ಬೆಂಗಳೂರು: ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರವಾದ ಶ್ರೀಹರಿಹರಪುರದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀಶಾರದಾ ಪರಮೇಶ್ವರಿ ದೇಗುಲಗಳ ಪುನಃಪ್ರತಿಷ್ಠೆ ಹಾಗೂ ಮಹಾಕುಂಭಾಭಿಷೇಕ ಮಹೋತ್ಸವ ಏಪ್ರಿಲ್ .10 ರಿಂದ 24ರವರೆಗೆ ನಡೆಯಲಿದೆ.
ಶ್ರೀಮದ್ಜಗದ್ಗುರು ಶಂಕರಾಚಾರ್ಯ ಶ್ರೀಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳ ಮಾರ್ಗದರ್ಶನ ಹಾಗೂ ದಿವ್ಯ ಸಾನ್ನಿಧ್ಯದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಏಪ್ರಿಲ್ 15ರಂದು ಶ್ರೀಗಳು ಶ್ರೀಶಾರದಾ ಪರಮೇಶ್ವರಿ ದೇವಿಗೆ ಮಹಾಕುಂಭಾಭಿಷೇಕ ನೆರವೇರಿಸಲಿದ್ದಾರೆ ಎಂದು ಮಹಾಕುಂಭಾಭಿಷೇಕ ಮಹೋತ್ಸವ ಸ್ವಾಗತ ಸಮಿತಿ ಅಧ್ಯಕ್ಷರು ಹಾಗೂ ಹೊರನಾಡು ಶ್ರೀಕ್ಷೇತ್ರದ ಧರ್ಮಕರ್ತ ಡಾ. ಭೀಮೇಶ್ವರ ಜೋಶಿ ತಿಳಿಸಿದರು.
ಸಹಸ್ರ ಚಂಡಿಕಾ ಯಾಗ, ಲಕ್ಷ ಮೋದಕ ಹವನ, ಕೋಟಿ ಕುಂಕುಮಾರ್ಚನೆ, ಹೋಮ, ಹವನ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಕಡೆಯ ದಿನ ತೆಪ್ಪೋತ್ಸವ ನಡೆಯಲಿದೆ. ಸಮಾರಂಭದಲ್ಲಿ ರಾಜಕೀಯ, ಧಾರ್ಮಿಕ ಕ್ಷೇತ್ರದ ಹಲವು ಪ್ರಮುಖರು ಆಗಮಿಸಲಿದ್ದಾರೆ. ಸುಮಾರು 15 ದಿನದ ಕಾರ್ಯಕ್ರಮ ಸಂದರ್ಭದಲ್ಲಿ ಗಣ್ಯರು ಆಗಮಿಸಲಿದ್ದಾರೆ.
ಚಿಕ್ಕಮಗಳೂರಿನಿಂದ ಶ್ರೀಮಠಕ್ಕೆ ಆಗಮಿಸಲು ಭಕ್ತರಿಗೆ ಅನುಕೂಲ ಕಲ್ಪಿಸಲು ವಿಶೇಷ ಬಸ್ ವ್ಯವಸ್ಥೆ ಕಲ್ಪಿಸುವಂತೆ ಸಾರಿಗೆ ಸಚಿವರಿಗೆ ಮನವಿ ಸಲ್ಲಿಸಿದ್ದು, ಸಮ್ಮತಿ ಸಿಕ್ಕಿದೆ. ಮಠದ ಸುತ್ತಲಿನ ಹತ್ತು ಕಿಮೀ ವ್ಯಾಪ್ತಿಯಲ್ಲಿ ಬರುವ ಭಕ್ತರ ಮನೆ, ಕಲ್ಯಾಣ ಮಂಟಪ, ಶಾಲೆ ಇತ್ಯಾದಿ ಸ್ಥಳಗಳಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ್ದೇವೆ. ವಸತಿ ಸಮಿತಿ ಇದರ ಜವಾಬ್ದಾರಿ ನೋಡಿಕೊಳ್ಳಲಿದೆ. ಮಠದ ಸುತ್ತಲಿನ ಎರಡು ಕಿಮೀ ವ್ಯಾಪ್ತಿಯಲ್ಲಿ ವಾಹನ ವ್ಯವಸ್ಥೆ ಮಾಡಲಾಗಿದೆ. ಕೋವಿಡ್ ನಿಯಮಾವಳಿಯನ್ನು, ಸಾಮಾಜಿಕ ಅಂತರ ಕಾಪಾಡುವ ಕಾರ್ಯಕ್ಕೆ ಒತ್ತು ಕೊಟ್ಟಿದ್ದೇವೆ ಎಂದರು.
ಬಳಿಕ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಹಾಗೂ ಕುಂಭಾಭಿಷೇಕ ಸ್ವಾಗತ ಸಮಿತಿ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಮಾತನಾಡಿ, ಹಿಂದೂ ಸಮಾಜದಲ್ಲಿ ಸಂಘರ್ಷಗಳು ಉಂಟಾಗಿರುವ ಪರಿಸ್ಥಿತಿಯಲ್ಲಿ ಸಮಾಜ ಒಗ್ಗೂಡುವ ಪರಿಸ್ಥಿತಿ ಇದೆ. ಪ್ರಪಂಚದಾದ್ಯಂತ ಹಿಂದೂಗಳು ತೊಂದರೆ ಅನುಭವಿಸುತ್ತಿರುವುದನ್ನು ಕಂಡಿದ್ದೇವೆ.
ಭಾರತ ದೇಶದಲ್ಲೇ ಅನೇಕ ಕಡೆ ಭಿನ್ನಾಭಿಪ್ರಾಯ, ತಪ್ಪು ಅಭಿಪ್ರಾಯಗಳು ಕಂಡುಬರುವುದನ್ನು ನೋಡಿದ್ದೇವೆ. ಈ ದೃಷ್ಟಿಯಲ್ಲಿ ಹರಿಹರಪುರ ಮಠದವರು ಜಾತಿ ಬೇಧವಿಲ್ಲದೆ ಸಮಸ್ತ ಹಿಂದೂ ಸಮಾಜದವರನ್ನು ಒಂದೆಡೆ ಸೇರಿಸುವ ಕಾರ್ಯ ಮಾಡುತ್ತಿದ್ದಾರೆ. ಸಮಸ್ತ ಹಿಂದೂ ಧರ್ಮ ಒಗ್ಗೂಡಿಸುವುದು ಹಾಗೂ ಸನಾತನ ಧರ್ಮಕ್ಕೆ ಹೆಚ್ಚಿನ ಶಕ್ತಿ ತುಂಬುವುದಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಗಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಹರಿಹರಪುರ ಮಠದ ಆಡಳಿತಾಧಿಕಾರಿ ಡಾ. ಬಿ.ಎಸ್.ರವಿಶಂಕರ್ ಉಪಸ್ಥಿತರಿದ್ದರು.
ಇದನ್ನೂ ಓದಿ: ರಫ್ತು ಸನ್ನದ್ಧತೆ ಶ್ರೇಯಾಂಕ ಬಿಡುಗಡೆ: ಕರ್ನಾಟಕಕ್ಕೆ 3ನೇ ಸ್ಥಾನ