ETV Bharat / state

ಚಿಕ್ಕಮಗಳೂರು: ನಿಧಿಗಾಗಿ ದಟ್ಟ ಕಾನನದ ನಡುವೆ ಆಳದ ಗುಂಡಿ ತೋಡಿದ ದುಷ್ಕರ್ಮಿಗಳು.. ಬೆಚ್ಚಿಬಿದ್ದ ಜನ್ರು

author img

By

Published : Jun 24, 2023, 11:04 PM IST

ನಿಧಿಗಾಗಿ ದುಷ್ಕರ್ಮಿಗಳು ಸುಮಾರು 15 ಅಡಿ ಅಗಲ ಮತ್ತು 35 ಅಡಿ ಆಳದ ಗುಂಡಿ ತೋಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.

black-magic-in-chikkamagalur
ನಿಧಿಗಾಗಿ 15 ಅಡಿ ಅಗಲ,35 ಅಡಿ ಆಳದ ಗುಂಡಿ : ವಾಮಾಚಾರ ಶಂಕೆ..ಬೆಚ್ಚಿಬಿದ್ದ ಜನ

ನಿಧಿಗಾಗಿ 15 ಅಡಿ ಅಗಲ,35 ಅಡಿ ಆಳದ ಗುಂಡಿ : ವಾಮಾಚಾರ ಶಂಕೆ..ಬೆಚ್ಚಿಬಿದ್ದ ಜನ

ಚಿಕ್ಕಮಗಳೂರು : ನಿಧಿಯ ಆಸೆಗಾಗಿ ದುಷ್ಕರ್ಮಿಗಳು ದಟ್ಟ ಕಾನನದ ನಡುವೆ ಸುಮಾರು 15 ಅಡಿ ಅಗಲ, 35 ಅಡಿ ಆಳದ ಗುಂಡಿ ತೋಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ದುಷ್ಕರ್ಮಿಗಳು ವಾಮಾಚಾರದಲ್ಲಿ ತೊಡಗಿರುವುದನ್ನು ಕಂಡ ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಗ್ರಾಮಸ್ಥರನ್ನು ಕಂಡ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ಈ ದುಷ್ಕರ್ಮಿಗಳು ಇಲ್ಲಿನ ದಟ್ಟ ಅರಣ್ಯವೊಂದರಲ್ಲಿ ನಿಧಿಯ ಆಸೆಗಾಗಿ ಕಸರತ್ತು ನಡೆಸಿದ್ದಾರೆ. ಇದಕ್ಕೂ ಮೊದಲು ದುಷ್ಕರ್ಮಿಗಳು ಸಿಡಿಲು ಬಡಿದಿದ್ದ ಮರವೊಂದನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದರ ಬಳಿಯಲ್ಲೇ 10 ಅಡಿ ಎತ್ತರದ ಹುತ್ತವನ್ನೂ ಹುಡುಕಿದ್ದಾರೆ. ಈ ಮೂಲಕ ಕಾಡಿನ ಮಧ್ಯೆ ವಾಮಾಚಾರಕ್ಕೆ ಮುಂದಾಗಿದ್ದಾರೆ.

