾಪಂ ಅಧ್ಯಕ್ಷೆ ಯಶಸ್ವಿನಿ ಶಾಸ್ತ್ರಿ ಮೊದಲಾದವರು ಉಪಸ್ಥಿತರಿದ್ದರು.

ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು: ಇನ್ನೊಂದೆಡೆ, ಫೆ.18 ರ ರಾತ್ರಿ ಕೇಪು ಗ್ರಾಮದ ಮಾಧವ ಮೂಲ್ಯ ಎಂಬುವರು ವಿಟ್ಲ ಪೊಲೀಸರಿಗೆ ಈ ಕುರಿತು ದೂರು ನೀಡಿದ್ದಾರೆ. ಫೆ.18ರಂದು ಸಂಜೆ 5.30 ಕ್ಕೆ ಬಂಟ್ವಾಳ ತಾಲೂಕು ಕೇಪು ಗ್ರಾಮದ ಅಡ್ಯನಡ್ಕದಲ್ಲಿರುವ ಧಾರ್ಮಿಕ ಸಂಘಟನೆಯೊಂದರ ಖಾಸಗಿ ಹಾಲ್‌ಗೆ ಜನತಾ ವಿದ್ಯಾ ಸಂಸ್ಥೆಯ ಮುಖ್ಯೋಪಾಧ್ಯಾಯರಾದ ಟಿ. ಆರ್. ನಾಯಕ್, ರಫೀಕ್ ಮಾಸ್ಟರ್ ಆತೂರ್ ಹಾಗೂ ನುಸ್ರುತುಲ್ ಇಸ್ಲಾಂ ಯಂಗ್ ಮೆನ್ಸ್ ಅಸೋಸಿಯಷನ್ ಸಂಘಟನಾಕಾರರು ಶಾಲೆಯ ವಿಧ್ಯಾರ್ಥಿಗಳನ್ನು ಶೈಕ್ಷಣಿಕ ಕಾರ್ಯಾಗಾರದ ನೆಪದಲ್ಲಿ ಕರೆಸಿಕೊಂಡು ಹೋಗಿ, ಎರಡು ಕೋಮುಗಳ ನಡುವೆ ಸಂಘರ್ಷ ಉಂಟಾಗುವ ರೀತಿಯಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿ ವಿದ್ಯಾರ್ಥಿಗಳ ಭಾವನೆಗೆ ಧಕ್ಕೆ ತಂದು ಮಾನಸಿಕವಾಗಿ ಕಿರುಕುಳ ನೀಡಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ರೋಹಿಣಿ vs ರೂಪಾ: ಸಿಎಂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿ- ಸಚಿವ ಪ್ರಹ್ಲಾದ್ ಜೋಶಿ

ಘಟನೆಯ ಕುರಿತು ಪರ-ವಿರೋಧದ ಹೇಳಿಕೆಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೊಳಗಾಗಿವೆ. 'ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗುವ ರೀತಿಯಲ್ಲಿ ಮಕ್ಕಳನ್ನು ವರ್ತಿಸಲಾಗಿದೆ ಎಂದು ಹಿಂದೂ ಪರ ಸಂಘಟನೆಗಳು ಆಪಾದಿಸಿದರೆ, ಇತರೆ ಸಂಘಟನೆಗಳು ಇದು ಕೇವಲ ಆಪಾದನೆಯಷ್ಟೇ, ರಫೀಕ್ ಮಾಸ್ಟರ್ ಅವರು ಇಂಥಹ ಹಲವು ಕಾರ್ಯಕ್ರಮಗಳನ್ನು ನಡೆಸಿ ಕೊಟ್ಟಿದ್ದು, ಯಾವುದೇ ಧರ್ಮ ಬೋಧನೆಯನ್ನು ಮಾಡುವಂಥವರಲ್ಲ' ಎಂದು ಹೇಳಿದ್ದಾರೆ.

ಇದನ್ನೂ ಓದಿ: ಆಳಂದದ ಮಶಾಕ್ ದರ್ಗಾದಲ್ಲಿ ಶಾಂತಿಯುತ ಶಿವರಾತ್ರಿ, ಉರುಸ್ ಆಚರಣೆ

ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪ: ಈ ಮಧ್ಯೆ ವಿಧಾನಸಭೆಯಲ್ಲಿ ಶಾಸಕ ಹಾಗೂ ಪ್ರತಿಪಕ್ಷ ಉಪನಾಯಕ ಯು.ಟಿ.ಖಾದರ್ ಅವರು ವಿಷಯ ಪ್ರಸ್ತಾಪಿಸಿದ್ದು, ಅಡ್ಯನಡ್ಕ ಘಟನೆಯಲ್ಲಿ ಕೆಲ ಸಂಘಟನೆಗಳ ಒತ್ತಡಕ್ಕೊಳಗಾಗಿ ಪೊಲೀಸ್ ಠಾಣೆಯಲ್ಲಿ ಮಾಸ್ಟರ್ ವಿರುದ್ಧವೇ ಪ್ರಕರಣ ದಾಖಲಿಸುವ ಸನ್ನಿವೇಶ ಉಂಟಾಗುತ್ತಿರುವುದಕ್ಕೆ ಖೇದ ವ್ಯಕ್ತಪಡಿಸಿದ್ದಾರೆ. ಅದರಲ್ಲೂ, ರಫೀಕ್ ಮಾಸ್ಟರ್ ಅವರಿಗೆ ಒಳ್ಳೆಯ ಹೆಸರಿದ್ದು, ಈ ಕುರಿತು ಕೂಲಂಕಷವಾಗಿ ವಿಚಾರಣೆ ನಡೆಸಿ ಕೇಸ್​ ದಾಖಲಿಸಿಕೊಳ್ಳಬೇಕಿತ್ತು ಎಂದಿದ್ದಾರೆ.

ಇದನ್ನೂ ಓದಿ: ಸೆಲ್ಫಿ ವಿವಾದ: ಕ್ರಿಕೆಟಿಗ ಪೃಥ್ವಿ ಶಾ ವಿರುದ್ಧ ಎಫ್‌ಐಆರ್ ದಾಖಲಿಸಲು ಸ್ಪಪ್ನಾ ಗಿಲ್​​​​​ ಅರ್ಜಿ

ಒಟ್ಟಿನಲ್ಲಿ ಸಣ್ಣದಾಗಿ ಆರಂಭಗೊಂಡ ವಿವಾದ ಇದೀಗ ರಾಜಕೀಯ ತಿರುವು ಪಡೆದುಕೊಂಡಿದ್ದು, ಬಿಜೆಪಿ ಪುತ್ತೂರು ಟಿಕೆಟ್ ಆಕಾಕ್ಷಿ ಅರುಣ್ ಕುಮಾರ್ ಪುತ್ತಿಲ ಮತ್ತು ಕಾಂಗ್ರೆಸ್ ನಡುವಿನ ಸಮರಕ್ಕೂ ಕಾರಣವಾಗಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.