ಮಂಗಳೂರಿನ ಬಟ್ಟಪಾಡಿ ಬಳಿ ಸಮುದ್ರದಲ್ಲಿ ‌ಅಪಾಯಕ್ಕೆ ಸಿಲುಕಿದ್ದ ಹಡಗು ಮುಳುಗಡೆ

author img

By

Published : Jun 23, 2022, 8:40 PM IST

a-merchant-vessel-sinked-completely-near-mangaluru

ಎರಡು ದಿನಗಳ ಹಿಂದೆ ಮಂಗಳೂರಿನ ಸಮುದ್ರ ತೀರದಲ್ಲಿ ಅಪಾಯಕ್ಕೆ ಸಿಲುಕಿದ್ದ ವಿದೇಶಿ ಹಡಗು ಮುಳುಗಡೆಯಾಗಿದೆ. ಹಡಗಿನಿಂದ ತೈಲ ಸೋರಿಕೆ ಅಗದಂತೆ ತಡೆಗಟ್ಟಲು ಹಾಗೂ ಹಡಗಿನಲ್ಲಿರುವ ಫರ್ನಸ್ ಅಯಿಲ್ ಮತ್ತು ಇಂಜಿನ್ ಆಯಿಲ್​ ಹೊರತೆಗೆಯಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕೋಸ್ಟ್ ಗಾರ್ಡ್ ಡಿಐಜಿಗೆ ತಿಳಿಸಲಾಗಿದೆ.

ಮಂಗಳೂರು: ಸಿರಿಯಾದ 15 ಸಿಬ್ಬಂದಿ ಪ್ರಯಾಣಿಸುತ್ತಿದ್ದ ವಿದೇಶಿ ಹಡಗು ಎಂ.ವಿ.ಪ್ರಿನ್ಸಸ್ ಮಿರಾಲ್ ಮಂಗಳೂರಿನ ಬಟ್ಟಪಾಡಿ ಸಮೀಪದ ಸಮುದ್ರದಲ್ಲಿ ಮುಳುಗಡೆಯಾಗಿದೆ. ಎರಡು ದಿನಗಳ ಹಿಂದೆ ಈ ವಿದೇಶಿ ಹಡಗು ಸಣ್ಣ ರಂಧ್ರದ‌ ಮೂಲಕ ನೀರು ಒಳನುಗ್ಗಿ ಅಪಾಯಕ್ಕೆ ಸಿಲುಕಿತ್ತು.

ಹಡಗು 8,000 ಟನ್ ಉಕ್ಕಿನ ಕಾಯಿಲ್​ ತುಂಬಿಸಿಕೊಂಡು ಚೀನಾದ ಟಿಯಾಂಜಿನ್​ನಿಂದ ಲೆಬನಾನ್​ಗೆ ಸಾಗಿಸುತ್ತಿದ್ದ ಸಂದರ್ಭದಲ್ಲಿ ಘಟನೆ ಸಂಭವಿಸಿತ್ತು. ಇದರಲ್ಲಿದ್ದ 15 ಸಿರಿಯಾ ದೇಶದ ಪ್ರಜೆಗಳನ್ನು ಮಂಗಳೂರಿನ ಕೋಸ್ಟ್ ಗಾರ್ಡ್ ಸಿಬ್ಬಂದಿ ರಕ್ಷಿಸಿದ್ದರು. ಈ ಹಡಗು ಬಟ್ಟಪ್ಪಾಡಿ ಸಮೀಪದ ಸಮುದ್ರದ ನೀರಿನಲ್ಲಿ ಇದೀಗ ಮುಳುಗಡೆಗೊಂಡಿದೆ. ಹಡಗಿನ ಇಂಧನ ತೆಗೆಯುವುದು ಹೇಗೆ ಮತ್ತು ಹಡಗನ್ನು ಏನು ಮಾಡಬೇಕು ಎಂಬುದನ್ನು ನಿರ್ಧರಿಸಲು ಖಾಸಗಿ ಏಜೆಂಟ್ (ಸಿಂಗಾಪೂರ್‌ನ ಸ್ಮಿತ್-ಎಕ್ಸ್ ಪರ್ಟ್ ಕಂಪನಿ) ಪ್ರಾಥಮಿಕ ಸಮೀಕ್ಷೆ ನಡೆಸುತ್ತಿದೆ.

