ಅಂಚೆ ಪತ್ರ ನೀಡಲು ಹೋದ ಪೋಸ್ಟ್ ಮ್ಯಾನ್​ಗೆ ಹಲ್ಲೆ: ಆರೋಪಿಗೆ 10 ತಿಂಗಳ ಕಾರಾಗೃಹ ಶಿಕ್ಷೆ

author img

By

Published : Sep 30, 2022, 1:02 PM IST

accused-sentenced-to-10-months-imprisonment-in-postman-assault-case

ಪೋಸ್ಟ್​​​ಮ್ಯಾನ್​​ ಮೇಲೆ ಹಲ್ಲೆ ನಡೆಸಿದಲ್ಲದೇ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಮಂಗಳೂರಿನ 6ನೇ ಜೆಎಂಎಫ್​ಸಿ ನ್ಯಾಯಾಲಯ ಅಪರಾಧಿ ಯುವಕನಿಗೆ 10 ತಿಂಗಳ ಸಾದಾ ಸಜೆ ವಿಧಿಸಿದೆ.

ಮಂಗಳೂರು: ರಿಜಿಸ್ಟರ್ ಪೋಸ್ಟ್ ಬಟವಾಡೆ ಮಾಡಲು ಹೋದ ಪೋಸ್ಟ್​​​ಮ್ಯಾನ್​​ಗೆ ನಿಂದನೆ ಹಾಗೂ ಕಬ್ಬಿಣದ ರಾಡ್​​ನಿಂದ ಹಲ್ಲೆ ಮಾಡಿರುವ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಮಂಗಳೂರಿನ 6ನೇ ಜೆಎಂಎಫ್​ಸಿ ನ್ಯಾಯಾಲಯ ಅಪರಾಧಿ ಯುವಕನಿಗೆ 10 ತಿಂಗಳ ಸಾದಾ ಸಜೆ ಹಾಗೂ 2,500 ರೂ. ದಂಡ ವಿಧಿಸಿ ಆದೇಶಿಸಿದೆ.

2020ರ ಜೂನ್ 16ರ ಬೆಳಗ್ಗೆ ಬೋಳೂರಿನ ಮಠದಕಣಿ ರಸ್ತೆಯ ಮನೆಯಲ್ಲಿರುವ ಆರೋಪಿ ಮನೀಶ್ ಮನೆಗೆ ರಿಜಿಸ್ಟರ್ ಪೋಸ್ಟ್ ಬಟವಾಡೆ ಮಾಡಲು ಪೋಸ್ಟ್​​​ಮ್ಯಾನ್ ದಿನೇಶ್ ಅವರು ಹೋಗಿದ್ದರು. ಆ ಸಂದರ್ಭದಲ್ಲಿ ಆರೋಪಿ ಮನೀಶ್ ಅವಾಚ್ಯ ಪದಗಳಿಂದ ನಿಂದಿಸಿ, ಪೋಸ್ಟ್​​​ಮ್ಯಾನ್ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿ ಕಬ್ಬಿಣದ ರಾಡ್​​ನಿಂದ ಹಲ್ಲೆ ನಡೆಸಿದ್ದ. ಅಲ್ಲದೇ ಅಂಚೆ ಇಲಾಖೆಗೆ ಸಂಬಂಧಿಸಿದ ಕಾಗದ ಪತ್ರಗಳನ್ನು ಹರಿದು ಹಾಕಿ ದಿನೇಶ್ ಅವರ ಬೈಕ್​ನ್ನು ರಾಡ್​​ನಿಂದ ಜಖಂಗೊಳಿಸಿದ್ದ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಬರ್ಕೆ ಠಾಣೆಯ ಅಂದಿನ ಉಪನಿರೀಕ್ಷಕ ಹಾರೂನ್ ಅಖ್ತರ್ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣವನ್ನು ಕೈಗೆತ್ತಿಕೊಂಡ 6ನೇ ಜೆಎಂಎಫ್​ಸಿ ನ್ಯಾಯಾಲಯ ವಾದ, ಪ್ರತಿವಾದ ಆಲಿಸಿ ಆರೋಪಿ ತಪ್ಪಿತಸ್ಥನೆಂದು ಘೋಷಿಸಿ, ಶಿಕ್ಷೆ ಪ್ರಕಟಿಸಿದೆ.

ಮಂಗಳೂರಿನ 6ನೇ ಜೆಎಂಎಫ್​ಸಿ ನ್ಯಾಯಾಧೀಶರಾದ ಪೂಜಾಶ್ರೀ ಹೆಚ್.ಎಸ್. ಅವರು ಅಪರಾಧಿಗೆ 10 ತಿಂಗಳ ಸಾದಾ ಸಜೆ ಹಾಗೂ 2,500 ರೂ‌. ದಂಡ ವಿಧಿಸಿ ಆದೇಶಿಸಿದ್ದಾರೆ. ಸರ್ಕಾರದ ಪರ ಸರ್ಕಾರಿ ಅಭಿಯೋಜಕ ಮೋಹನ್ ಕುಮಾರ್ ಬಿ. ವಾದ ಮಂಡಿಸಿದ್ದರು.

ಇದನ್ನೂ ಓದಿ: ಮಗು ನೋಡಲು ಬಯಸುವ ವಿಚ್ಛೇದಿತ ಪತಿಗೆ ಆತಿಥ್ಯ ನೀಡುವ ಅವಶ್ಯಕತೆ ಇಲ್ಲ: ಹೈಕೋರ್ಟ್​ ಮಹತ್ವದ ತೀರ್ಪು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.