ಬಂಟ್ವಾಳ: ತಾಲೂಕಿಗೆ ವಲಸೆ ಕಾರ್ಮಿಕರಾಗಿ ಬಂದಿದ್ದ 624 ಮಂದಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ವೈಯಕ್ತಿಕ ನೆಲೆಯಲ್ಲಿ ಶನಿವಾರ ರಾತ್ರಿ ಊಟ, ಪ್ರಯಾಣದ ಸಂದರ್ಭವೂ ಹಸಿವಾಗದಂತೆ ಆಹಾರ, ನೀರನ್ನು ಒದಗಿಸಿದ್ದು ಎಲ್ಲರನ್ನೂ ಗೌರವ ಪೂರ್ವಕವಾಗಿಯೇ ಕಳುಹಿಸಲಾಗಿದೆ ಎಂದು ಬುಡಾ ಅಧ್ಯಕ್ಷ ದೇವದಾಸ ಶೆಟ್ಟಿ ತಿಳಿಸಿದ್ದಾರೆ.
ಯಾವ ಕಾರ್ಮಿಕರನ್ನೂ ಹಸಿದ ಹೊಟ್ಟೆಯಲ್ಲಿ ಬಂಟ್ವಾಳದಿಂದ ಲಿಂಗಸುಗೂರವರೆಗೆ ಕಳುಹಿಸಿಲ್ಲ. ಈ ಟಿವಿ ಭಾರತದಲ್ಲಿ ಪ್ರಕಟವಾದ ವರದಿಯಲ್ಲಿ ಕಾರ್ಮಿಕನೋರ್ವ ಹೇಳಿದ ಅಂಶ ಸರಿಯಲ್ಲ, ಬಂಟ್ವಾಳದಿಂದ ಅವರಿಗೆ ಅತ್ಯಂತ ಗೌರವಪೂರ್ವಕವಾಗಿ ಸರ್ಕಾರದ ನಿರ್ದೇಶನದ ಜೊತೆಗೆ ಶಾಸಕ ರಾಜೇಶ್ ನಾಯ್ಕ್ ಅವರ ವೈಯಕ್ತಿಕ ನೆಲೆಯಲ್ಲಿ ಊಟ, ಉಪಚಾರಗಳನ್ನು ಒದಗಿಸಿ ಕಳುಹಿಸಲಾಗಿದೆ ಎಂದು ಈ ಸಂದರ್ಭ ಜೊತೆಯಲ್ಲಿದ್ದ ಬಂಟ್ವಾಳ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದೇವದಾಸ ಶೆಟ್ಟಿ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿದ್ದಾರೆ.
ಗದಗಕ್ಕೆ 125, ಬಾಗಲಕೋಟೆಗೆ 252, ಕೊಪ್ಪಳಕ್ಕೆ 88, ವಿಜಯಪುರಕ್ಕೆ 90 ಮತ್ತು ರಾಯಚೂರಿಗೆ 69 ಮಂದಿಯನ್ನು ಕಳುಹಿಸಲಾಗಿದೆ. ಇದರ ನೇರ ಉಸ್ತುವಾರಿಯನ್ನು ಬಂಟ್ವಾಳ ಶಾಸಕ ಯು. ರಾಜೇಶ್ ನಾಯ್ಕ್ ಕೈಗೊಂಡಿದ್ದರು. ಈ ವೇಳೆ ಸಹಾಯಕ ಕಮೀಷನರ್, ತಹಸೀಲ್ದಾರ್, ತಾಪಂ ಇಒ ಜೊತೆಗೆ ಬಂಟ್ವಾಳದ ತಂಡವೇ ಜೊತೆಗಿತ್ತು. ಸ್ಥಳೀಯ ಹೋಟೆಲ್ ಮಾಲೀಕರು ಕುಡಿಯುವ ನೀರಿನ ಬಾಟಲ್, ಪಲಾವ್, ಉಪ್ಪಿಟ್ಟು ಒದಗಿಸಿದರು. ಅಲ್ಲಿದ್ದ ಪುಟ್ಟ ಮಕ್ಕಳಿಗೆ ಚಾಕೊಲೇಟ್ ಸಹಿತ ಒದಗಿಸಲಾಯಿತು.
ಎಲ್ಲಾ ವಾಹನಗಳು ತೆರಳುವಾಗ ರಾತ್ರಿ 2 ಗಂಟೆ ಆಗಿತ್ತು. ಯಾರೊಬ್ಬರೂ ಹಸಿದ ಹೊಟ್ಟೆಯಲ್ಲಿ ಇರಲಿಲ್ಲ. ಎಲ್ಲರಿಗೂ ಆರಂಭದಲ್ಲೇ ಕುಡಿಯುವ ನೀರು ಒದಗಿಸಿದ್ದರೆ, ಬಸ್ಸಿನಲ್ಲೂ ಸಂಚರಿಸುವಾಗ ತೊಂದರೆಯಾಗದಂತೆ ನೀರು ಬಿಸ್ಕತ್ ಒದಗಿಸಲಾಗಿತ್ತು. ಮೊದಲೇ ಅವರಿಗೆ ನಿಗದಿತ ಜಾಗಕ್ಕೆ ತಲುಪಿಸಲು ಸರ್ಕಾರದ ನಿಯಮಾವಳಿ ಪ್ರಕಾರ ಸೂಚಿಸಲಾಗಿತ್ತು. ಇನ್ನು ಮಧ್ಯೆ ಎಲ್ಲಿಯೂ ನಿಲ್ಲಿಸಬಾರದು ಎಂದು ಹೇಳಿ, ವೈದ್ಯರನ್ನು ಕರೆದು ಮೆಡಿಕಲ್ ಸರ್ಟಿಫಿಕೇಟ್ ಮಾಡಿಸಲಾಗಿತ್ತು.
ಇನ್ನು ಬಸ್ಸಿನಲ್ಲೂ ಸಾಮಾಜಿಕ ಅಂತರದಲ್ಲೇ ಕೂರಿಸಲಾಗಿತ್ತು. ಜೊತೆಗೆ ಪ್ರತಿಯೊಬ್ಬರಿಗೂ 10 ರೂ ಮಾಸ್ಕ್ ನೀಡಲಾಗಿತ್ತು ಎಂದು ಪ್ರತಿಕ್ರಿಯಿಸಿದರು. ಎಲ್ಲರನ್ನೂ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ರಾತ್ರಿ 2 ಗಂಟೆವರೆಗೆ ಇದ್ದು, ಗೌರವ ಪೂರ್ವಕವಾಗಿ ಕಳುಹಿಸಿಕೊಟ್ಟಿದ್ದು, ಇದಲ್ಲದೆ ಅವರು ಕೂಲಿ ಮಾಡುವ ಜಾಗದ ಮಾಲಿಕರೂ ವೈಯಕ್ತಿಕ ಧನಸಹಾಯ ಒದಗಿಸಿದ್ದರು ಎಂದು ಹೇಳಿದರು.