ಹಡಗು ಮುಳುಗಡೆಗೊಂಡ ಸಂಬಂಧ ದಕ್ಷಿಣ ಕನ್ನಡ ಜಿಲ್ಲಾಡಳಿತವು ಕೋಸ್ಟ್ ಗಾರ್ಡ್ ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳೊಂದಿಗೆ ಇಂದು ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಎಂ.ವಿ. ಪ್ರಿನ್ಸಸ್ ಮಿರಾಲ್ ಹಡಗಿನಿಂದ ತೈಲ ಸೋರಿಕೆ ಅಗದಂತೆ ತಡೆಗಟ್ಟಲು ಹಾಗೂ ಹಡಗಿನಲ್ಲಿರುವ ಫರ್ನಸ್ ಅಯಿಲ್ ಮತ್ತು ಇಂಜಿನ್ ಆಯಿಲ್​ನ್ನು ಹೊರತೆಗೆಯಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕೋಸ್ಟ್ ಗಾರ್ಡ್ ಡಿಐಜಿಗೆ ತಿಳಿಸಲಾಗಿದೆ.

a-merchant-vessel-sank-near-mangaluru
ಜಿಲ್ಲಾಡಳಿತದಿಂದ ಸಭೆ

ಈ ಹಡಗಿನ ಸುತ್ತಲೂ ಮೀನುಗಾರಿಕೆ ನಡೆಸದ ಹಾಗೆ ನೋಡಿಕೊಳ್ಳುವಂತೆ ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕರಿಗೆ ಸೂಚಿಸಲಾಗಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಯವರಿಗೆ ಕಾಲ ಕಾಲಕ್ಕೆ ಸಮುದ್ರದ ನೀರಿನ ಗುಣಮಾಪನವನ್ನು ಮಾಡಲು ನಿರ್ದೇಶಿಸಲಾಗಿದೆ. ಇದರ ಕಾರ್ಯಾಚರಣೆಗೆ ಎಂ.ಆರ್.ಪಿ.ಎಲ್ ಹಾಗೂ ಎನ್.ಎಂ.ಪಿ.ಟಿ ಸಂಸ್ಥೆಯವರು ತಮ್ಮಲ್ಲಿರುವ ರಕ್ಷಣಾ ಸಾಮಾಗ್ರಿ ಒದಗಿಸುವಂತೆ ಸೂಚಿಸಲಾಗಿದೆ.

ಇದಕ್ಕೆ ಸಂಬಂಧಿಸಿದ ಇತರ ಎಲ್ಲಾ ಇಲಾಖೆಯವರಿಗೆ ಸೋರಿಕೆಯಾದ ತೈಲ (Oil Spill) ಸಮುದ್ರದ ದಡಕ್ಕೆ ಬಂದಲ್ಲಿ ಎಲ್ಲ ಸೂಕ್ತ ಕ್ರಮ ಕೈಗೊಳ್ಳಲು ಸನ್ನದ್ಧರಾಗಿರಬೇಕೆಂದು ನಿರ್ದೇಶನ ನೀಡಲಾಗಿದೆ. ತೈಲವು ನದಿಗೆ ಸೇರದಂತೆಯೂ ಸೂಕ್ತ ವ್ಯವಸ್ಥೆ ಮಾಡುವಂತೆ ಕೋಸ್ಟ್ ಗಾರ್ಡ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಸ್ಟ್ ಗಾರ್ಡ್ ಡಿಐಜಿ ಅವರನ್ನು ಚೀಫ್ ಇನ್ಸಿಡೆಂಟ್ ಕಮಾಂಡರ್ (Chief Incident Commander) ಆಗಿ ನೇಮಿಸಲಾಗಿದೆ.

ಇದನ್ನೂ ಓದಿ: ನಿರಂತರವಾಗಿ ಪತ್ತೆಯಾಗುತ್ತಿವೆ ಜಿಂಕೆಗಳ ಕಳೇಬರ: ಈವರೆಗೆ 13 ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.