ಚಿಕ್ಕಮಗಳೂರು: ಇಲ್ಲಿನ ಜಿಲ್ಲಾ ಕ್ರೀಡಾಗಣದಲ್ಲಿ ನಡೆದ ಸಿಎಎ ಪ್ರತಿಭಟನಾ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾನು ಮನೆಯಲ್ಲೇ ಹುಟ್ಟಿರೋದು, ಆಸ್ಪತ್ರೆಯಲ್ಲಿ ಹುಟ್ಟಿಲ್ಲ. ನಮ್ಮಪ್ಪ ಹಾಗೂ ಅವ್ವನದು ಹುಟ್ಟಿದ ದಿನ ನನಗೆ ಹೇಗೆ ಗೊತ್ತು. ನನ್ನದೇ ಹುಟ್ಟಿದ ದಿನ ನನಗೆ ಗೊತ್ತಿಲ್ಲ. ಇನ್ನು ಅಪ್ಪ-ಅವ್ವನದು ಹೇಗೆ ತಂದು ಕೊಡಲಿ. ಅವರದ್ದು ಇಲ್ಲಾ ಅಂದ್ರೆ ನನ್ನನ್ನು ಡೌಟ್ಫುಲ್ ಅಂತ ಮಾಡುತ್ತೀರಾ ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ರು. ಮೇಷ್ಟ್ರು ಬರೆದುಕೊಂಡಿದ್ದರು, ಅದನ್ನೇ ನಾನು ಡೇಟ್ ಆಫ್ ಬರ್ತ್ ಅಂತ ಹೇಳಿದ್ದೆ. ನಾನು ನೇರವಾಗಿ ಐದನೇ ತರಗತಿ ಸೇರಿಕೊಂಡವನು. ನಮ್ಮಪ್ಪ ನನ್ನನ್ನು ನೇರವಾಗಿ ಐದನೇ ತರಗತಿಗೆ ಸೇರಿಸಿದ್ದರು. ಆ ರಾಜಪ್ಪ ಮೇಷ್ಟ್ರು ಪಾಪ ನನ್ನನ್ನ ಅಡ್ಮೀಷನ್ ಮಾಡಿಕೊಳ್ಳದಿದ್ದರೆ ನಾನು ಲಾಯರ್ ಆಗ್ತಿರಲಿಲ್ಲ, ಇಲ್ಲಿ ಭಾಷಣ ಕೂಡಾ ಮಾಡ್ತಿರಲಿಲ್ಲ. ಸಿಎಂ ಆಗಲು ಸಾಧ್ಯವೇ ಆಗ್ತಿರಲಿಲ್ಲ ಎಂದರು.
ಸಂವಿಧಾನ ರಚನೆ ಬಗ್ಗೆ ಹುಟ್ಟಿಕೊಂಡಿರೋ ವಿವಾದದ ಬಗ್ಗೆ ಮಾತನಾಡಿದ ಅವರು, ಭಾರತೀಯ ಜನತಾ ಪಾರ್ಟಿಯವರೇ, ಸಂವಿಧಾನ ತಿರುಚಲು ಹೊರಟ್ಟಿದ್ದೀರಲ್ಲ ನಿಮಗೆ ನಾಚಿಕೆ ಆಗಲ್ವಾ? ಮಾತೆತ್ತಿದರೆ ಭಾರತ ಮಾತೆ ಅಂತೀರಾ. ಭಾರತ ಮಾತೆ ಇದೇನಾ ಹೇಳಿಕೊಟ್ಟಿರೋದು. ಇನ್ಮುಂದೆ ಅವರಿಗಿಂತ ಜೋರಾಗಿ ಭಾರತ ಮಾತೆ ಎಂದು ನಾವು-ನೀವು ಹೇಳೋಣ ಎಂದು ನೆರೆದಿದ್ದವರಿಗೆ ಸಲಹೆ ನೀಡಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವತ್ತೇ ಎಚ್ಚರಿಕೆ ಕೊಟ್ಟು ಹೋಗಿದ್ದಾರೆ. ಈ ಸಂವಿಧಾನ ಫೇಲಾದ್ರೆ ಅದು ನೇಚರ್ನಿಂದ ಆಗೋದಲ್ಲ, ಈ ದೇಶದ ಮತಾಂಧರಿಂದ ಎಂದು. ಸಿಎಎ ಹಾಗೂ ಎನ್ಆರ್ಸಿ ಯಾವ ಕಾನೂನುಗಳನ್ನು ಈ ದೇಶದಲ್ಲಿ ಜಾರಿ ಮಾಡಲು ಸಾಧ್ಯವಿಲ್ಲ ಎಂದು ಗುಡುಗಿದರು.