ಚಿಕ್ಕಬಳ್ಳಾಪುರ : ಜಿಲ್ಲಾದ್ಯಂತ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮೇಳ್ಯಾ ಕೆರೆ ಬಳಿ ಟ್ರಾಕ್ಟರ್ ಸೇರಿದಂತೆ ಮೂರು ಬೈಕ್ಗಳು ನೀರಿನಲ್ಲಿ ಕೊಚ್ಚಿಕೊಂಡ ಹೋದ ಘಟನೆ ನಿನ್ನೆ ನಡೆದಿದೆ. ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಮೇಳ್ಯಾ ಕೆರೆ ಕೋಡಿ ಹರಿದು ಕೆರೆಯ ನೀರು ಮೇಳ್ಯಾ ಹಾಗೂ ಜಗರೆಡ್ಡಿಹಳ್ಳಿ ಮಾರ್ಗದ ರಸ್ತೆಯ ಮೇಲೆ ಹರಿಯುತ್ತಿದ್ದು ಕಳೆದ ರಾತ್ರಿಯಿಂದ ನೀರಿನ ರಭಸ ಹೆಚ್ಚಾಗಿದೆ.
ಹರಿಯುತ್ತಿರುವ ನೀರಿನಲ್ಲಿ ರಸ್ತೆ ದಾಟಲು ಹೋದ ಟ್ರ್ಯಾಕ್ಟರ್ ಸಮೇತ ಚಾಲಕ ಕೊಚ್ಚಿ ಹೋಗಿದ್ದು, ಕೆಲ ಸಮಯ ದಿಕ್ಕು ತೋಚದೇ ಗ್ರಾಮಸ್ಥರು ಗಾಬರಿ ಪಡುವಂತಾಗಿದೆ. ಆದರೆ, ಅದೃಷ್ಟವಶಾತ್ ಟ್ರ್ಯಾಕ್ಟರ್ ಚಾಲಕ ಈಜಿ ದಡ ಸೇರಿಕೊಂಡು ಜೀವ ಉಳಿಸಿಕೊಂಡಿದ್ದಾನೆ. ನಿನ್ನೆ ಬೆಳಗ್ಗೆ ಇಬ್ಬರು ದ್ವಿಚಕ್ರ ವಾಹನ ಸವಾರರು ಸಹ ಇದೇ ಜಾಗದಲ್ಲಿ ಕೊಚ್ಚಿಕೊಂಡು ಹೋಗಿದ್ದು ಅವರು ಸಹ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಂಪೂರ್ಣ ಟ್ರ್ಯಾಕ್ಟರ್ ಹಾಗೂ ಎರಡು ಬೈಕ್ಗಳು ನೀರಿನಲ್ಲಿ ಮುಳುಗಡೆ ಆಗಿದ್ದು, ಬೈಕ್ಗಳನ್ನು ಮೇಲೆ ಎತ್ತಲು ಗ್ರಾಮಸ್ಥರು ಪ್ರಯತ್ನಪಟ್ಟಿದ್ದಾರೆ. ಈ ರಸ್ತೆಗೆ ಅಡ್ಡಲಾಗಿ ಬ್ಯಾರೀಕೇಡ್ ಹಾಕಿ ವಾಹನಗಳ ಸಂಚಾರ ಬಂದ್ ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ನೀರಿನ ಹರಿವಿನ ರಭಸ ತಿಳಿಯದೇ ರಸ್ತೆ ದಾಟಲು ಹೋದರೆ ಪ್ರಾಣಕ್ಕೆ ಸಂಚಕಾರವಿದ್ದು ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆ ತಾಲೂಕು ಆಡಳಿತಕ್ಕೆ ಮನವಿ ಮಾಡಿದ್ದಾರೆ.
ಕಳೆದ ಬಾರಿ ಮಳೆಗೆ ಮೇಳ್ಯಾ ಗ್ರಾಮದ ಕೆರೆಯ ಕಟ್ಟೆ ಒಡೆದು ಹೋಗಿತ್ತು. ಅದನ್ನು ರಿಪೇರಿ ಮಾಡಲಾಗಿದೆ. ಆದರೂ ಈಗ ಮತ್ತೆ ಕಟ್ಟೆ ಒಡೆದು ಹೋಗುವ ಆತಂಕ ಇದೆ. ಭಾರೀ ಪ್ರಮಾಣದ ನೀರು ಕೆರೆಯಲ್ಲಿ ಶೇಖರಣೆಯಾಗಿದ್ದು, ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಕೊಡಗಿನಲ್ಲಿ ಭೀಕರ ಮಳೆಗೆ ಮನೆ, ಸೇತುವೆಗಳು ಕುಸಿತ: ಜನರಿಗೆ ಜೀವಭಯ