ನಿಧಿಗಾಗಿ ವಾಮಾಚಾರ : ಈ ದುಷ್ಕರ್ಮಿಗಳು ವಾಮಾಚಾರ ನಡೆಸಲು ಸಕಲ ಸಿದ್ಧತೆಗಳನ್ನು ನಡೆಸಿದ್ದರು. ಒಂದು ಸಿಡಿಲು ಬಡಿದ ಮರದ ಪಕ್ಕದಲ್ಲಿ ಹುತ್ತ ಇದ್ದರೆ ಅದರ ಕೆಳಗೆ ನಿಧಿ ಇರುತ್ತದೆ ಎಂಬುದು ಕೆಲವರ ನಂಬಿಕೆ. ಈ ಹಿನ್ನೆಲೆ ಇಲ್ಲಿನ ಸಿಡಿಲು ಬಡಿದ ಮರ ಹಾಗೂ ಹುತ್ತ ಇದ್ದ ಜಾಗದಲ್ಲಿ ದುಷ್ಕರ್ಮಿಗಳು ನಿಧಿಗಾಗಿ ಶೋಧ ನಡೆಸಿದ್ದಾರೆ. ಅಲ್ಲದೆ ಸ್ಥಳದಲ್ಲಿ ದಿಗ್ಭಂಧನ ಹಾಕಿದ್ದಾರೆ. ಬಳಿಕ ಅಲ್ಲೇ 15 ಅಡಿ ಅಗಲ, 35 ಅಡಿ ಆಳದ ಬೃಹತ್​ ಗುಂಡಿ ತೋಡಿದ್ದಾರೆ. ಆದರೆ ಅಷ್ಟರಲ್ಲಿ ಸ್ಥಳೀಯರಿಗೆ ಅನುಮಾನ ಬಂದು ದಾಳಿ ನಡೆಸಿದ್ದಾರೆ. ಈ ಬಗ್ಗೆ ತಿಳಿಯುತ್ತಿದ್ದಂತೆ ನಿಧಿಗಳ್ಳರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಈ ದುಷ್ಕರ್ಮಿಗಳು ನಿಧಿಗಾಗಿ 15 ಅಡಿ ಅಗಲ, 35 ಅಡಿ ಆಳದ ಗುಂಡಿಯನ್ನು ಒಂದೇ ರಾತ್ರಿಗೆ ತೆಗೆದಿಲ್ಲ. ಸುಮಾರು ಎರಡು ತಿಂಗಳಿಂದ ಈ ಕಸರತ್ತು ನಡೆದಿದೆ. ಈ ಎರಡು ತಿಂಗಳ ಅವಧಿಯಲ್ಲಿ ಪ್ರತೀ ಅಮಾವಾಸ್ಯೆ ಹಾಗೂ ಹುಣ್ಣಿಮೆಯ ದಿನ ಗುಂಡಿ ಅಗೆದು ನಿಧಿ ಹುಡುಕಿದ್ದಾರೆ. ಹಳ್ಳಿಯಾಗಿದ್ದ ಕಾರಣ ಯಾರಾದರೂ ನೋಡುತ್ತಾರೆ ಎಂದು ರಾತ್ರಿ 10ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ಗುಂಡಿ ಅಗೆಯುತ್ತಿದ್ದರು. ಗುಂಡಿಯಿಂದ ಮಣ್ಣನ್ನು ತೆಗೆದು ಮೇಲೆ ಹಾಕಲು ರಾಟೆ ಮಾಡಿಕೊಂಡಿದ್ದರು. ನೆಲ ಅಗೆದು ಸುಸ್ತಾದಾಗ ಎಣ್ಣೆ ಪಾರ್ಟಿ ಕೂಡ ಮಾಡಿದ್ದರು. ಸ್ಥಳದಲ್ಲಿದ್ದ ಸಿಡಿಲು ಬಡಿದು ಒಣಗಿ ನಿಂತ ಮರ, 10 ಅಡಿ ಎತ್ತರದ ಹುತ್ತ, ಹುತ್ತದ ಬುಡದ ಹತ್ತಿ ಮರಕ್ಕೆ ದಿಗ್ಭಂಧನ, ಜೀವಂತ ಕೋಳಿ, ಎಳೆ ಕುಂಬಳಕಾಯಿ, ನಿಂಬೆಹಣ್ಣು, ಮೊಟ್ಟೆ, ಅರಿಶಿನ, ಕುಂಕುಮ ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ಇದನ್ನೂ ಓದಿ : ಅಮಾವಾಸ್ಯೆ ದಿನ ಸ್ಮಶಾನದಲ್ಲಿ ವಾಮಾಚಾರ ಶಂಕೆ : ಗ್ರಾಮಸ್ಥರಲ್ಲಿ ಆತಂಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.