ಚಿಕ್ಕಮಗಳೂರು : ಹರ್ನಿಯಾ ಆಪರೇಷನ್ ವೇಳೆ ಅಚಾತುರ್ಯದಿಂದಾಗಿ ತನ್ನ ಖಾಸಗಿ ಅಂಗವನ್ನ ಸರ್ಕಾರಿ ತಾಲೂಕು ಆಸ್ಪತ್ರೆ ವೈದ್ಯರು ಗಾಯಗೊಳಿದ್ದಾರೆ ಅಂತಾ ರೋಗಿಯೊಬ್ಬರು ಪೊಲೀಸ್ ಠಾಣೆಯ ಮೆಟ್ಟಿಲೇರಿರುವ ಘಟನೆ ನಡೆದಿದೆ.
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಯೋಗೇಂದ್ರ ಎಂಬ ರೋಗಿಯೊಬ್ಬರು ಮೂಡಿಗೆರೆ ಪೊಲೀಸ್ ಠಾಣೆಗೆ ದೂರು ನೀಡಿದವರು. ಹರ್ನಿಯಾ ಆಪರೇಷನ್ ಮಾಡಿಸಿಕೊಳ್ಳಲು ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ಯೋಗೇಂದ್ರ ದಾಖಲಾಗಿದ್ದರು. ದಿನಾಂಕ 12/10/2021ರಂದು ಆಪರೇಷನ್ಗೆ ಒಳಗಾಗಿದ್ದರು. ಆ ಸಂದರ್ಭದಲ್ಲಿ ತಮ್ಮ ಖಾಸಗಿ ಅಂಗಕ್ಕೆ ಪೈಪನ್ನ ಚುಚ್ಚಿ ಆಸ್ಪತ್ರೆಯ ಸಿಬ್ಬಂದಿ ತೀವ್ರವಾಗಿ ಗಾಯಗೊಳಿಸಿದ್ದಾರೆ ಅಂತಾ ಯೋಗೇಂದ್ರ ಅವರು ಆರೋಪಿಸಿದ್ದಾರೆ.
ಇದರಿಂದ ಸದ್ಯ ಅವರ ಖಾಸಗಿ ಅಂಗದಲ್ಲಿ ಊತ ಕಾಣಿಸಿಕೊಂಡು ಆರೋಗ್ಯದಲ್ಲಿ ಏರುಪೇರಾಗಿದೆ. ಈ ರೀತಿ ಯಾಕೆ ಮಾಡಿದ್ದೀರಿ ಅಂತಾ ವೈದ್ಯರನ್ನು ಕೇಳಿದ್ದಾರೆ. ಅದಕ್ಕೆ ವೈದ್ಯರು ಬೆಂಗಳೂರು ಅಥವಾ ಮಂಗಳೂರಿನ ಆಸ್ಪತ್ರೆಗೆ ತೆರಳುವಂತೆ ಹೇಳಿದ್ದಾರೆ. ಈ ಬಗ್ಗೆ ಆಸ್ಪತ್ರೆಯ ಮುಖ್ಯಾಧಿಕಾರಿ ಶಾಂಭವಿ ಅವರಿಗೆ ಹೇಳಿದ್ರೂ ಉಡಾಫೆ ವರ್ತನೆ ತೋರಿಸಿದ್ದಾರೆ ಎಂದು ರೋಗಿ ಯೋಗೇಂದ್ರ ಅವರು ಆರೋಪ ಮಾಡಿದ್ದಾರೆ.
ಖಾಸಗಿ ಅಂಗಕ್ಕೆ ಪೆಟ್ಟು ಬಿದ್ದಿದ್ದರಿಂದ ನೊಂದ ಯೋಗೇಂದ್ರ ಅವರು, ಮುಂದೆ ನನ್ನ ಆರೋಗ್ಯದಲ್ಲಿ ಏನಾದ್ರೂ ಏರುಪೇರು ಕಾಣಿಸಿದ್ರೆ, ಆಸ್ಪತ್ರೆ ಸಿಬ್ಬಂದಿಯೇ ಕಾರಣ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಅವರು ಉಲ್ಲೇಖಿಸಿದ್ದಾರೆ. ವೈದ್ಯರ ಯಡವಟ್ಟಿನಿಂದ ನರಳುತ್ತಿರುವ ಯೋಗೇಂದ್ರ ಅವರು ಮುಂದೆ ಏನಾಗುತ್ತೋ ಅನ್ನೋ ಆತಂಕದಲ್ಲಿಯೇ ಪ್ರತಿ ಕ್ಷಣಗಳನ್ನ ಕಳೆಯುವಂತಾಗಿದೆ.