ETV Bharat / state

ಊರು ಉಳಿಸಲು ತಡೆಗೋಡೆ: ಲಾಕ್​ಡೌನ್​ ನಡುವೆಯೂ ಕಡಲಂಚಿನ ಮಕ್ಕಳ ಸಾಹಸಗಾಥೆ

author img

By

Published : Jun 9, 2020, 12:59 PM IST

ಸಮುದ್ರದ ಕಡಲ ಕೊರೆತ ತಪ್ಪಿಸುವ ಸಲುವಾಗಿ ಕಡಲಂಚಿನ ಗ್ರಾಮದ ಜನರೇ ಸರ್ಕಾರದ ನೆರವಿಗಾಗಿ ಕಾಯದೇ ತಾವೇ ತಡೆಗೋಡೆ ನಿರ್ಮಿಸಿ ಸೈ ಎನಿಸಿಕೊಂಡಿದ್ದಾರೆ.

Barrier construction
ತಡೆಗೋಡೆ ನಿರ್ಮಾಣ

ಮಂಗಳೂರು: ಮಳೆಗಾಲ ಬಂದ ಸಂದರ್ಭದಲ್ಲಿ ಕಡಲು ಅಬ್ಬರಿಸುವುದು ಸಾಮಾನ್ಯ. ಹಲವೆಡೆ ಕಡಲ ಕೊರೆತಗಳು ಸಾಕಷ್ಟು ಹಾನಿಯನ್ನುಂಟು ಮಾಡುತ್ತದೆ. ಕಡಲ ಕೊರೆತದಿಂದ ಊರು ರಕ್ಷಿಸಲು ಮಂಗಳೂರಿನ ಚಿತ್ರಾಪುರದ ಗ್ರಾಮಸ್ಥರು ಒಟ್ಟಾಗಿ ಟೊಂಕ ಕಟ್ಟಿ ನಿಂತಿದ್ದಾರೆ. ಕಡಲ ಕೊರೆತದಿಂದ ಹಾನಿಯಾಗುವುದನ್ನು ತಪ್ಪಿಸಲು ಊರಿನವರೇ ಸೇರಿ ಕಡಲಿಗೊಂದು ಗೋಡೆ ಕಟ್ಟಿದ್ದಾರೆ.

ಮಳೆಗಾಲ ಬಂತೆಂದರೆ ಕಡಲು ರೌದ್ರಾವತಾರ ತಾಳುತ್ತದೆ. ಅಬ್ಬರದ ಅಲೆಗೆ, ಕಡಲ ಕೊರೆತದಿಂದ ಸಾಕಷ್ಟು ಹಾನಿಗಳು ಸಂಭವಿಸುತ್ತದೆ. ಇದೇ ರೀತಿ, ಸಮಸ್ಯೆಯನ್ನ ಕಳೆದ ವರ್ಷ ಮಂಗಳೂರಿನ ಬೈಕಂಪಾಡಿ ಬಳಿ ಇರುವ ಚಿತ್ರಾಪುರ ಕಡಲತೀರದ ಗ್ರಾಮಸ್ಥರು ಅನುಭವಿಸಿದ್ದರು‌. ಕಡಲ ಕೊರೆತಕ್ಕೆ ಕಾಂಪೌಂಡ್​ಗಳು, ಒಣಮೀನು ಒಣಗಿಸುವ ಮೀನುಗಾರ ಮಹಿಳೆಯರ ಸಾಮಗ್ರಿಗಳು ಕಡಲ ಪಾಲಾಗಿದ್ದವು.

ತಡೆಗೋಡೆ ನಿರ್ಮಾಣ

ಈ ಹಿನ್ನೆಲೆಯಲ್ಲಿ ಈ ಬಾರಿ ಅನಾಹುತವಾಗುವ ಮುನ್ನವೇ ಚಿತ್ರಾಪುರ ಗ್ರಾಮಸ್ಥರು ಊರು ಉಳಿಸುವ ಕಾರ್ಯಕ್ಕೆ ಕೈ ಹಾಕಿದ್ದಾರೆ. ಸುಮಾರು 350 ಮೀಟರ್ ಉದ್ದದ ತಡೆಗೋಡೆಯನ್ನು ಸಮುದ್ರದ ಅಂಚಿನಲ್ಲಿ ಕಟ್ಟಿದ್ದಾರೆ. ಸುಮಾರು ಎಂಟು ಅಡಿ ಆಳ ತೋಡಿ, ಖಾಲಿ ಸಿಮೆಂಟ್ ಚೀಲದಲ್ಲಿ ಮರಳು ತುಂಬಿಸಿ ಈ ಗೋಡೆ ಕಟ್ಟಲಾಗಿದೆ. ಈ ಗೋಡೆಯ ಮೇಲ್ಭಾಗದಲ್ಲಿ ಮೂರು ಅಡಿಗಳಷ್ಟು ಮರಳಿನ ಚೀಲ ಹಾಕಲಾಗಿದೆ.

ಈ ಹಿಂದೆ ಇಲ್ಲಿ ಕಡಲ ಕೊರೆತದ ಸಮಸ್ಯೆ ಇರಲಿಲ್ಲ. ಒಂದು ವರ್ಷದ ಹಿಂದೆ ಗ್ರಾಮದ ಉತ್ತರ ಭಾಗದಲ್ಲಿ ಶಾಶ್ವತ ತಡೆಗೋಡೆ ನಿರ್ಮಿಸಿದ್ದರ ಪರಿಣಾಮವೇ ಗ್ರಾಮದ ದಕ್ಷಿಣದಲ್ಲಿ ಕಡಲಕೊರೆತ ಉಂಟಾಗಲು ಕಾರಣವಾಯಿತು. ಈ ಬಗ್ಗೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರೂ ಯಾರೂ ಸ್ಪಂದಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಚಿತ್ರಾಪುರ ಊರಿನವರೇ ಸೇರಿ ಕಡಲಿಗೆ ಗೋಡೆ ಕಟ್ಟಲು ನಿರ್ಧರಿಸಿದರು. ಅದರಂತೆ ಮೇ 18ರಿಂದ ಊರಿನವರೆಲ್ಲ ರಾತ್ರಿ, ಹಗಲೆನ್ನದೇ ಕೆಲಸ ಮಾಡಿ ಈ ಬಾರಿ ಕಡಲ ಕೊರೆತದ ಸಮಸ್ಯೆ ಬಾರದಂತೆ ಸಮುದ್ರಕ್ಕೆ ತಡೆಗೋಡೆ ಕಟ್ಟಿದ್ದಾರೆ.

ಊರಿನವರ ಕಾರ್ಯ ಗಮನಿಸಿದ ಶಾಸಕ ಭರತ್ ಶೆಟ್ಟಿ ಈ ಗೋಡೆ ಕಟ್ಟಲು ಆದ ಖರ್ಚು ಭರಿಸುವ ಭರವಸೆ ನೀಡಿದ್ದಾರಂತೆ. ಒಟ್ಟಿನಲ್ಲಿ ಮಾಡಬೇಕಾದ ಕೆಲಸವನ್ನು ಸರ್ಕಾರ ಮಾಡದೇ ಇದ್ದಾಗ, ಊರಿನವರೇ ಒಟ್ಟಾಗಿ ಊರು ಉಳಿಸಲು ಮಾಡಿದ ಈ ಕಾರ್ಯ ಶ್ಲಾಘನೆಗೆ ಪಾತ್ರವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.