ಟೊಮೆಟೊ ತೋಟದಲ್ಲಿ ವಿದ್ಯುತ್ ತಗುಲಿ ಯುವಕ ಸಾವು.. ಮಾಲೀಕನನ್ನು ದೊಣ್ಣೆಯಿಂದ ಹೊಡೆದು ಕೊಂದ ಕುಟುಂಬಸ್ಥರು!

author img

By

Published : Nov 25, 2021, 1:15 PM IST

Updated : Nov 25, 2021, 1:31 PM IST

parents murder to man, man killed in Chikkaballapur, Chikkaballapur crime news, young man died by electrical shock, ಮಾಲೀಕನನ್ನು ಕೊಂದ ಪೋಷಕರು, ವಿದ್ಯುತ್​ ತಗುಲಿ ಯುವಕ ಸಾವು, ಚಿಕ್ಕಬಳ್ಳಾಪುರದಲ್ಲಿ ವ್ಯಕ್ತಿಯ ಕೊಲೆ, ಚಿಕ್ಕಬಳ್ಳಾಪುರ ಅಪರಾಧ ಸುದ್ದಿ,

ತೋಟವೊಂದರಲ್ಲಿ ವಿದ್ಯುತ್ ತಗುಲಿ ಯುವಕ ಸಾವನ್ನಪ್ಪಿದ್ದು, ಆತನ ಪೋಷಕರು ತೋಟದ ಮಾಲೀಕನನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ.

ಚಿಕ್ಕಬಳ್ಳಾಪುರ: ಟೊಮೆಟೊ ತೋಟದಲ್ಲಿ ಮೇಯುತ್ತಿದ್ದ ಮೇಕೆ ಮರಿ ತರಲು ಹೋದ ಯುವಕ ಅಕ್ರಮವಾಗಿ ಅಳವಡಿಸಿದ್ದ ವಿದ್ಯುತ್​ ತಗುಲಿ ಸಾವನ್ನಪ್ಪಿದ್ದಾನೆ. ಇದನ್ನು ನೋಡಲು ಸ್ಥಳಕ್ಕೆ ಧಾವಿಸಿದ ಮಾಲೀಕನನ್ನು ಯುವಕನ ಕುಟುಂಬಸ್ಥರು ದೊಣ್ಣೆಗಳಿಂದ ಹೊಡೆದು ಕೊಲೆ ಮಾಡಿದ್ದಾರೆ. ಜಿಲ್ಲೆಯ ಗೌರಿಬಿದನೂರು ತಾಲೂಕಿನ ಚರುಕುಮಾಟೇನಹಳ್ಳಿಯಲ್ಲಿ ಘಟನೆ ನಡೆದಿದೆ.

ವಸಂತ್ ರಾವ್ (29) ಮೃತ ಯುವಕ ಹಾಗೂ ತೋಟದ ಮಾಲೀಕ ಅಶ್ವತ್ಥ ರಾವ್ (47) ಕೊಲೆಯಾದ ವ್ಯಕ್ತಿ ಎಂದು ತಿಳಿದುಬಂದಿದೆ. ಕಳೆದ ತಿಂಗಳಿಂದ ಅಶ್ವತ್ಥ ರಾವ್ ಹಾಗೂ ವಸಂತ್ ರಾವ್ ಕುಟುಂಬಗಳ ಮಧ್ಯೆ ವಾಗ್ವಾದಗಳು ನಡೆಯುತ್ತಿದ್ದವು. ಇದರಿಂದ ಬೇಸತ್ತಿದ್ದ ಗ್ರಾಮಸ್ಥರು ಮಧ್ಯ ಪ್ರವೇಶಿಸಿ ಸಂಧಾನ ಮಾಡಿದ್ದರು. ಆದರೆ ಅಶ್ವತ್ಥ ರಾವ್ ತೋಟದ ಪಕ್ಕದಲ್ಲಿಯೇ ಕುರಿ ಮೇಕೆ ಶೆಡ್ ಹಾಕಿದ್ದರು. ಸದ್ಯ ಟೊಮೆಟೊ ಬೆಳೆ ಹಾಕಿದ್ದು, ಈಗ ಟೊಮೆಟೊಗೆ ಬಂಗಾರದ ಬೆಲೆ ಬಂದಿದೆ.

ಟೊಮೆಟೊ ತೋಟದ ಮಾಲೀಕನನ್ನು ದೊಣ್ಣೆಯಿಂದ ಹೊಡೆದು ಕೊಂದ ಮೃತ ಯುವಕನ ಪೋಷಕರು

ಮೇಕೆ ಮರಿಗಳು ಸೇರಿದಂತೆ ಪ್ರಾಣಿಗಳು ಟೊಮೆಟೊ ತೋಟಕ್ಕೆ ನುಗ್ಗುತ್ತಿದ್ದ ಹಿನ್ನೆಲೆ ಮಾಲೀಕ ಅಶ್ವತ್ಥ ರಾವ್ ತೋಟಕ್ಕೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಅಳವಡಿಸಿದ್ದರು. ಇಂದು ಮುಂಜಾನೆ ಮೇಕೆ ಮರಿಯೊಂದು ಟೊಮೆಟೊ ತೋಟದ ಬಳಿ ಹೋಗಿದ್ದು, ಮರಿ ತರಲು ವಸಂತ ರಾವ್​ ಹೋದಾಗ ತೋಟಕ್ಕೆ ಅಕ್ರಮವಾಗಿ ಅಳವಡಿಸಿದ್ದ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಘಟನೆಯ ಬಳಿಕ ವಸಂತ ರಾವ್ ಕುಟುಂಬಸ್ಥರು ಅಶ್ವತ್ಥ ರಾವ್ ಆಗಮನಕ್ಕೆ ಕಾಯುತ್ತಿದ್ದರು. ಸುದ್ದಿ ತಿಳಿದಾಕ್ಷಣ ಸ್ಥಳಕ್ಕೆ ಧಾವಿಸಿದ ಅಶ್ವತ್ಥ ರಾವ್​​ ಮೇಲೆ ವಸಂತ​ ರಾವ್​ ಕುಟುಂಬಸ್ಥರು ಏಕಾಏಕಿ ದೊಣ್ಣೆಗಳಿಂದ ಹೊಡೆದು ಹಲ್ಲೆ ಮಾಡಿದ್ದಾರೆ. ಕೂಡಲೇ ಗ್ರಾಮಸ್ಥರು ಮಧ್ಯ ಪ್ರವೇಶಿಸಿ ಮಾಲೀಕ ಅಶ್ವತ್ಥ ರಾವ್​ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸುವ ವೇಳೆ ಮೃತಪಟ್ಟಿದ್ದಾರೆ‌. ಗ್ರಾಮದಲ್ಲಿ ಬಿಗುವಿನ ವಾತಾವರಣ ಏರ್ಪಟ್ಟಿದ್ದು, ಪೊಲೀಸರು ಸರ್ಪಗಾವಲು ಹಾಕಿದ್ದಾರೆ.

ಸ್ಥಳಕ್ಕೆ ಇನ್ಸ್‌ಪೆಕ್ಟರ್ ಶಶಿಧರ್ ಹಾಗೂ ಪಿಎಸ್ಐ ವಿಜಯ್ ಕುಮಾರ್ ಭೇಟಿ ನೀಡಿ ಮೃತ ವಸಂತ ರಾವ್‌ ಮತ್ತು ಅಶ್ವಥ್​ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಂಚೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Last Updated :Nov 25, 2021, 1:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.