ಬೆಳ್ತಂಗಡಿ: ಈ ಹಿಂದೆ ತನ್ನ ಬಟ್ಟೆಯನ್ನು ಸುಟ್ಟು ಹಾಕಿದ್ದರೆಂದು ಕೆಲಸ ನಿರ್ವಹಿಸುತ್ತಿದ್ದ ಮಾಲೀಕನ ಕಾರು ಮತ್ತು ದ್ವಿಚಕ್ರ ವಾಹನಕ್ಕೆ ವ್ಯಕ್ತಿಯೊಬ್ಬ ಬೆಂಕಿ ಹಚ್ಚಿದ ಘಟನೆ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ವೇಣೂರು ಗ್ರಾಮದ ಕರಿಮಣೇಲು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪಾಸ್ಕಲ್ ಪಿಂಟೋ ಎಂಬವರ ಕೋಳಿ ಅಂಗಡಿಯಲ್ಲಿ 6 ತಿಂಗಳ ಹಿಂದೆ ಕೆಲಸ ಮಾಡುತಿದ್ದ ಪ್ರಭಾಕರ ಎಂಬ ವ್ಯಕ್ತಿ ಮಾಲೀಕರ ಮನೆ ಬಳಿಯ ಶೆಡ್ನಲ್ಲಿ ನಿಲ್ಲಿಸಿದ ಬೈಕಿಗೆ ಬೆಂಕಿ ಹಚ್ಚಿದ್ದು, ಅದರ ಹತ್ತಿರದಲ್ಲೇ ಇದ್ದ ಕಾರಿಗೂ ಬೆಂಕಿ ತಗುಲಿ, ಸಂಪೂರ್ಣವಾಗಿ ಕರಕಲಾಗಿವೆ.
ಈ ಸಂದರ್ಭದಲ್ಲಿ ಮನೆಯಲ್ಲಿ ಫಾಸ್ಕಲ್ ಅವರ ತಾಯಿ ಮಾತ್ರ ಇದ್ದು, ಕೋಳಿ ಅಂಗಡಿಗೆ ತೆರಳಿದ್ದ ಮಗನಿಗೆ ವಿಷಯ ತಿಳಿಸಿದರು. ತಕ್ಷಣ ಅವರು ಬಂದು ಬೆಂಕಿ ನಂದಿಸಿದರೂ ಬೈಕ್ ಸಂಪೂರ್ಣ ಸುಟ್ಟು ಹೋಗಿದ್ದಲ್ಲದೆ, ಕಾರು ಭಾಗಶಃ ಸುಟ್ಟು ಹೋಗಿದೆ.
ಅಲ್ಲೇ ಹತ್ತಿರದಲ್ಲಿ ಬೆಂಕಿ ಹಚ್ಚಿದ ಆರೋಪಿಯೂ ಇದ್ದು, ಕೆಲವು ತಿಂಗಳುಗಳ ಹಿಂದೆ ನನ್ನ ಬಟ್ಟೆ ಸುಟ್ಟು ಹಾಕಿದ್ದೀರಿ ಅದಕ್ಕಾಗಿ ನಾನು ನಿಮ್ಮ ವಾಹನಕ್ಕೆ ಬೆಂಕಿ ಹಚ್ಚಿದ್ದೇನೆ ಎಂದು ಹೇಳಿದ್ದಾನೆ ಎಂದು ತಿಳಿದುಬಂದಿದೆ. ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.