ETV Bharat / state

ಚಿಕ್ಕಮಗಳೂರಿನಲ್ಲಿ ರೌಡಿಶೀಟರ್​ ಕಾಲಿಗೆ ಪೊಲೀಸರಿಂದ ಗುಂಡೇಟು

author img

By ETV Bharat Karnataka Team

Published : Oct 30, 2023, 4:52 PM IST

Updated : Oct 30, 2023, 5:23 PM IST

ಕಾಫಿನಾಡಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದ ರೌಡಿ ಶೀಟರ್​ ಕಾಲಿಗೆ ಪೊಲೀಸರು ಫೈರಿಂಗ್ ಮಾಡಿದ್ದಾರೆ.

ರೌಡಿ ಶೀಟರ್​ ಪೂರ್ಣೇಶ್
ರೌಡಿ ಶೀಟರ್​ ಪೂರ್ಣೇಶ್

ಚಿಕ್ಕಮಗಳೂರು: ಆರೋಪಿಯನ್ನು ಬಂಧಿಸಲು ಹೋದ ವೇಳೆ ಪೊಲೀಸರ ಮೇಲೆ ಚಾಕುವಿನಿಂದ ಹಲ್ಲೆಗೆ ಯತ್ನಿಸಿದ ರೌಡಿ ಶೀಟರ್ ಮೇಲೆ ಪೊಲೀಸರು ಫೈರಿಂಗ್ ಮಾಡಿರುವ ಘಟನೆ ಜಿಲ್ಲೆಯಲ್ಲಿ ಇಂದು ನಡೆದಿದೆ.

ಎನ್​ಆರ್​ಪುರ ತಾಲೂಕಿನ ಬಾಳೆ ಹೊನ್ನೂರಿನಲ್ಲಿ ಈ ಘಟನೆ ನಡೆದಿದೆ. ಪೂರ್ಣೇಶ್ ಎಂಬ ರೌಡಿ ಶೀಟರ್​ ಮೇಲೆ ಹಲವಾರು ಕೇಸ್​ಗಳಿದ್ದು, ಕೋರ್ಟ್​ಗೆ ಹಾಜರಾಗುವಂತೆ ವಾರೆಂಟ್ ಜಾರಿ ಮಾಡಲಾಗಿತ್ತು. ಆದರೆ ಪೂರ್ಣೇಶ್ ತಲೆಮರೆಸಿಕೊಂಡು ಓಡಾಡುತ್ತಿದ್ದ. ಇಂದು ಬೆಳಗ್ಗೆ 6:15 ಸುಮಾರಿಗೆ ಬಾಳೆಹೊನ್ನೂರು ಪಿಎಎಸ್​ಐ ದಿಲೀಪ್ ಕುಮಾರ್ ನೇತೃತ್ವದಲ್ಲಿ ಬಂಧಿಸಲು ತೆರಳಿದ್ದು, ಸೆರೆಂಡರ್ ಆಗುವಂತೆ ಸೂಚಿಸಿದ್ದಾರೆ.

ಆದರೆ ಪೂರ್ಣೇಶ್ ಪೊಲೀಸರ ಮೇಲೆಯೇ ಚಾಕುವಿನಿಂದ ಹಲ್ಲೆ ಮಾಡಲು ಯತ್ನಿಸಿದ್ದಾನೆ. ಗಾಳಿಯಲ್ಲಿ ಎರಡು ಸುತ್ತು ಗುಂಡು ಹೊಡೆದರೂ ಮಾತು ಕೇಳದ ಪೂರ್ಣೇಶ್ ಕಾಲಿಗೆ ಸಬ್ ಇನ್ಸ್​ಪೆಕ್ಟರ್​ ದಿಲೀಪ್ ಫೈರಿಂಗ್ ಮಾಡಿದ್ದಾರೆ. ರೌಡಿಯಿಂದ ಹಲ್ಲೆಗೊಳಗಾದ ಪೇದೆ ಮಂಜುನಾಥ್​ರನ್ನು ಬಾಳೆ ಹೊನ್ನೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನು, ಪೊಲೀಸರಿಂದ ಗುಂಡು ತಿಂದ ರೌಡಿ ಶೀಟರ್ ಪೂರ್ಣೇಶ್​ನನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಟೆ ವಿಕ್ರಂ, ಕೊಪ್ಪ ಡಿವೈಎಸ್​ಪಿ ಅನಿಲ್ ಮಹದಾಸ್ ಭೇಟಿ ನೀಡಿದ್ದಾರೆ. ಪೂರ್ಣೇಶ್ ಮೇಲೆ 4 ಕೊಲೆ ಯತ್ನದ ಕೇಸ್ ಸೇರಿದಂತೆ ಒಟ್ಟು 8 ಕೇಸ್​ಗಳು ಇವೆ. ಕೋರ್ಟ್​ಗೆ ಹಾಜರಾಗುವಂತೆ ವಾರೆಂಟ್ ಜಾರಿ ಮಾಡಲಾಗಿತ್ತು. ಆದರೆ ಪೂರ್ಣೇಶ್ ದೊಡ್ಡ ಮರಗಳ ಮೇಲೆ, ಕಾಡು, ಕಾಫಿ ತೋಟದಲ್ಲಿ ಅಡಗಿ ಕುಳಿತಿರುತ್ತಿದ್ದ. ಈ ಕುರಿತು ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಪ್ರಕರಣ.. ಕೋಲಾರದಲ್ಲೂ ಅಕ್ಟೋಬರ್​ 27 ರಂದು ತಪ್ಪಿಸಿಕೊಳ್ಳುತ್ತಿದ್ದ ಇಬ್ಬರು ಆರೋಪಿಗಳ ಕಾಲುಗಳಿಗೆ ಪೊಲೀಸರು ಗುಂಡು ಹಾರಿಸಿದ್ದರು. ಜಿಲ್ಲೆಯಲ್ಲಿ ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳಿಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆತರುವ ಸಂದರ್ಭದಲ್ಲಿ ಪೊಲೀಸರು ತಾಲೂಕಿನ ಸಂಗೊಂಡಹಳ್ಳಿ ಬಳಿ ಶೌಚಾಲಯಕ್ಕೆ ನಿಲ್ಲಿಸಿದ್ದರು. ಆದರೆ ಈ ಸಂದರ್ಭದಲ್ಲಿ ಆರೋಪಿಗಳು ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದು ಆರೋಪಿಗಳನ್ನು ಹಿಡಿಯುವ ಸಂದರ್ಭದಲ್ಲಿ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದರು. ಹೀಗಾಗಿ ಪೊಲೀಸರು ಇಬ್ಬರ ಕಾಲಿಗೆ ಗುಂಡು ಹಾರಿಸಿದ್ದರು. ಘಟನೆಯಲ್ಲಿ ಮೂವರು ಪೊಲೀಸ್​ ಸಿಬ್ಬಂದಿ ಸಹ ಗಾಯಗೊಂಡಿದ್ದರು. ಪೊಲೀಸ್​ ಸಿಬ್ಬಂದಿ ಮತ್ತು ಆರೋಪಿಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.

ಇದನ್ನೂ ಓದಿ: ಆನೇಕಲ್: ನಿವೇಶನ ವಿವಾದ ಹಿನ್ನೆಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ವ್ಯಕ್ತಿ ಹತ್ಯೆ

Last Updated : Oct 30, 2023, 5:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.